ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರ ನಡುವೆ ಸಂಘರ್ಷಕ್ಕೆ ಯತ್ನ: ಆರೋಪ
ಚಿಕ್ಕಮಗಳೂರು, ಅಕ್ಟೋಬರ್ 15: ಜಿಲ್ಲೆಯಲ್ಲಿ ಸುಮಾರು 40 ಸಾವಿರ ಉದ್ದಿಮೆದಾರರಿದ್ದಾರೆ. ಒಂದೂವರೆ ಲಕ್ಷದಷ್ಟು ಕಾರ್ಮಿಕರಿದ್ದು, ಹೊರಜಿಲ್ಲೆ-ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಕೂಡ ಲಕ್ಷಕ್ಕಿಂತ ಹೆಚ್ಚಿದ್ದಾರೆ. ಎಲ್ಲಾ ಮಾಲೀಕರು ಹಾಗೂ ಕಾರ್ಮಿಕರ ಸಂಬಂಧ ಅತ್ಯುತ್ತಮವಾಗಿತ್ತು. ಈಗೀಗ ಕೆಲವರ ಚಿತಾವಣೆಯಿಂದ ಸಂಬಂಧದಲ್ಲಿ ಬಿರುಕು ಕಾಣುತ್ತಿದೆ ಎಂದು ಪರಿಸ್ಥಿತಿ ಬಗ್ಗೆ ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಳೆಹೊನ್ನೂರು ಸಮೀಪದ ಜೇನುಗದ್ದೆ ಕಾಫಿತೋಟದಲ್ಲಿ ನಡೆದ ಘಟನೆ ಬಗ್ಗೆ ಕಾಫಿ ಬೆಳೆಗಾರರು ಮಾತನಾಡಿ ಇದೊಂದು ಆಕಸ್ಮಿಕ ಪ್ರಕರಣ. ಚಿತಾವಣೆ ಮಾಡುವವರೇ ಸಮಸ್ಯೆಯನ್ನ ಬಗೆಹರಿಸಬಹುದಿತ್ತು. ಆದರೆ ಹಾಗೆ ಮಾಡಿಲ್ಲ. 14 ಜನ ತೋಟಕ್ಕೆ ಬಂದು 4 ತಿಂಗಳಾಗಿದೆ. ಮಾಲೀಕರಿಂದ 9 ಲಕ್ಷ ಮುಂಗಡವಾಗಿ ಹಣ ಪಡೆದಿದ್ದಾರೆ. ಮಾರ್ಚ್ ಆದ ಮೇಲೆ ಇದು ಮೂರನೇ ತೋಟ. ಲೈನ್ ಮನೆಯಲ್ಲಿದ್ದು ಕೆಲಸಕ್ಕೂ ಬರದೆ, ಹಣವನ್ನೂ ನೀಡದೆ ಇದ್ದರೆ ಮಾಲೀಕರು ತೋಟ ಉಳಿಸಿಕೊಳ್ಳುವುದು ಹೇಗೆ. ಹಣವನ್ನೂ ಪಡೆದಿದ್ದೀರಾ. ಕೆಲಸಕ್ಕೂ ಬರಲ್ಲ ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಹಲ್ಲೆ ಪ್ರಕರಣ; ದಲಿತ ಕಾರ್ಮಿಕರ ಮೇಲೂ ದೂರು, ಪ್ರತಿಭಟನೆ
ಮನೆ ಬಳಿ ಹೋದಾಗ ತಪ್ಪು ನಡೆದಿರಬಹುದು. ಎಲ್ಲವನ್ನೂ ಅವರೇ ವಿಡಿಯೋ ಮಾಡಿದ್ದಾರೆ. ಯಾವ ಮಾಲೀಕರು ಆ ರೀತಿ ನಡೆದುಕೊಳ್ಳುವುದಿಲ್ಲ. ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ ಎಂದಿದ್ದಾರೆ. ಶೇಕಡ 95ರಷ್ಟು ಕಾರ್ಮಿಕರು ಒಳ್ಳೆಯವರು. ಆದರೆ, 5ರಷ್ಟು ಜನ ಕೆಲವರ ಜೊತೆ ಸೇರಿ ಹೀಗೆ ಮಾಡುತ್ತಿದ್ದಾರೆ. ಅವರಿಂದ ನಾವು ಬೆಳೆದಿದ್ದೇವೆ. ನಮ್ಮಿಂದ ಅವರೂ ಬೆಳೆದಿದ್ದಾರೆ.
ಹೋದ ಕಡೆಗಳೆಲ್ಲಾ ಇದೆ ರೀತಿಯ ವ್ಯಾಜ್ಯ
ಇದೀಗ ಮಾಧ್ಯಮಗಳ ಮುಂದೆ ಬಂದಿರೋ ಕರ್ನಾಟಕ ರಾಜ್ಯ ಬೆಳೆಗಾರರ ಸಂಘ ಇದೆಲ್ಲಾ ಒಂದು ಕಟ್ಟುಕಥೆ ಅಂತಾ ಪ್ರತಿಕ್ರಿಯೆ ನೀಡಿದೆ. ಅಲ್ಲದೇ ಕಳೆದ ಒಂದು ವರ್ಷದಲ್ಲಿ ಈ ಕಾರ್ಮಿಕರು ನಾಲ್ಕು ಕಾಫಿ ತೋಟಗಳನ್ನ ಬದಲಾಯಿಸಿದ್ದಾರೆ. ಹೋದ ಕಡೆಗಳೆಲ್ಲಾ ಇದೆ ರೀತಿಯ ವ್ಯಾಜ್ಯಗಳನ್ನ ಮಾಡಿಕೊಂಡು ಮುಂಗಡವಾಗಿ ಪಡೆದ ಹಣವನ್ನ ಹಿಂತಿರುಗಿಸದೇ ತೋಟ ಬಿಟ್ಟು ಬರುತ್ತಿದ್ದಾರೆ ಎಂದು ಆರೋಪಿಸಿದೆ. ಅಲ್ಲದೇ ಹಲ್ಲೆಯಿಂದಾಗಿ ಗರ್ಭಪಾತವಾಗಿದೆ ಅಂತಾ ಮಹಿಳೆ ಹೇಳಿದ್ದಾರೆ, ಆದರೆ ಅದಕ್ಕೂ ಮುಂಚೆಯೇ ಎರಡು ವಾರಗಳ ಹಿಂದೆಯೇ ಮಿಸ್ ಕ್ಯಾರೇಜ್ ಆಗಿರೋ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದೆ ಅಂತಾ ಕಾಫಿ ಬೆಳೆಗಾರರ ಸಂಘ ಹೇಳಿದೆ.
