ಸಿದ್ದರಾಮಯ್ಯ ಭವಿಷ್ಯ ಸುಧಾಕರ್ ಕೈಯಲ್ಲಿದೆ- ಸಚಿವ ಎಸ್.ಟಿ.ಸೋಮಶೇಖರ್
ಚಿಕ್ಕಬಳ್ಳಾಪುರ, ಜನವರಿ 10: ತಾವು ಸೇರಿದಂತೆ ರಾಜ್ಯದ 224 ಶಾಸಕರಲ್ಲಿ ಯಾವ ಕ್ಷೇತ್ರದಲ್ಲಿಯೂ ಮಾಡಲು ಸಾಧ್ಯವಾಗದ ಸಾಹಸವನ್ನು ಸುಧಾಕರ್ ಅವರು ಮಾಡಿ, ಯಶಸ್ವಿ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ಪ್ರಶಂಸಿಸಿದರು.
ಚಿಕ್ಕಬಳ್ಳಾಪುರ ಉತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಆಹಾರ ಮೇಳ ಮತ್ತು ಮಾದರಿ ಗ್ರಾಮ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಆಹಾರ ಮೇಳ ಮತ್ತು ಫಲಪುಷ್ಪ ಪ್ರದರ್ಶನ ವ್ಯವಸ್ಥಿತವಾಗಿ ಮಾಡಲಾಗಿದೆ. ಜನ ಸಾಮಾನ್ಯರ ಮನಸ್ಸಿಗೆ ತಲುಪ ರೀತಿಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ನರೇಗಾ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಲ್ಲಿ ಈ ಪ್ರದರ್ಶನ ಯಶಸ್ವಿಯಾಗಿದೆ. ಸುಧಾಕರ್ ಅವರು ಸಚಿವರಾಗಿ ಮೂರು ವರ್ಷ ಆಗಿದೆ. ಇವರು ಸಚಿವರಾದ ನಂತರ ಸರ್ಕಾರದ ಯೋಜನೆಗಳು ಕ್ಷೇತ್ರಕ್ಕೆ ಮತ್ತು ಜಿಲ್ಲೆಗೆ ಅವರು ಮಾಡಿರುವ ಅಭಿವೃದ್ಧಿ ರಾಜ್ಯದ 224 ಕ್ಷೇತ್ರಗಳ ಯಾವುದೇ ಶಾಸಕರಿಂದ ಸಾಧ್ಯವಿಲ್ಲ ಎಂದು ಹೇಳಿದರು.
ಸುಧಾಕರ್ರನ್ನು ಹೊಗಳಿದ ಎಸ್.ಟಿ ಸೋಮಶೇಖರ್
ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರದರ್ಶಿಸುವ ಕೆಲಸ ಉತ್ಸವದಲ್ಲಿ ಯಶಸ್ವಿಯಾಗಿ ಆಗಿರುವುದು ಸಂತಸ ತಂದಿದೆ. ವಿಶ್ವಾಸದಿಂದ ಅವರನ್ನು ಜನರು ಶಾಸಕರು ಮಾಡಿದರೆ, ಸರ್ಕಾರ ನಂಬಿಕೆಯಿಂದ ಸಚಿವರನ್ನಾಗಿ ಮಾಡಿದೆ. ದೂರದೃಷ್ಟಿ ಇದ್ದರೆ ಏನೆಲ್ಲ ಮಾಡಬಹುದು ಎಂಬುದನ್ನು ಸುಧಾಕರ್ ಅವರು ಮಾಡಿ ತೋರಿಸಿದ್ದಾರೆ ಎಂದರು.
ಎರಡು ವರ್ಷ ಕೋವಿಡ್ ತೀವ್ರವಾಗಿ ಕಾಡುತ್ತಿದ್ದ ಕಾಲದಲ್ಲಿ ರಾಜ್ಯದ ಜನರ ಆರೋಗ್ಯ ಕಾಪಾಡುವಲ್ಲಿ ಸುಧಾಕರ್ ಯಶಸ್ವಿಯಾಗಿದ್ದಾರೆ. ರಾಜ್ಯದ ಜನತೆಗೆ ಎರಡು ಡೋಸ್ ಲಸಿಕೆ ನೀಡುವಲ್ಲಿ ಸಂಪೂರ್ಣ ಶ್ರಮ ವಹಿಸಿದ್ದಾರೆ, ನಮ್ಮ ಕ್ಲಿನಿಕ್ ಮೂಲಕ ಸಾರ್ವಜನಿಕರ ಸೇವೆಗೆ ಅವರು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಆಸ್ಪತ್ರೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಜನರ ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದಾರೆ ಎಂದು ಡಾ. ಕೆ ಸುಧಾಕರ್ ಅವರನ್ನು ಎಸ್.ಟಿ.ಸೋಮಶೇಖರ್ ಹೊಗಳಿದ್ದಾರೆ.
ಸುಧಾಕರ್ ತಮ್ಮ ಕ್ಷೇತ್ರವನ್ನು ಉತ್ತುಂಗದತ್ತ ಕೊಂಡೊಯ್ದಿದ್ದಾರೆ
ಮಾತು ಮುಂದುವರಿಸಿದ ಅವರು, ಜಿಲ್ಲೆ ಮಾಡುವುದು ಹೆಚ್ಚಲ್ಲ, ಅದನ್ನು ಅಭಿವೃದ್ಧಿ ಮಾಡುವುದು ಮುಖ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡಲು ಎದೆಗಾರಿಕೆ ಬೇಕು, ಅದು ಚಿಕ್ಕಬಳ್ಳಾಪುರ ಶಾಸಕರಿಗಿದೆ ಹಾಗಾಗಿಯೇ ಕೋವಿಡ್ ಸಂದರ್ಭದಲ್ಲಿ ರಾಜ್ಯಾದ್ಯಂತ ಓಡಾಡಬೇಕಾಗಿದ್ದರೂ ಕ್ಷೇತ್ರ ಮರೆಯದೆ ಅಭಿವೃದ್ಧಿಯಲ್ಲಿ ಕ್ಷೇತ್ರವನ್ನು ಉತ್ತುಂಗದತ್ತ ಕೊಂಡೊಯ್ದಿದ್ದಾರೆ ಎಂದರು.
