ಚಿಕ್ಕಬಳ್ಳಾಪುರ; ಜವಳಿ ಪಾರ್ಕ್ ಸ್ಥಾಪನೆ ಹಿಂದೆ ಉದ್ಯೋಗ ಸೃಷ್ಟಿ ಗುರಿ
ಚಿಕ್ಕಬಳ್ಳಾಪುರ, ಮೇ 19: ಆತ್ಮನಿರ್ಭರ್ ಭಾರತ ಪರಿಕಲ್ಪನೆಗೆ ಪೂರಕವಾಗಿ ವಿಶ್ವದರ್ಜೆಯ ಜವಳಿ ಪಾರ್ಕ್ ಅನ್ನು ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ರನ್ನು ಗುರುವಾರ ಭೇಟಿ ಮಾಡಿದ ಸಚಿವ ಸುಧಾಕರ್ ಈ ಬಗ್ಗೆ ಮನವಿ ಸಲ್ಲಿಸಿದರು. ದೇಶದಲ್ಲಿ ಒಟ್ಟು ಉತ್ಪಾದನೆಯ ಶೇ. 65ರಷ್ಟು ಕಚ್ಛಾ ರೇಷ್ಮೆ ಕರ್ನಾಟಕದಲ್ಲೇ ಉತ್ಪಾದನೆ ಆಗುತ್ತದೆ. ಅದೇ ರೀತಿ ರಾಜ್ಯದಲ್ಲಿ ಶೇ.12 ಉಣ್ಣೆ, ಶೇ.6ರಷ್ಟು ಹತ್ತಿಯನ್ನು ಉತ್ಪಾದಿಸಲಾಗುತ್ತಿದೆ.
ಸಚಿವ ಸುಧಾಕರ್ ಆಯೋಜಿಸಿದ್ದ ಆರೋಗ್ಯ ಮೇಳ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆ
ರಾಜ್ಯದಲ್ಲಿ 40,000 ಕೈ ಮಗ್ಗ ಹಾಗೂ 1.20 ಲಕ್ಷ ವಿದ್ಯುತ್ ಮಗ್ಗಗಳಿವೆ. ವಸ್ತ್ರೋದ್ಯಮದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಭಾರತವು ಗಾರ್ಮೆಂಟ್ ರಾಜಧಾನಿ ಎಂಬ ಖ್ಯಾತಿ ಹೊಂದಿದೆ. ಈ ಉದ್ಯಮವನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ 'ನೂತನ ಟೆಕ್ಸ್ ಟೈಲ್ ಮತ್ತು ಗಾರ್ಮೆಂಟ್ ನೀತಿ 2019-24' ಜಾರಿಗೊಳಿಸಿದೆ ಎಂದರು.
5 ವರ್ಷದಲ್ಲಿ 10 ಸಾವಿರ ಕೋಟಿ ಹೂಡಿಕೆ
"ಕರ್ನಾಟಕದಲ್ಲಿ ಮುಂದಿನ 5 ವರ್ಷಗಳಲ್ಲಿ ಬರೋಬ್ಬರಿ 10,000 ಕೋಟಿ ರೂಪಾಯಿ ಹೂಡಿಕೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಆ ಮೂಲಕ 5 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ಗುರಿಯನ್ನು ಈ ನೀತಿ ಹೊಂದಿದೆ" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಸಲ್ಲಿಸಿದ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚಿಕ್ಕಬಳ್ಳಾಪುರಕ್ಕೆ ರೇಷ್ಮೆ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ
ರೇಷ್ಮೆ ಉತ್ಪಾದನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಪ್ರಮುಖ ಸ್ಥಾನವನ್ನು ಹೊಂದಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಹಾಗೂ ರಾಷ್ಟ್ರೀಯ ಹೆದ್ದಾರಿ ಹೊಂದಿರುವ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಕಾಲೇಜು ಸಹ ಇದೆ. ಇದರ ಜೊತೆಗೆ ವಸ್ತ್ರೋದ್ಯಮದ ಕೌಶಲ್ಯ ಹೊಂದಿದವರೂ ಇಲ್ಲಿದ್ದಾರೆ. ಈ ಎಲ್ಲ ಕಾರಣಗಳಿಂದ ಮಂಚೇನಹಳ್ಳಿ ಜವಳಿ ಪಾರ್ಕ್ ಸ್ಥಾಪಿಸಲು ಸೂಕ್ತವಾದ ತಾಣವಾಗಿದೆ ಎಂದು ಸಚಿವರು ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆಯ ಹಿಂದಿನ ಉದ್ದೇಶ
