ಮಲ್ಲಿಕಾರ್ಜುನ ಖರ್ಗೆಯವರಿಗೆ ಗೌರವ ಕೊಡಿ: ಡಿ.ಕೆ.ಶಿವಕುಮಾರ್ ವಿಶೇಷ ಮನವಿ
ಚಿಕ್ಕಬಳ್ಳಾಪುರ, ಜನವರಿ 24: ಕರ್ನಾಟಕ ಕಳಂಕಿತ ರಾಜ್ಯ ಎಂದು ಕುಖ್ಯಾತಿ ತಂದುಕೊಟ್ಟಿದ್ದು ಬಿಜೆಪಿ ಸರ್ಕಾರ. ಹಾಲಿ ಸರಕಾರದಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಶಾಸಕರ ತನಕ ಕಮಿಷನ್ ಕೊಡಬೇಕು ಎಂಬುವುದಕ್ಕೆ ಸಾಕ್ಷಿಗಳು ಇವೆ. ಬಿಜೆಪಿಯವರ ಮಾನನಷ್ಟ ಮೊಕದ್ದಮೆಗಳಿಗೆ ನಾವ್ಯಾರು ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ನಗರದಲ್ಲಿ ಕಾಂಗ್ರೆಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕಪ್ಪು ಚುಕ್ಕೆಯಿಲ್ಲದೆ ಆಡಳಿತ ನಡೆಸಿಕೊಂಡು ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನುಡಿದಂತೆ ನಡೆದುಕೊಳ್ಳುವುತ್ತೇವೆ. ಇಲ್ಲವಾದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬದಲಾವಣೆ ಪರ್ವ; ಬಿಜೆಪಿ ಹಾಗೂ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ: ಡಿ.ಕೆ.ಶಿವಕುಮಾರ್
ಮಿಸ್ಟರ್ ಸುಧಾಕರ್ ಅಪರೇಷನ್ ಕಮಲಕ್ಕೆ ಹೋಗಿ, ಆದಾಯ ದ್ವಿಗುಣ ಗೊಳಿಸಿದರು. ಕೋವಿಡ್ ಸಂದರ್ಭದಲ್ಲಿ ಹಾಸಿಗೆ ಹಗರಣ ನಡೆದಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದು. ಚಿಕಿತ್ಸೆ ಪಡೆದುಕೊಳ್ಳಲು ಹಾಸಿಗೆ ಪಡೆಯಲು ಲಂಚ. ಮೆಡಿಸಿನ್ ಖರೀದಿಯಲ್ಲೂ ಶೇ.40ರಷ್ಟು ಕಮಿಷನ್ ಪಡೆದಿದ್ದಾರೆ ಎಂದು ಕೆಂಪಣ್ಣ ಸಾಕ್ಷಿ ಬಿಡುಗಡೆ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರು ಅಧಿಕಾರಕ್ಕೆ ಬಂದ ಹಾಗೆ
ಕಾಂಗ್ರೆಸ್ ಭ್ರಷ್ಟಚಾರ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಆಗ ಬೊಮ್ಮಾಯಿ ಇದಿದ್ದು ನಮ್ಮ ಹಾಸಿಗೆಯಲ್ಲೇ ಅಲ್ವ. ಸುಧಾಕರ್ಗೆ ಮಾನವೀಯತೆ ಇಲ್ಲ. ಆಸ್ಪತ್ರೆಯಲ್ಲಿ ಒಂದೇ ದಿನ 36 ಮಂದಿ ಮೃತಪಟ್ಟಾಗ ಅವರ ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ. ಅವರಿಗೆ ಪರಿಹಾರ ಕೊಡಲು ಆಗಲಿಲ್ಲ. ಅವರಿಗೆ ಧೈರ್ಯ ತುಂಬಿ, ಪರಿಹಾರ ಕೊಡಲು ನಾನು, ಸಿದ್ದರಾಮಯ್ಯನವರು ಹೋಗಬೇಕಾಯಿತು ಎಂದು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸಿದ್ದ ಜನರನ್ನು ಕೋವಿಡ್ ಸಂದರ್ಭದಲ್ಲಿ ಮನೆಗೆ ಹೋಗಲು ಸಾರಿಗೆ ವ್ಯವಸ್ಥೆ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರು ಅಧಿಕಾರಕ್ಕೆ ಬಂದ ಹಾಗೆ. ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದ ಮುಖಂಡರಿಗೆ ಕೋಟಿ ನಮನಗಳು ಎಂದು ಅಭಿನಂದಿಸಿದರು.