ಸೌಜನ್ಯದಿಂದ ಕೆಲಸಕ್ಕೆ ಬರುವಂತೆ ಮನವಿ
ನಾಲ್ಕು ತಿಂಗಳ ಹಿಂದೆ 6 ಕುಟುಂಬಗಳ 14 ಜನರು ಜಗದೀಶ್ ಗೌಡ ಎಂಬುವರ ಕಾಫಿ ತೋಟಕ್ಕೆ ಬಂದಿದ್ದಾರೆ. ಹೀಗೆ ಬರುವಾಗ ಮುಂಗಡವಾಗಿ 9 ಲಕ್ಷ ತೆಗೆದುಕೊಂಡಿದ್ದಾರೆ, ಆದರೆ ಇತ್ತೀಚೆಗೆ ಇವರ ತೋಟದ ಕೆಲಸಕ್ಕೆ ಬಾರದೇ ಬೇರೆಯವರ ತೋಟದ ಕೆಲಸಕ್ಕೆ ಹೋಗುತ್ತಿದ್ದರು. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಈ ರೀತಿಯ ಕಥೆ ಕಟ್ಟಿದ್ದಾರೆ, ಅನೇಕ ಬಾರಿ ತುಂಬಾ ಸೌಜನ್ಯದಿಂದ ಕೆಲಸಕ್ಕೆ ಬರುವಂತೆ ಮನವಿ ಮಾಡಿದ್ದಾರೆ.
ಮಾಲೀಕರಿಗೆ ಕೆಟ್ಟ ಹೆಸರು ತರಲು ಪ್ರಯತ್ನ
ಕೊನೆಗೆ ಕ್ಯಾರೇ ಎನ್ನದಿದ್ದಾಗ ಜಗದೀಶ್ ಗೌಡ ಅವರು ಆವೇಶ ಕಳೆದುಕೊಂಡು ಮಾತನಾಡಿದ್ದಾರೆ ಹೌದು, ಆದ್ರೆ ಹಲ್ಲೆ ಮಾಡಿಲ್ಲ, ಕೂಡಿ ಹಾಕಿಲ್ಲ. ಅವರೇ ಬೀಗ ಹಾಕಿಕೊಂಡು ವಿಡಿಯೋ ಮಾಡಿಕೊಂಡು ಮಾಲೀಕರಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದಾರೆ ಅಂತಾ ಕಾಫಿ ಬೆಳೆಗಾರರ ಸಂಘ ಹೇಳಿದೆ. ಈ ಮಧ್ಯೆ ಕಾಫಿ ತೋಟದ ಮಾಲೀಕರ ವಿರುದ್ದ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇಷ್ಟಾದ್ರೂ ಕೂಡ ಆರೋಪಿಗಳನ್ನ ಇಲ್ಲಿಯವರೆಗೂ ಬಂಧಿಸಿಲ್ಲ ಅಂತಾ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಬಾಳೆಹೊನ್ನೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿವೆ.
ಯಾರನ್ನ ನಂಬೋದು, ಯಾರನ್ನ ಬಿಡೋದು
ಪೊಲೀಸರಿಗೂ ಇದು ಬಿಸಿಕಜ್ಜಾಯವಾಗಿದ್ದು ಯಾರನ್ನ ನಂಬೋದು, ಯಾರನ್ನ ಬಿಡೋದು ಅನ್ನೋ ಪೀಕಲಾಟ ಶುರುವಾಗಿದೆ. ಚಿಕ್ಕಮಗಳೂರು ಕಾಫಿ ಬೆಳೆಗಾರರ ಸಂಘದ ಜೊತೆ ರಾಜ್ಯ ಬೆಳೆಗಾರರ ಸಂಘ ಕೂಡ ಸಾಥ್ ನೀಡಿದ್ದು, ಈ ಬಗ್ಗೆ ನಾವು ಕೂಡ ಕಾನೂನು ಹೋರಾಟ ಮಾಡುವುದಾಗಿ ಹೇಳಿದೆ. ಒಟ್ಟಿನಲ್ಲಿ ಸತ್ಯಾಸತ್ಯತೆ ಏನು ಎಂಬುದರ ಬಗ್ಗೆ ಸೂಕ್ತ ತನಿಖೆಯ ಅವಶ್ಯವಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಅನ್ನೋದು ಎಲ್ಲರ ಆಶಯ.
ಆನ್ಲೈನ್ ಜ್ಯೋತಿಷಿ ನಂಬಿ ಒಂದು ಲಕ್ಷ ಕಳೆದುಕೊಂಡ ಚಿಕ್ಕಮಗಳೂರಿನ ಮಹಿಳೆ