ಜೇಬಿನಲ್ಲಿ ದುಡ್ಡಿದ್ದರೆ ಮಾತ್ರ ನಂದಿಬೆಟ್ಟಕ್ಕೆ ಹೋಗಿ: ಪ್ರವೇಶ ಶುಲ್ಕ ಸೇರಿ ಎಲ್ಲವೂ ದುಬಾರಿ
ಚಿಕ್ಕಬಳ್ಳಾಪುರ, ಜುಲೈ 13: ಬಡವರ ಪಾಲಿನ ಊಟಿ ಅಂತಲೇ ಪ್ರಖ್ಯಾತಿ ಹೊಂದಿರುವ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಕೋವಿಡ್ ಅನ್ಲಾಕ್ ನಂತರ ಪ್ರವೇಶ ಶುಲ್ಕ ಸೇರಿ ಎಲ್ಲವೂ ದುಬಾರಿಯಾಗಿದೆ.
ಬಡವರ ಹಾಗೂ ಮಧ್ಯಮ ವರ್ಗದವರ ಪಾಲಿನ ಅಚ್ಚುಮೆಚ್ಚಿನ ಸ್ಥಳವಾಗಿದ್ದ ನಂದಿಬೆಟ್ಟ ದೂರದ ಕುಸುಮವಾಗುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿಗೆ ಬರಬೇಕಾದರೆ ಪ್ರವಾಸಿಗರು ಜೇಬು ತುಂಬಾ ದುಡ್ಡು ಇಟ್ಟುಕೊಂಡು ಬರಬೇಕು. ನಂದಿ ಗಿರಿಧಾಮಕ್ಕೆ ಹೋಗಿ ಬರಬೇಕಾದರೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿದೆ.
ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲರುವ ಈ ನಂದಿಗಿರಿಧಾಮಕ್ಕೆ ಬೆಂಗಳೂರು ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರು ಬಂದು ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳುತ್ತಾರೆ. ಪ್ರೇಮಿಗಳ ಪಾಲಿನ ವಿಕೇಂಡ್ ಹಾಟ್ಸ್ಪಾಟ್ ನಂದಿಬೆಟ್ಟಕ್ಕೆ ಕೊರೊನಾ ಅನ್ಲಾಕ್ ನಂತರ ಪ್ರವಾಸಿಗರ ದಂಡೇ ಹರಿದುಬರುತ್ತದೆ.

ಪ್ರವಾಸಿಗರಿಗೆ ಈಗ ಜೇಬು ಸುಡುವಂತಾಗಿದೆ. ಕಾರಣ, ತೋಟಗಾರಿಕಾ ಇಲಾಖೆ ಸುಪರ್ದಿಯಲ್ಲಿದ್ದ ನೆಹರು ನಿಲಯ ಸೇರಿದಂತೆ ಇತರೆ ವಸತಿ ಗೃಹಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗಿದೆ. ಪರಿಣಾಮ ನಂದಿಗಿರಿಧಾಮದ ವಸತಿ ಗೃಹಗಳ ನೂತನ ದರವನ್ನು ಹೆಚ್ಚಿಸಲಾಗಿದೆ.
ನಂದಿಬೆಟ್ಟದಲ್ಲಿ 1 ದಿನ ತಂಗಬೇಕಾದರೆ ನೆಹರು ನಿಲಯದಲ್ಲಿ ವಿಶೇಷ ವಿವಿಐಪಿ ವಸತಿ ಗೃಹಗಳು, ಗಾಂಧಿ ನಿಲಯದಲ್ಲಿ ಕೆಎಸ್ಟಿಡಿಸಿ ವಸತಿ ಗೃಹಗಳಿವೆ. ಈಗ ಸಾಮಾನ್ಯ ವಸತಿ ಗೃಹಗಳ ಆರಂಭಿಕ ದರ 2,000 ರೂ. ವಿಐಪಿ, ವಿವಿಐಪಿ ರೂಂ.ಗಳ ಬಾಡಿಗೆ ದರ 4,000- 5,000 ರುಪಾಯಿವರೆಗೆ ಆಗಲಿದ್ದು, ವಾರಾಂತ್ಯಗಳಲ್ಲಿ 6,000 ರೂ. ಸಹ ಇರಲಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಪಾಲಿನ ಪ್ರವಾಸಿಗರಿಗೆ ಈ ದರ ದುಬಾರಿಯಾಗಲಿದ್ದು, ಪ್ರವಾಸಿಗರ ಬೇಸರಕ್ಕೆ ಕಾರಣವಾಗುತ್ತಿದೆ.