ಟಿಕೆಟ್ ಸಿಗದವರಿಗೆ ಬೋರ್ಡ್, ನಿಮಗದ ಅಧಿಕಾರ ಕೊಡುತ್ತೇವೆ
ನಾವು ಹಿಂದೂಗಳೇ, ಆದರೆ ಸಮಾಜದಲ್ಲಿ ಎಲ್ಲಾ ಧರ್ಮದವರು ನಮಗೆ ಒಂದೇ. ಮಾನವೀಯತೆ ಮಾನವನ ಧರ್ಮ. ಯಾಕೆ ಸಮಾಜವನ್ನು ವಿಭಜನೆ ಮಾಡಲು ಹೊರಟ್ಟಿದೀರಾ?. ಬಡ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡಲು ಬಿಜೆಪಿಯಿಂದ ಆಗಲಿಲ್ಲ. ಮುಂದಿನ ಚುನಾವಣೆಯಲ್ಲಿ ಐದಕ್ಕೆ ಐದು ಸ್ಥಾನಗಳನ್ನು ಗೆಲ್ಲಿಸಿ ಅಧಿಕಾರಕ್ಕೆ ಕಳುಹಿಸಬೇಕು. ಟಿಕೆಟ್ ಸಿಗದವರಿಗೆ ಬೋರ್ಡ್, ನಿಮಗದ ಅಧಿಕಾರ ಕೊಡುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಕೊಡಿ, ಮಲ್ಲಿಕಾರ್ಜುನ ಖರ್ಗೆಯವರಿಗೆ ಗೌರವ ಕೊಡಿ ಎಂದು ಸಲಹೆ ನೀಡಿದರು.
ಎತ್ತಿನಹೊಳೆ ಯೋಜನೆಯನ್ನು ಕುಮಾರಸ್ವಾಮಿ ಸೇರಿದಂತೆ ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಬೇಕು ಎನ್ನುವುದು ನಮ್ಮ ಉದ್ದೇಶ. ಈ ಬಾರಿ 140-150 ಸ್ಥಾನ ಗೆಲುವುದು ಖಚಿತ. ಕಾರ್ಯಕರ್ತರು ಮನೆಮನೆಗೆ ಹೋಗಿ ಕಾಂಗ್ರೆಸ್ ಸಾಧನೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ರಾಜ್ಯ ಕಳಂಕಿತ ರಾಜ್ಯ ಎಂದು ಕುಖ್ಯಾತಿ ಪಡೆದಿದೆ
ನಮಗಿದು ಪರೀಕ್ಷೆಯ ಕಾಲವಾಗಿದೆ. ಎಲ್ಲೆಲ್ಲಿ ಪ್ರವಾಸ ಮಾಡುತ್ತಿದ್ದೇವೋ ಅಲ್ಲೆಲ್ಲಾ ಜನ ಸಂಕಷ್ಟಕ್ಕೆ ಸಿಲುಕಿರುವುದು ಗಮನಕ್ಕೆ ಬಂದಿದೆ. 2013 ರಲ್ಲಿ ನಾವು 165 ಭರವಸೆಗಳನ್ನು ನೀಡಿದ್ದು, ಅದರಲ್ಲಿ 159 ಈಡೇರಿಸಿದ್ದೇವೆ. ಇದರ ಬಗ್ಗೆ ಯಾರಾದರೂ ತಕರಾರು ಮಾಡುವುದಾದರೆ, ನಾವು ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧವಿದ್ದೇವೆ. ಬಿಜೆಪಿ ಕಳೆದ ಚುನಾವಣೆಯಲ್ಲಿ 600 ಭರವಸೆಗಳನ್ನು ನೀಡಿದ್ದು, ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಜನರಿಗೆ ಏನೂ ಅನುಕೂಲವಾಗಿಲ್ಲ ಎಂದು ಕಿಡಿಕಾರಿದರು.
