ಚಿಕ್ಕಮಗಳೂರು: ತಾಯಿ ಚಿತೆಗೆ ಬೆಂಕಿ ಇಡಲೂ ಕೊರೊನಾವೈರಸ್ ಬಿಡಲಿಲ್ಲ
ಚಿಕ್ಕಮಗಳೂರು, ಜೂನ್ 19: ತಮ್ಮ ಜೀವಿತದ ಕೊನೆ ಘಳಿಗೆಯಲ್ಲಿ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಾರೆ, ನೋಡಿಕೊಳ್ಳದಿದ್ದರೂ ಪರವಾಗಿಲ್ಲ ಕೊನೆಗೆ ತಾವು ಸತ್ತಾಗ ನಮ್ಮ ಚಿತೆಗೆ ಮಗ ಬೆಂಕಿ ಇಡುತ್ತಾನೆ ಅಂತನಾದರೂ ಅಂದುಕೊಂಡಿರುತ್ತಾರೆ. ಆದರೆ ಕೊರೊನಾ ವೈರಸ್ ಮಗನಿಗೆ ತನ್ನ ತಾಯಿ ಸತ್ತಾಗ ಆಕೆಯ ಮುಖ ನೋಡುವುದಿರಲಿ ಆಕೆಯ ಚಿತೆಗೂ ಅಗ್ನಿ ಸ್ಪರ್ಶ ಮಾಡಲಾಗದ ಸ್ಥಿತಿಗೆ ತಂದೊಡ್ಡಿದೆ.
Recommended Video
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಢಣಾಯಕಾಪುರ ಗ್ರಾಮದ 70 ವರ್ಷದ ವೃದ್ಧೆಗೆ ಗುರುವಾರ ಕೊರೊನಾ ವೈರಸ್ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ನಂತರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಆದರೆ ವೃದ್ಧೆಯ ಸಂಪರ್ಕದಲ್ಲಿದ್ದ ಮಗನಿಗೂ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಹಿನ್ನೆಲೆ ಆತನನ್ನು ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ವೈರಸ್ ಸೋಂಕಿಗೆ ಕಾಫಿನಾಡಲ್ಲಿ ಮೊದಲ ಬಲಿ
ನಿನ್ನೆ ರಾತ್ರಿ ತಾಯಿ ಸಾವನ್ನಪ್ಪಿದ ನಂತರ ಮಗನು ಹೆತ್ತಮ್ಮನ ಮುಖ ನೋಡಲು ಸಹ ಆಗದೇ ಹಾಗೂ ಆಕೆಯ ಚಿತೆಗೆ ಬೆಂಕಿ ಸ್ಪರ್ಶಿಸಲೂ ಸಾಧ್ಯವಾಗದ ಪರಿಸ್ಥಿತಿಯನ್ನು ಕೊರೊನಾ ವೈಸರ್ ತಂದೊಡ್ಡಿದ್ದು ಮಾತ್ರ ದುರದೃಷ್ಟಕರ.
ಆತಂಕ ಹುಟ್ಟಿಸುತ್ತಿದೆ ವೃದ್ಧೆಯ ಟ್ರಾವೆಲ್ ಹಿಸ್ಟರಿ
ಕೊರೊನಾ ವೈರಸ್ ನಿಂದ 72 ವರ್ಷದ ವೃದ್ಧೆ ಸಾವನ್ನಪ್ಪಿದ ಪ್ರಕರಣ ಸಂಬಂಧ, ವೃದ್ಧ ಮಹಿಳೆಯ 52 ವರ್ಷದ ಮಗನಿಗೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
ಈಗ ವೃದ್ಧೆಯ ಟ್ರಾವೆಲ್ ಹಿಸ್ಟರಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಯ ಹುಟ್ಟಿಸಿದ್ದರೆ, ಇತ್ತ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಬೀರೂರು, ಅಜ್ಜಂಪುರ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಮೃತ ವೃದ್ಧೆಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಕೊರೊನಾ ವೈರಸ್ ಸೋಂಕು ತಗುಲಿತ್ತು ಎಂದು ಹೇಳಲಾಗುತ್ತಿದೆ.
ಅಜ್ಜಂಪುರದ ಖಾಸಗಿ ಆಸ್ಪತ್ರೆಯಲ್ಲಿ ವೃದ್ಧೆ ಚಿಕಿತ್ಸೆಗಾಗಿ ದಾಖಲು
ಚನ್ನಗಿರಿಯ ಕುಂಬಾರ ಬೀದಿಯಲ್ಲಿ ಮೃತ ವೃದ್ಧೆಯ ಮಗಳ ಮನೆಯಿದ್ದು, ವೃದ್ಧೆಯೂ ಮಗಳ ಮನೆಗೆ ತೆರಳಿದ್ದರು. ಅವರ ಎದುರು ಮನೆಯ 52 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿ ಶಿವಮೊಗ್ಗದಲ್ಲಿ ಮೃತರಾಗಿದ್ದರು. ವೃದ್ಧೆಯಿಂದ ಕುಂಬಾರ ಬೀದಿಯನ್ನು ಸೀಲ್ ಡೌನ್ ಮಾಡಲಾಗಿತ್ತು.
