ಮಾ.17ರಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ: 22,000 ನಿವೇಶನಗಳ ಹಕ್ಕುಪತ್ರ ವಿತರಣೆ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 22 ಸಾವಿರ ನಿವೇಶನಗಳನ್ನು ಬಡವರಿಗೆ ವಿತರಿಸಲು ಮಾರ್ಚ್ 17 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ, ಫೆಬ್ರವರಿ 28: ನೂತನ ತಾಲೂಕು ಮಂಚೇನಹಳ್ಳಿ ಒಂದರಲ್ಲಿಯೇ 5 ಸಾವಿರ ನಿವೇಶನ ನೀಡುತ್ತಿದ್ದು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 22 ಸಾವಿರ ನಿವೇಶನಗಳನ್ನು ಬಡವರಿಗೆ ವಿತರಿಸಲು ಮಾರ್ಚ್ 17 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಮಂಚೇನಹಳ್ಳಿ ತಾಲೂಕಿನ ಹಳೇಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದಲೇ ನಿವೇಶನಗಳ ಹಕ್ಕುಪತ್ರ ವಿತರಣೆ ಮಾಡಲಾಗುವುದು. ನಿವೇಶನದ ಜೊತೆಗೆ ಮನೆಗಳ ನಿರ್ಮಾಣದ ಆದೇಶಪತ್ರಗಳನ್ನೂ ನೀಡಲಾಗುವುದು ಎಂದು ಅವರು ತಿಳಿಸಿದರು.

ಹಳೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 3 ಎಕರೆ ಭೂಮಿ ಗುರ್ತಿಸಲಾಗಿದ್ದು, ಇದರಲ್ಲಿ 107 ನಿವೇಶನ ನಿರ್ಮಾಣವಾಗಲಿದೆ, ಅದರ ಜೊತೆಗೆ ಮತ್ತೊಂದು ಪ್ರದೇಶದಲ್ಲಿ 3 ಎಕರೆ ಜಾಗ ಗುರ್ತಿಸಿದ್ದು, ಇದರಲ್ಲಿ 120 ನಿವೇಶನ ಆಗಲಿದೆ. ಜೊತೆಗೆ ಉಪ್ಪರಹಳ್ಳಿಯಲ್ಲಿ 9.20 ಎಕರೆ ಭೂಮಿ ಸೇರಿ ಒಟ್ಟು707 ನಿವೇಶನಗಳನ್ನು ಹಳೇಹಳ್ಳಿ ಗ್ರಾಪಂ ಒಂದರಲ್ಲಿಯೇ ವಿತರಿಸಲಾಗುವುದು ಎಂದರು.
ಈ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ನಿವೇಶನ ರಹಿತರ ಸಂಖ್ಯೆ 194 ಮಾತ್ರ ಇದ್ದು, ಇನ್ನೂ ನಿವೇಶನಗಳು ಉಳಿಯುವುದರಿಂದ ಗ್ರಾಪಂ ವ್ಯಾಪ್ತಿಯಲ್ಲಿರುವ ನಿವೇಶನ ರಹಿತ ಬಡವರನ್ನು ಗುರ್ತಿಸಿ, ಅವರಿಂದ ಅರ್ಜಿ ಪಡೆದು, ನಿವೇಶನ ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವ ಸುಧಾಕರ್ ಸೂಚಿಸಿದರು.

ಮೂರು ವರ್ಷಗಳ ಸತತ ಪರಿಶ್ರಮದಿಂದ ಬಡವರಿಗೆ ನಿವೇಶನ ನೀಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಹಳೇಹಳ್ಳಿ ಗ್ರಾಪಂಗೆ ವಿಶೇಷ ಒತ್ತು ನೀಡಲಾಗುವುದು, ಇದರ ಜೊತೆಗೆ ಬಸವ ವಸತಿ ಯೋಜನೆಯಡಿ ಸಾಮಾನ್ಯರಿಗೆ 125 ಮನೆಗಳನ್ನು ಇದೇ ಗ್ರಾಪಂ ವ್ಯಾಪ್ತಿಯಲ್ಲಿ ವಿತರಸಲಾಗುತ್ತಿದೆ. 125 ಕುಟುಂಬಗಳಿಗೆ ಮನೆ ಮತ್ತು 707 ಕುಟುಂಬಗಳಿಗೆ ನಿವೇಶನ ನೀಡುವ ಮೂಲಕ ಎಲ್ಲ ಬಡವರಿಗೂ ಸೂರು ಕಲ್ಪಿಸುವ ಕನಸು ನನಸಾಗಲಿದೆ ಎಂದು ಹೇಳಿದರು.
ಮಾರ್ಚ್ 17ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ 1.5 ಕೋಟಿ ಕಾರ್ಡುಗಳ ವಿತರಣೆ ಮಾಡುವ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯಲಿದ್ದು, ಇದರ ಜೊತೆಗೆ ವೈದ್ಯಕೀಯ ಕಾಲೇಜು ಉದ್ಘಾಟನೆ ಮತ್ತು 22 ಸಾವಿರ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.












Click it and Unblock the Notifications