ಕೊಟ್ಟ ಮಾತಿನಂತೆ ನಡೆದಿದ್ದೇನೆ, ಯಾರು ಬೇಕಾದರೂ ದಾಖಲೆ ಪರಿಶೀಲಿಸಬಹುದು- ಡಾ.ಕೆ. ಸುಧಾಕರ್
ಮೊದಲು ಅರ್ಜಿ ಸಲ್ಲಿಸಿದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿಗೆ ನಿವೇಶನ ನೀಡಲಾಗಿದೆ. ಜೊತೆಗೆ 2,700 ನಿವೇಶನ ಸಿದ್ಧವಾಗಿದ್ದು, ಅರ್ಜಿ ಸಲ್ಲಿಸಿದ ಎಲ್ಲರಿಗೂ ನಿವೇಶನ ಕಲ್ಪಿಸಲು ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ, ಮಾರ್ಚ್ 1: ಕಳೆದ ಮೂರು ವರ್ಷಗಳ ಹಿಂದೆ ನೀಡಿದ್ದ ಭರವಸೆಯಂತೆ ನಗರ ವ್ಯಾಪ್ತಿಯ 5 ಸಾವಿರ ನಿವೇಶನ ರಹಿತರಿಗೆ ಉಚಿತ ನಿವೇಶನ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ನಗರ ವ್ಯಾಪ್ತಿಯ ಬಡವರಿಗೆ ಉಚಿತ ನಿವೇಶನ ಹಂಚಿಕೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಾರ್ಡ್ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಗರ ವ್ಯಾಪ್ತಿಯಿಂದ ಅರ್ಜಿ ಸಲ್ಲಿಸಿದ್ದವರಲ್ಲಿ 2,270 ಮಂದಿಗೆ ನಿವೇಶನ ಅಂತಿಮ ಮಾಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಯ 440, ಪರಿಶಿಷ್ಟ ವರ್ಗದ 113, ಹಿಂದುಳಿದ ವರ್ಗದ 842 ಮತ್ತು ಅಲ್ಪಸಂಖ್ಯಾತ 870 ಕುಟುಂಬಗಳಿಗೆ ನಿವೇಶನ ಮಂಜೂರಾಗಿದೆ. ಈ ಅಂಕಿ ಅಂಶ ನೋಡಿದರೆ ಸಾಮಾಜಿಕ ನ್ಯಾಯ ಏನು ಎಂಬುದು ಅರ್ಥವಾಗಲಿದೆ ಎಂದು ಸಚಿವರು ವಿವರಿಸಿದರು.

ಮೊದಲು ಅರ್ಜಿ ಸಲ್ಲಿಸಿದವರಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿಗೆ ನಿವೇಶನ ನೀಡಲಾಗಿದ್ದು, ಯಾವುದೇ ಜಾತಿ ಅಥವಾ ಧರ್ಮದ ಜನರಿಗೆ ತಾರತಮ್ಯ ಮಾಡಿಲ್ಲ. ಇವುಗಳ ಜೊತೆಗೆ 2,700 ನಿವೇಶನ ಸಿದ್ಧವಾಗಿದ್ದು, ಅರ್ಜಿ ಸಲ್ಲಿಸಿದ ಎಲ್ಲರಿಗೂ ನಿವೇಶನ ಕಲ್ಪಿಸಲು ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ ಎಂದು ಹೇಳಿದರು.
ಅಲ್ಲದೆ ಪ್ರಸ್ತುತ ಸಾಲಿನಲ್ಲಿ ನಿವೇಶನ ಪಡೆಯುತ್ತಿರುವ ಎಲ್ಲರಿಗೂ ಮುಂದಿನ ವರ್ಷ ಮನೆ ನಿರ್ಮಿಸಿಕೊಡುವ ಪ್ರಯತ್ನ ಮಾಡಲಾಗುವುದು. ಈ ಹಿಂದೆ ಇದ್ದ ಯಾವುದೇ ಶಾಸಕರು ಈ ಪ್ರಮಾಣದಲ್ಲಿ ನಿವೇಶನ ನೀಡಿದ ಉದಾಹರಣೆ ಇಲ್ಲ. ಅಧಿಕಾರಿಗಳ ನಿರಂತರ ಶ್ರಮದಿಂದಲೇ ಇಂತಹ ಸಾಧನೆ ಮಾಡಲು ಸಾಧ್ಯವಾಗಿದ್ದು, ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ಹೇಳಿದರು.

