ಕೋವಿಡ್ ಲಸಿಕೆ ಮೇಳ: ಆರೋಗ್ಯ ಸಚಿವರ ಜಿಲ್ಲೆ ಪ್ರಥಮ
ಚಿಕ್ಕಬಳ್ಳಾಪುರ, ಜೂನ್ 22: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂ.21 ರಂದು ಹಮ್ಮಿಕೊಂಡಿದ್ದ ಕೋವಿಡ್ ಲಸಿಕಾ ಮೇಳದಲ್ಲಿ 30 ರಿಂದ 35 ಸಾವಿರ ಲಸಿಕೆ ಹಾಕಲು ಗುರಿ ನಿಗದಿಪಡಿಸಿಕೊಳ್ಳಲಾಗಿತ್ತು. ಆದರೆ ಆರೋಗ್ಯ ಸಚಿವ ಕೆ. ಸುಧಾಕರ್ ಉಸ್ತುವಾರಿ ಜಿಲ್ಲೆ ಚಿಕ್ಕಬಳ್ಳಾಪುರದ ಜನತೆ ಈ ಗುರಿಯನ್ನು ಮೀರಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.
"ಇದೇ ರೀತಿಯ ಸಹಕಾರ ಕೊರೊನಾ ಮಹಾಮಾರಿ ನಿರ್ಮೂಲನೆಯಾಗುವವರೆಗೂ ಮುಂದುವರೆಯಲಿ," ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
"ಜಿಲ್ಲೆಯಲ್ಲಿ ಈವರೆಗೆ 3,95,000 ಡೋಸ್ಗಳ ಕೋವಿಡ್ ಲಸಿಕೆಯನ್ನು ಹಾಕಲಾಗಿದೆ. ಈ ಪೈಕಿ ಮೊದಲ ಡೋಸ್ ಲಸಿಕೆಯನ್ನು 3,30,588 ಜನರಿಗೆ ನೀಡಲಾಗಿದ್ದು, ಎರಡನೆಯ ಡೋಸನ್ನು 64,412 ಜನರು ಪಡೆದಿದ್ದಾರೆ. ಲಸಿಕಾ ಮೇಳ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಎಲ್ಲರೂ ಎರಡೂ ಡೋಸ್ ಲಸಿಕೆ ಪಡೆಯುವವರೆಗೆ ಲಸಿಕಾ ಮೇಳ ಆಗಬೇಕು. ಈ ಹಿನ್ನಲೆಯಲ್ಲಿ 57 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಒಟ್ಟು 69 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಕಾರ್ಯಕ್ರಮ ಮುಂದುವರಿಯಲಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತೆ,'' ಮನವಿ ಮಾಡಿದರು.
Recommended Video
"ಪ್ರಧಾನಮಂತ್ರಿಗಳ ಕರೆಯ ಮೇರೆಗೆ ಅಂತರಾಷ್ಟ್ರೀಯ ಯೋಗದಿನದ ಅಂಗವಾಗಿ ಸೋಮವಾರ 232 ಲಸಿಕಾ ಕೇಂದ್ರಗಳಲ್ಲಿ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ 42,576 ಜನರಿಗೆ ಲಸಿಕೆಯನ್ನು ಹಾಕುವ ಮೂಲಕ ಒಂದೇ ದಿನದಲ್ಲಿ ಅತೀ ಹೆಚ್ಚು ಕೊರೊನಾ ಲಸಿಕೆ ಪಡೆದಿದ್ದು, ಆ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ಮೊದಲನೇಯ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ,'' ಎಂದರು.
ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರೇ ಸ್ವತಃ ಲಸಿಕಾಮೇಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಜನರಿಗೆ ಪ್ರೇರಣೆ ನೀಡಿದ್ದು, "ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ಜಿಲ್ಲಾಡಳಿದ ಇತರ ಇಲಾಖೆಗಳ ಅಧಿಕಾರಿ/ ಸಿಬ್ಬಂದಿಗಳು ಆರೋಗ್ಯ ಇಲಾಖೆಗೆ ಉತ್ತಮ ಸಾಥ್ ನೀಡಿದ್ದಾರೆ. ಮಾಧ್ಯಮದವರು ವ್ಯಾಪಕ ಪ್ರಚಾರ ನೀಡಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಜಿಲ್ಲೆಯ ಜನರು ಅದ್ಭುತ ಸ್ಪಂದನೆ ನೀಡಿದ್ದಾರೆ. ಇದೆಲ್ಲದರ ಪರಿಣಾಮ ಈ ಸಾಧನೆಗೈಯ್ಯಲು ಸಾಧ್ಯವಾಗಿದೆ. ಮುಂದೆಯೂ ನಿಮ್ಮೆಲ್ಲರ ಸಹಕಾರ ಹೀಗೆಯೇ ಮುಂದುವರಿಯಲಿ,'' ಎಂದು ಜನರಲ್ಲಿ ಮನವಿ ಮಾಡಿದರು.