ಚನ್ನಗಿರಿಯಲ್ಲಿ ವೃದ್ಧೆಗೆ ಆರೋಗ್ಯ ಸಮಸ್ಯೆ ಕಾಡಿದ್ದು, ಚನ್ನಗಿರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿ ವಾಸಿಯಾಗದ ಕಾರಣ ಬೀರೂರಿಗೆ ಬಂದು ಸೋಮವಾರ ಪರಿಚಯವಿದ್ದ, ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ್ದಾರೆ. ನಂತರ ಬೀರೂರು, ಅಜ್ಜಂಪುರದ ಖಾಸಗಿ ಆಸ್ಪತ್ರೆಯಲ್ಲಿ ವೃದ್ಧೆ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವು
ನಂತರ ಬುಧವಾರ ಸಂಜೆ ಸುಮಾರಿಗೆ ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಗೆ ವೃದ್ಧೆಯನ್ನು ದಾಖಲು ಮಾಡಲಾಯಿತು. ಗುರುವಾರ ಸಂಜೆ ವೇಳೆಗೆ ಮೃತ ವೃದ್ಧೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ 12.30 ರ ಸುಮಾರಿಗೆ ಮೃತರಾಗಿದ್ದಾರೆ.
ಅಜ್ಜಂಪುರ, ಬೀರೂರಿನ ಖಾಸಗಿ ಆಸ್ಪತ್ರೆ ಮಾತ್ರವಲ್ಲದೇ, ಸರ್ಕಾರಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಮೃತ ವೃದ್ಧೆಗೆ ಒಟ್ಟು ಆರು ವೈದ್ಯರು ಹಾಗೂ ದಾದಿಯರು ಚಿಕಿತ್ಸೆ ನೀಡಿದ್ದರು. ಇವರಿಗೆ ಕೊರೊನಾ ವೈರಸ್ ಕಂಟಕ ಎದುರಾಗುವ ಸಾಧ್ಯತೆಯಿದೆ. ವೃದ್ಧೆಯ ಸಂಪರ್ಕದಲ್ಲಿದ್ದ ವೈದ್ಯರು, ದಾದಿಯರು ಕುಟುಂಬಸ್ಥರು ಸೇರಿದಂತೆ 35 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ವೃದ್ಧೆಯ ಮಗನ ಸಂಪರ್ಕದಲ್ಲಿ ಹಲವರು ಇದ್ದಾರೆ ಎಂದು ಹೇಳಲಾಗುತ್ತಿದೆ.
ದಾದಿಯರು, ವೈದ್ಯರಿಂದ ಸೋಂಕು ಹರಡುವ ಭೀತಿ
ಚಿಕ್ಕಮಗಳೂರು ಜಿಲ್ಲಾಡಳಿತವು ವೃದ್ಧೆ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡದೇ ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ. ಇದು ಅಜ್ಜಂಪುರ, ಬೀರೂರಿನಲ್ಲಿ ಆತಂಕಕ್ಕೆ ಕಾರಣವಾಗಿದೆ. ವೃದ್ಧೆಯ ಪ್ರಾಥಮಿಕ ಸಂಪರ್ಕದಲ್ಲಿದ ದಾದಿಯರು, ವೈದ್ಯರಿಂದ ಹೊರ ರೋಗಿಗಳಿಗೂ ಸೋಂಕು ಹರಡು ಸಾಧ್ಯತೆಯಿರುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೃದ್ಧೆಯ ಸಾವಿನ ವಿಷಯ ತಿಳಿಯುತ್ತಿದ್ದಂತೆ, ಢಣಾಯಕಪುರ ಗ್ರಾಮದಲ್ಲೂ ಹಲವರು ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ. ಮನೆಯಿಂದ ಹೊರ ಬರಲು ಗ್ರಾಮಸ್ಥರು ಹೆದರುತ್ತಿದ್ದು, ಗುರುವಾರ ತಡರಾತ್ರಿ ವೃದ್ಧೆಯ ಜಮೀನಿನಲ್ಲಿ ಜಿಲ್ಲಾಡಳಿತ ಅಂತ್ಯ ಸಂಸ್ಕಾರ ಮಾಡಿದೆ