ಮುಂದಿನ ಒಂದು ದಶಕದಲ್ಲಿ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಹೊಂದಿರುವ ದೂರದೃಷ್ಟಿಯ ರಾಜಕಾರಣಿ ಡಾ.ಕೆ. ಸುಧಾಕ-ರ್ ಆಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯ ಅವರಿಗಿದೆ. ಘಟಾನುಘಟಿಗಳನ್ನು ಎದುರು ಹಾಕಿಕೊಂಡು ಅವರು ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ತಂದರು, ಅನೇಕರನ್ನು ವಿರೋಧ ಮಾಡಿಕೊಂಡು ಮನೆಗಳನ್ನು ಕೊಟ್ಟಿದ್ದಾರೆ, ಅದೇ ರೀತಿಯಲ್ಲಿ ಘಟಾನುಘಟಿಗಳನ್ನು ಎದುರು ಹಾಕಿಕೊಂಡು ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಪ್ರತ್ಯೇಕಿಸಲು ಶ್ರಮಿಸುತ್ತಿದ್ದಾರೆ ಎಂದರು.
ಸುಧಾಕರ್ ಮನಸು ಮಾಡಿದರೆ ಸಿದ್ದರಾಮಯ್ಯಗೆ ಸೋಲು
ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ಪ್ರಸ್ತುತ ಸುಧಾಕರ್ ಅವರ ಕೈಯಲ್ಲಿದೆ ಸುಧಾಕರ್ ಮನಸ್ಸು ಮಾಡಿದರೆ, ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಲಿದ್ದಾರೆ ಎಂದು ಹೇಳಿದರು.
ಸುಧಾಕರ್ ಅವರ ನಡೆಯ ಕಾರಣದಿಂದಲೇ ಸಿದ್ದರಾಮಯ್ಯ, ಹೈಕಮಾಂಡ್ ಅನುಮತಿ ಬೇಕು ಎಂದಿದ್ದಾರೆ. ಅವರಿಗೆ ಸ್ಪಷ್ಟತೆ ಇಲ್ಲ, ಹಾಗಾಗಿಯೇ ಬಾದಾಮಿ, ಚಾಮರಾಜಪೇಟೆ, ಕೊಪ್ಪಳ ಎಂದು ತಿರುಗಾಡಿದರು. ಈಗ ಅಂತಿಮವಾಗಿ ಕೋಲಾರವನ್ನು ಘೋಷಿಸಿ, ಹೈಕಮಾಂಡ್ ಮೇಲೆ ಹಾಕಿದ್ದಾರೆ. ಇದಕ್ಕೆ ಕಾರಣ ಸುಧಾಕರ್ ಪ್ರತಿಕ್ರಿಯೆ ನೋಡುವುದಕ್ಕಾಗಿ ಎಂದು ಟಾಂಗ್ ನೀಡಿದರು.
ಜಿಲ್ಲೆಗೆ ಡಿಸಿಸಿ ಬ್ಯಾಂಕ್ ತರಲು ಸುಧಾಕರ್ ಪ್ರಯತ್ನ
ಎಚ್.ಡಿ.ಕುಮಾರಸ್ವಾಮಿ ನಿಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್, ಟಾರ್ಗೆಟ್ ಮಾಡಿದರೆ ಮಾಡಲಿ, ನಾವು ರಾಜಕಾರಣಕ್ಕೆ ಬಂದಾಗಲಿಂದ ಟಾರ್ಗೆಟ್ ನಡೆಯುತ್ತಲೇ ಇದೆ. ಯಾರು ಸಾರ್ವಜನಿಕರ ಮಧ್ಯೆ ಕೆಲಸ ಮಾಡುತ್ತಾರೆ, ಯಾರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳು ಸಮರ್ಪಕ ಅನುಷ್ಠಾನ ಮಾಡುತ್ತಾರೆ ಅವರ ಮೇಲೆ ಕುಮಾರಸ್ವಾಮಿಗೆ ಕಣ್ಣಿರುತ್ತದೆ ಎಂದರು.
ಇನ್ನು ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಮತ್ತು ಚಿಮುಲ್ ಒಕ್ಕೂಟಗಳು ಸ್ವಲ್ಪ ತಡವಾದರೂ ಪ್ರತ್ಯೇಕ ಮಾಡಲಾಗುವುದು ಎಂದು ಸಹಕಾರ ಸಚಿವರು ಭರವಸೆ ನೀಡಿದರು. ಪ್ರತ್ಯೇಕ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ಗಾಗಿ ಸುಧಾಕರ್ ಅವರ ಪ್ರಯತ್ನ ಮುಂದುವರಿದಿದೆ. ಅದನ್ನು ಕಾನೂನು ಬದ್ಧವಾಗಿಯೇ ಮಾಡಲು ಪ್ರಯತ್ನ ನಡೆಯುತ್ತಿದೆ. ಡಿಸಿಸಿ ಬ್ಯಾಂಕ್ಅನ್ನು ಚಿಕ್ಕಬಳ್ಳಾಪುರಕ್ಕೆ ತರಲಾಗುವುದು, ಮುಂದಿಟ್ಟಿರುವ ಹೆಜ್ಜೆ ಹಿಂದೆ ಇಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.