ರಾಜ್ಯದಲ್ಲಿ ಹತ್ತಿ ಹಾಗೂ ರೇಷ್ಮೆಯಿಂದ ನೂಲು, ನೂಲಿನಿಂದ ವಸ್ತ್ರೋದ್ಯಮ ಹಾಗೂ ಫ್ಯಾಶನ್ ಕ್ಷೇತ್ರದ ಬೆಳವಣಿಗೆಯ ಮೂಲಕ ರಫ್ತು ವಹಿವಾಟು ನಡೆಸುವ ಮಟ್ಟಿಗೆ ಕೈಗಾರಿಕಾ ವಲಯವನ್ನು ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಜವಳಿ ಪಾರ್ಕ್ ಸ್ಥಾಪನೆಯು ನಾಂದಿ ಹಾಡಲಿದೆ. ಕೃಷಿ ಭೂಮಿಯಿಂದ ಆರಂಭವಾಗಿ ಮಾರುಕಟ್ಟೆಯವರೆಗೆ ಮೌಲ್ಯವರ್ಧನೆಯ ಎಲ್ಲಾ ಹಂತಗಳನ್ನು ಒಂದೆಡೆ ತರುವ ಜವಳಿ ಪಾರ್ಕ್ ಇದಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಉಪನಗರವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿ
ಬೆಂಗಳೂರು ಮಹಾನಗರದ ಉಪನಗರವನ್ನಾಗಿ ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿಪಡಿಸಲು 'ಸ್ಮಾರ್ಟ್ ಸ್ಯಾಟ್ಲೈಟ್ ಟೌನ್' ಪ್ರಾಯೋಗಿಕ ಯೋಜನೆಯನ್ನು ಜಾರಿಗೊಳಿಸಲು ಸಚಿವ ಡಾ. ಕೆ. ಸುಧಾಕರ್ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ. ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅನ್ನು ಭೇಟಿ ಮಾಡಿದ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಚರ್ಚೆ ನಡೆಸಿದರು. ಚಿಕ್ಕಬಳ್ಳಾಪುರವು ಬೆಂಗಳೂರು ನಗರಕ್ಕೆ ಸಮೀಪದಲ್ಲಿದ್ದು, ಇದನ್ನು ಸ್ಯಾಟ್ಲೈಟ್ ಟೌನ್ ಆಗಿ ಅಭಿವೃದ್ಧಿಪಡಿಸಬಹುದು. ಇದಕ್ಕಾಗಿ ಪ್ರಾಯೋಗಿಕ ಯೋಜನೆ ಮಾಡಬಹುದು ಎಂದು ಸಚಿವ ಡಾ. ಕೆ. ಸುಧಾಕರ್, ಕೇಂದ್ರ ಸಚಿವರಿಗೆ ತಿಳಿಸಿದ್ದಾರೆ.
ಅಮೃತ್-2 ಯೋಜನೆ
ಕೇಂದ್ರ ಸಚಿವರ ಭರವಸೆ
ಚಿಕ್ಕಬಳ್ಳಾಪುರದ ಅಭಿವೃದ್ಧಿಗೆ ಸಂಪೂರ್ಣ ನೆರವು ನೀಡುವುದಾಗಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದು, ಅಮೃತ್-2 ಯೋಜನೆಯಡಿ, ಮೂಲಸೌಕರ್ಯ ನೀಡುವುದಾಗಿ ಹೇಳಿದ್ದಾರೆ. ಸ್ಮಾರ್ಟ್ ಬೀದಿದೀಪ, ನೆಲದಾಳದ ಎಲೆಕ್ಟ್ರಿಕ್ ಕೇಬಲ್, ಸಾರ್ವಜನಿಕ ಸ್ಥಳಗಳಲ್ಲಿ ಉದ್ಯಾನಗಳ ನಿರ್ಮಾಣ, ಪ್ರತಿ ಮನೆಗೆ ಕೊಳವೆ ಅನಿಲ ಸಂಪರ್ಕ, ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ ವ್ಯವಸ್ಥೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಚಿಕ್ಕಬಳ್ಳಾಪುರಕ್ಕೆ ನೀಡುವುದಾಗಿ ಕೇಂದ್ರ ಸಚಿವರು ಆಶ್ವಾಸನೆ ನೀಡಿದರು. ಸ್ಮಾರ್ಟ್ ಸಿಟಿಗಳಂತೆ ಚಿಕ್ಕಬಳ್ಳಾಪುರದಲ್ಲೂ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ನಿರ್ಮಿಸುವಂತೆ ಕೇಂದ್ರ ಸಚಿವರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.