ನಗರ ವ್ಯಾಪ್ತಿಯ ನಿವಾಸಿಗಳಿಗೆ ನಿವೇಶನ ಉಚಿತವಾಗಿ ನೀಡಲೇಬೇಕು ಎಂಬ ಸಂಕಲ್ಪದೊಂದಿಗೆ 190 ಎಕರೆ ಭೂಮಿಯನ್ನು ಗುರುತಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದರಲ್ಲಿ ಒಟ್ಟು 179 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ಇದ್ದು, ಈ ದಾಖಲೆಗಳನ್ನು ನಗರದಲ್ಲಿ ಜನರ ದಿಕ್ಕು ತಪ್ಪಿಸುವ ಬುದ್ಧಿವಂತರಿಗೆ ನೀಡುಬೇಕು ಎಂದರು.
ಇವರು ಬಡವರಿಗೆ ನಿವೇಶನ ನೀಡಬೇಕು, ಮನೆ ನೀಡಬೇಕು ಎಂಬ ಬುದ್ಧಿವಂತರಲ್ಲ, ಕೇವಲ ವೋಟಿಗಾಗಿ ದಿಕ್ಕುತಪ್ಪಿಸುತ್ತಿದ್ದಾರೆ. ತಾವು ಜೀವನದಲ್ಲಿ ಯಾರಿಗೂ ದಿಕ್ಕುತಪ್ಪಿಸುವ ಕೆಲಸ ಮಾಡಿಲ್ಲ, ಎಂದೂ ಸುಳ್ಳು ಮಾತನಾಡಿಲ್ಲ. ನನ್ನ ಮಾತು, ಜೀವ ಎರಡೂ ಒಂದೇ, ಬದ್ಧತೆಯಿಂದ ಈ ಕೆಲಸ ಮಾಡಲಾಗಿದೆ ಎಂದು ಹೇಳಿದರು.
ಹಿಂದೆ ಅರ್ಜಿ ನೀಡಿದವರಲ್ಲಿ ನಿವೇಶನ ರಹಿತರ ಪಟ್ಟಿ ಇದ್ದು, ಎಲ್ಲರಿಗೂ ನಿವೇಶನ ನೀಡಲಾಗುವುದು. ಮಾ.17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಹಕ್ಕುಪತ್ರ ವಿತರಿಸಲಾಗುವುದು. ಮುಂದಿನ ವರ್ಷ ನೂತನ ಲೇ ಔಟ್ ಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ, ಮನೆಗಳನ್ನು ನಿರ್ಮಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕೊಳಚೆ ಪ್ರದೇಶಗಳಿಗೆ 870 ಮನೆ
ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರಿಗೆ ಈಗಾಗಲೇ 870 ಮನೆ ನಿರ್ಮಾಣ ಮಾಲಾಗುತ್ತಿದೆ. ಪ್ರಧಾನಮಂತ್ರಿ ಅವಾಜ್ ಯೋಜನೆಯಡಿ ದೇಶದಾದ್ಯಂತ 11 ಕೋಟಿ ಮನೆಗಳನ್ನು ನೀಡಿದ್ದು, ಇದರಲ್ಲಿ 4 ಕೋಟಿ ಮನೆ ಸಂಪೂರ್ಣ ನಿರ್ಮಾಣವಾಗಿವೆ. ಉಳಿದ ಮನೆಗಳು ವಿವಿಧ ಹಂತಗಳಲ್ಲಿ ನಿರ್ಮಾಣವಾಗುತ್ತಿವೆ ಎಂದು ಹೇಳಿದರು. ನಂತರ ಕಾರ್ಯಕ್ರಮದಲ್ಲಿ ಹಾಜರಿದ್ದ ನಾಗರಿಕರಿಂದ ಸಚಿವರು ಸಾಂಕೇತಿಕವಾಗಿ ಉಚಿತ ನಿವೇಶನ ಅರ್ಜಿ ಸ್ವೀಕರಿಸಿದರು.t












Click it and Unblock the Notifications