Karthika Masa: ಚಿಕ್ಕಬಳ್ಳಾಪುರ ದೇವಾಲಯಗಳಲ್ಲಿ ಕಾರ್ತಿಕ ಲಕ್ಷ ದೀಪೋತ್ಸವ: ಜಗಮಗಿಸುತ್ತಿವೆ ಪ್ರಸಿದ್ಧ ದೇಗುಲಗಳು
ಚಿಕ್ಕಬಳ್ಳಾಪುರ ನವೆಂಬರ್ 25: ಕಾರ್ತಿಕ ಮಾಸ ಕಡೆ ಸೋಮವಾರ ಪ್ರಯುಕ್ತ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಲಕ್ಷದೀಪೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಶೇಷ ದಿನದ ಅಂಗವಾಗಿ ಈಗಾಗಲೇ ವಿದ್ಯುತ್ ದೀಪ ಅಲಂಕಾರಗಳಿಂದ ಆಲಯಗಳು ಜಗಮಗಿಸುತ್ತಿವೆ. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಆವರಣದಲ್ಲಿ ಬ್ಯಾರಿ ಕೇಡುಗಳನ್ನ ಅಳವಡಿಸಲಾಗಿದೆ.
ಕಾರ್ತಿಕ ಮಾಸದಲ್ಲಿ ಶಿವನ ಆಲಯದ ಮುಂಭಾಗ ದೀಪವನ್ನು ಬೆಳಗಿಸಿ ದೇವರನ್ನು ಪ್ರಾರ್ಥಿಸಿದರೆ ಹರಕೆ ಈಡೇರುವ ನಂಬಿಕೆಯಲ್ಲಿ ಪ್ರತಿವರ್ಷದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಂದಿ ದೇವಾಲಯಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ವ್ಯವಸ್ಥೆ ಕೈಗೊಂಡಿಕೊಳ್ಳಲಾಗಿದ್ದು, ನಿಗದಿತ ಸ್ಥಳದಲ್ಲಿ ದೀಪ ಬೆಳಗಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜಾ ಕಾರ್ಯಕ್ರಮ ಮತ್ತು ಭಜನೆ ನಡೆದಿದೆ. ಶ್ರೀ ಭೋಗ ನಂದೀಶ್ವರ ಸ್ವಾಮಿ ಲಕ್ಷ ದೀಪೋತ್ಸವ ಸೇವಾ ಸಮಿತಿ ನೇತೃತ್ವದಲ್ಲಿ ಇಂದು ರಾತ್ರಿ ಲಕ್ಷ ದೀಪೋತ್ಸವ ನಡೆಯಲಿದೆ.

ಅದೇ ರೀತಿ ಜಿಲ್ಲಾ ಕೇಂದ್ರದಲ್ಲಿನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ, ಶ್ರೀ ಜೀವ ಆಂಜನೇಯ ದೇವಾಲಯ, ವಾಪಸಂದ್ರದ ನಿರ್ಮಾಮಿಡಿ ಶಾಖಾ ಮಠ, ಶ್ರೀ ಶನೇಶ್ವರ, ಶಿರಡಿ ಸಾಯಿಬಾಬಾ, ಸುಬ್ರಮಣ್ಯೇಶ್ವರ ಸ್ವಾಮಿ, ಶ್ರೀ ಗಂಗಾಧರೇಶ್ವರ ದೇವಾಲಯ ಸೇರಿ ಜಿಲ್ಲೆಯ ವಿವಿಧಡೆ ಇರುವ ಅನೇಕ ಪ್ರಸಿದ್ಧ ದೇವಾಲಯಗಳಲ್ಲಿ ಲಕ್ಷ ದೀಪೋತ್ಸವ, ಪೂಜಾ ಕಾರ್ಯಕ್ರಮಗಳು ಹಾಗೂ ಅನ್ನ ಸಂತರ್ಪಣೆಯನ್ನು ಕೈಗೊಳ್ಳಲಾಗಿದೆ.
ನೂತನ ರಥೋತ್ಸವ ಸಮರ್ಪಣೆ -
ಶಿವನ ದೇಗುಲಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿರುವ ನಂದಿಯ ಶ್ರೀ ಭೋಗ ನಂದೀಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಸೋಮವಾರ ನ.25 ( ರಥದ ದಾನಿ ವೆಂಕಟೇಗೌಡ ರವರು ನೀಡಿರುವ ) 2.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 54 ಅಡಿ ಎತ್ತರದ ನೂತನ ರಥವನ್ನು ದೇವಾಲಯಕ್ಕೆ ಸಮರ್ಪಿಸಲಾಗುತ್ತಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಸಿಯಾ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪ ಕಲಾ ಕೇಂದ್ರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೋಟೇಶ್ವರ ಲಕ್ಷ್ಮಿ ನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ನಿರ್ಮಾಣವಾಗಿರುವ ರಥವು ಈಗಾಗಲೇ ದೇವಾಲಯವನ್ನು ಪ್ರವೇಶಿಸಿದ್ದು, ಮೊದಲ ದಿನವೇ ಸಂಭ್ರಮದ ಆಧ್ಯಾತ್ಮಿಕ ಚಟುವಟಿಕೆಯೊಂದಿಗೆ ಸ್ವಾಗತಿಸಲಾಗಿದೆ.
ನಂದಿ ಆಲಯದಲ್ಲಿ ಉತ್ಸವ ರಥದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಶನಿವಾರ ದೇಗುಲದಲ್ಲಿ ಉತ್ಸವಮೂರ್ತಿ ಮೆರವಣಿಗೆ ನಡೆಯಿತು. ರಥದ ದಾನಿ ವೆಂಕಟೇಗೌಡ ನೇತೃತ್ವದಲ್ಲಿ ದೇಗುಲ ಪ್ರದಕ್ಷಿಣೆ ವಿಶೇಷ ಪೂಜೆಯಲ್ಲಿ ಭಕ್ತರು ಭಾಗವಹಿಸಿದ್ದರು.

1008 ಲೀ. ಹಾಲಿನ ಅಭಿಷೇಕ -
ಪ್ರತಿ ವರ್ಷದಂತೆ ನಗರದ ಶ್ರೀ ಮರಳು ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವಲಿಂಗಕ್ಕೆ ಭಕ್ತರು 1008 ಲೀಟರ್ ಹಾಲನ್ನು ಕ್ಷೀರಾಭಿಷೇಕ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಜಾತಿ ಮತ ಭೇದವಿಲ್ಲದೆ ಭಕ್ತರು ಹಾಲನ್ನ ದೇವರಿಗೆ ಸಮರ್ಪಿಸಬಹುದಾಗಿದೆ ಎಂದು ದೇವಾಲಯದ ಸಮಿತಿ ತಿಳಿಸಿದೆ.












Click it and Unblock the Notifications