ಬಿಜೆಪಿಯ ಪಾಪದ ಪುರಾಣ ಎಂಬ ಪಟ್ಟಿ ಬಿಡುಗಡೆ ಮಾಡಿದ್ದೇವೆ. ರಾಜ್ಯ ಕಳಂಕಿತ ರಾಜ್ಯ ಎಂದು ಕುಖ್ಯಾತಿ ಪಡೆದಿದೆ. ರೈತರ ಆದಾಯ ಡಬಲ್ ಮಾಡಲಿಲ್ಲ, ಕೋವಿಡ್ ಸಮಯದಲ್ಲಿ ಬೆಂಬಲ ಬೆಲೆ ನೀಡುತ್ತೇವೆ ಎಂದು ಹೇಳಿದ್ದರು. ನಿರ್ಮಲ ಸೀತರಾಮನ್ ಅವರು 20 ಲಕ್ಷ ಕೋಟಿ ರೂಪಾಯಿ, ಯಡಿಯೂರಪ್ಪನವರು 1,800 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದರು. ಇದು ಯಾರಿಗೂ ತಲುಪಿಲ್ಲ. ಚಾಲಕರು, ರೈತರು, ಬೀದಿ ವ್ಯಾಪಾರದವರಿಗೆ ಅನುಕೂಲವಾಗಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಜನರ ಸಮಸ್ಯೆಗೆ ಪರಿಹಾರ ನೀಡಲು ಯೋಜನೆ ಘೋಷಣೆ ಮಾಡಿದ್ದೇವೆ
ಮುಖ್ಯಮಂತ್ರಿ ಬೊಮ್ಮಾಯಿ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿವೆ. ರಾಜ್ಯದಲ್ಲಿ 40% ಕಮಿಷನ್ ಪಡೆಯಲಾಗುತ್ತಿದ್ದು ಗುಣಮಟ್ಟದ ಕಾಮಗಾರಿ ಅಸಾಧ್ಯ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಯಾವುದಾದರೂ ಒಂದು ತನಿಖೆ ನಡೆಯಲಿಲ್ಲ. ಈ ಭ್ರಷ್ಟಾಚಾರ ತಾಳಲಾರದೆ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಜನರ ಸಮಸ್ಯೆಗೆ ಪರಿಹಾರ ನೀಡಲು ನಾವು ಕೆಲವು ಯೋಜನೆ ಘೋಷಣೆ ಮಾಡಿದ್ದೇವೆ ಎಂದು ಹೇಳಿದರು.
ಪ್ರತಿ ತಿಂಗಳು ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ ಯೋಜನೆ ಹಾಗೂ ಪ್ರತಿ ಮನೆಯೊಡತಿಗೆ ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ನೀಡಲು ಪ್ರತಿ ತಿಂಗಳು 2 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ ಕಾಲದಲ್ಲಿ 400 ರೂ. ಇದ್ದ ಗ್ಯಾಸ್ ಬೆಲೆ ಈಗ 1,100 ಆಗಿದೆ. ಅಡುಗೆ ಎಣ್ಣೆ 90ರಿಂದ 230 ಆಗಿದೆ. ಈ ಎಲ್ಲ ಸಮಸ್ಯೆಗಳಿಗೆ ಸಹಾಯ ಮಾಡಲು ವರ್ಷಕ್ಕೆ 24 ಸಾವಿರ ನೀಡಲು ಕಾಂಗ್ರೆಸ್ ಪಕ್ಷದ ನಾಯಕರು ಚರ್ಚೆ ಮಾಡಿ ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.