ಇನ್ನು ವಸತಿಗೃಹಗಳ ಏರಿಕೆ ಒಂದು ಕಡೆಯಾದರೆ, ನಂದಿಗಿರಿಧಾಮ ಪ್ರವೇಶ ಶುಲ್ಕ ತಲಾ 20 ರೂ. ಹೆಚ್ಚಾಗಿದ್ದು, ಬೈಕ್ ಪಾರ್ಕಿಂಗ್ ಶುಲ್ಕ, ಹೆಲ್ಮೆಟ್ ದಾಸ್ತಾನು ಶುಲ್ಕ ಅಂತ ನೂರಾರು ರೂಪಾಯಿ ಖಾಲಿ ಆಗುತ್ತದೆ. ಇನ್ನೂ ನಂದಿಬೆಟ್ಟ ಸುತ್ತಾಡಿ ಕಾಫಿ, ಟೀ, ತಿಂಡಿ, ಊಟ ಅಂತ ಹೋಟೆಲ್ಗಳಿಗೆ ಹೋದರೆ ಅಲ್ಲೂ ದರ ದುಪ್ಪಟ್ಟಾಗಿದೆ.
ಸಾಮಾನ್ಯವಾಗಿ 10 ರೂಪಾಯಿ ಕಾಫಿ- ಟೀ ಇನ್ಮುಂದೆ 20 ರೂಪಾಯಿ, ಇಡ್ಲಿ- ವಡೆ 80 ರೂಪಾಯಿ, ಮಸಾಲೆ ದೋಸೆ 80 ರೂಪಾಯಿ, ಉದ್ದಿನ ವಡೆ ಸಹ 80 ರೂಪಾಯಿ ಹೀಗೆ ಎಲ್ಲ ದರಗಳು ಸಹ ದುಬಾರಿಯಾಗಿವೆ. ಇದರಿಂದ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ನೂರು ಅಲ್ಲ ಸಾವಿರಾರು ರೂಪಾಯಿ ಇದ್ದರೆ ಮಾತ್ರ ನಂದಿಗಿರಿಧಾಮಕ್ಕೆ ಬರುವಂತಾಗಿದೆ. ಹಾಗಾಗಿ ಸರ್ಕಾರ ಇಲಾಖೆ ಆದಷ್ಟು ಬಡ ಮಧ್ಯಮ ಪ್ರವಾಸಿಸ್ನೇಹಿ ದರ ನಿಗದಿ ಮಾಡಬೇಕು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಅಭಿವೃದ್ಧಿ ಹೆಸರಲ್ಲಿ ನಂದಿಗಿರಿಧಾಮವನ್ನು ಹೈಟೆಕ್ ಮಾಡುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ವಸತಿ ನಿಲಯಗಳ ಅಂದ ಚೆಂದ ಹೆಚ್ಚಿಸುವುದರ ಜೊತೆಗೆ ಸ್ವಚ್ಛತೆಗೆ ಆದ್ಯತೆ ಕೊಡುತ್ತಿದೆ. ಆದರೆ ಈ ವಸತಿ ನಿಲಯಗಳ ಬಾಡಿಗೆ ದರ ಜನ ಸಾಮಾನ್ಯರ ಪಾಲಿಗೆ ಕೈಗೆ ಎಟುಕುದಂತಾಗುತ್ತಿದ್ದು, ಕಣ್ಣಿಗೆ ಕಾಣುವ ನಂದಿಬೆಟ್ಟ ಬಡ- ಮಧ್ಯಮದವರ ಪಾಲಿಗೆ ದೂರ ಆಗುವಂತಾಗಿದೆ.
ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧ
ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿತಾಣ ನಂದಿಗಿರಿಧಾಮಕ್ಕೆ (ನಂದಿ ಹಿಲ್ಸ್) ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧಿಸಿರುವುದಾಗಿ ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಎಚ್. ಅಮರೇಶ ಆದೇಶ ಹೊರಡಿಸಿದ್ದಾರೆ.
Recommended Video
ಕೊರೊನಾ ಅನ್ಲಾಕ್ ಆಗುತ್ತಿದ್ದಂತೆಯೇ ನಂದಿ ಗಿರಿಧಾಮದತ್ತ ಸಾಗರೋಪಾದಿಯಲ್ಲಿ ಪ್ರವಾಸಿಗರ ದಂಡು ಬರಲಾರಂಭಿಸಿದ್ದು, ಇದೀಗ ಕೋವಿಡ್ ಮೂರನೇ ಅಲೆ ಭೀತಿ ಹೆಚ್ಚಾಗುತ್ತಿರುವುದಕ್ಕಾಗಿ ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧಿಸಿದ್ದಾರೆ. ಈ ಆದೇಶ ಅನಿರ್ದಿಷ್ಟಾವಧಿ ಜಾರಿಯಲ್ಲಿರಲಿದ್ದು, ಪ್ರತಿ ಶುಕ್ರವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ನಂದಿಗಿರಿಧಾಮಕ್ಕೆ ಪ್ರವೇಶ ಇರುವುದಿಲ್ಲ (No Entry) ಎಂದು ಅಪರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.












Click it and Unblock the Notifications