Chikkaballapur: ಶಾಸಕರು, ಸಂಸದರ ಸ್ವಗ್ರಾಮದಲ್ಲಿ ಸ್ವಚ್ಛತೆ ಮಾಯ: ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ
ಚಿಕ್ಕಬಳ್ಳಾಪುರ ಸೆಪ್ಟೆಂಬರ್ 29: ಎಲ್ಲೆಡೆ ಸ್ವಚ್ಛತಾ ಹಿ ಸೇವಾ ಅಭಿಯಾನದ ಮೂಲಕ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಆದರೆ ಶಾಸಕರು ಮತ್ತು ಸಂಸದರ ಸ್ವಗ್ರಾಮದಲ್ಲಿ ಮಾತ್ರ ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದ್ದು ಸ್ವಚ್ಛತಾ ಅಭಿಯಾನಕ್ಕೂ ನಮಗೂ ಸಂಬಂಧವೆ ಇಲ್ಲ ಎನ್ನುವಂತಾಗಿದೆ ಇಲ್ಲಿನ ಸ್ಥಿತಿ.
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಪೆರೇಸಂದ್ರ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಪೆರೇಸಂದ್ರ ಕ್ರಾಸ್ ನ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಸಂಗ್ರಹವಾಗಿರುವ ತ್ಯಾಜ್ಯ ತೆರವುಗೊಳಿಸದ ಹಿನ್ನಲೆಯಲ್ಲಿ ದುರ್ವಾಸನೆ ಬೀರುವ ಸ್ಥಿತಿ ತಲುಪಿದ್ದು ಸಾರ್ವಜನಿಕರು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಗೆ ಪೂರಕ ಚಟುವಟಿಕೆ ಹಮ್ಮಿಕೊಳ್ಳಲು ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಟಕ್ಕೆ ಗ್ರಾಪಂ ವತಿಯಿಂದ ಟ್ರ್ಯಾಕ್ಟರ್ ನ್ನು ಖರೀದಿಸಿದೆ. ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿಗಾಗಿ ಮಾನವ ಸಂಪನ್ಮೂಲವನ್ನು ಸಹ ಅನುದಾನ ಮೀಸಲಿರಿಸಿದ್ದರೂ ಸಹ ಗ್ರಾಪಂಗಳಲ್ಲಿ ಸ್ವಚ್ಛತೆ ಇಲ್ಲದೆ ಸಾಂಕ್ರಾಮಿಕ ರೋಗಗಳ ನಡುವೆ ಬದುಕು ಕಟ್ಟಿಕೊಳ್ಳುವಂತಾಗಿದೆ.
ಸಿಬ್ಬಂದಿ ಕೊರತೆ :-
ಈ ಕುರಿತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ಮಾಡಿದರೆ ಪ್ರತಿ ನಿತ್ಯ ಸ್ವಚ್ಛವಾಗಿಟ್ಟು ಕೊಳ್ಳಲು ಗ್ರಾಮ ಪಂಚಾಯತಿಯಲ್ಲಿ ಕೇವಲ ಸ್ವಚ್ಛತೆಗೆ ಒಬ್ಬರು ಮಾತ್ರಇರುವುದರಿಂದ ಪ್ರತಿನಿತ್ಯ ಸ್ವಚ್ಛ ಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬ ಉತ್ತರವನ್ನು ನೀಡಿದ್ದಾರೆ.
ತ್ಯಾಜ್ಯ ಇರುವುದು ಎಲ್ಲಿ?
ಪ್ರಸ್ತುತ ಆಸ್ಪತ್ರೆ ಮುಂಭಾಗ, ಸಂತೆ ಬಳಿ, ಜಾನುವಾರು ಮಾರುಕಟ್ಟೆ, ಅಯ್ಯಪ್ಪ ಸ್ವಾಮಿ ದೇವಾಲಯದ ಮುಂಭಾಗ, ಕ್ರಾಸ್ ನಲ್ಲಿರುವ ಮೇಲ್ ಸೇತುವೆ ಹಾಗೂ ಕ್ರಾಸ್ ನಲ್ಲಿರುವ ಬಸ್ ನಿಲುಗಡೆ ಪ್ರದೇಶ ಸೇರಿದಂತೆ ಹಲವು ಕಡ ತ್ಯಾಜ್ಯ ನಿಂತಲ್ಲಿ ನಿಂತು ಗಬ್ಬುನಾರುತ್ತಿದ್ದು, ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುವ ಮುನ್ನ ಗ್ರಾಪಂ ವತಿಯಿಂದ ಕೂಡಲೇ ಗ್ರಾಮಗಳ ಸ್ವಚ್ಛತೆ ಕಾಪಾಡಬೇಕೆಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿ:
ರಸ್ತೆ ಬದಿಯಲ್ಲಿ ಕಸ ಬಿಸಾಡುವ ಜನರಿಗೆ, ಅಂಗಡಿ ಮಾಲೀಕರಿಗೆ ಜಾಗೃತಿ ಮೂಡಿಸುವಲ್ಲಿ ಗ್ರಾಪಂ ವಿಫಲವಾಗಿದ್ದು, ಎಲ್ಲೆಂದರಲ್ಲಿ ಕಸ ಬಿಸಾಡುವ ಪರಿಪಾಟ ತೊಲಗಿಸುವ ಕೆಲಸವನ್ನು ಗ್ರಾ ಪಂ ವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದೆ. ಒಟ್ಟಾರೆ ಒಂದೆಡೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಾರ್ವಜನಿಕರಿಗೆ ತ್ಯಾಜ್ಯ ದಿಂದಾಗುವ ದುಷ್ಪರಿಣಾಮಗಳ ಅರಿವಿಲ್ಲದೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಹಲವು ಆಶಯಗಳು ಹಳ್ಳ ಹಿಡಿಯುವಂತಾಗಿವೆ.
ಶಾಸಕರು ಕಾಳಜಿ ವಹಿಸಲಿ -
ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ರವರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಗೂ ಸ್ವಗ್ರಾಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿ, ಅಭಿವೃದ್ಧಿಯ ಜೊತೆಗೆ ಸ್ವಚ್ಛತೆ ಕಾಪಾಡಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಘನತ್ಯಾಜ್ಯ ವಿಲೇವಾರಿ ಘಟಕ ಇದ್ದರು ಸಹ, ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಸಂಬಂಧಪಟ್ಟವರು ವಿಫಲವಾಗಿದ್ದು, ಇನ್ನಾದರೂ ಸ್ವಚ್ಛತೆಗೆ ಆಧ್ಯತೆ ನೀಡಲಿ. ಸಾಮಾನ್ಯ ಸಭೆಗಳಲ್ಲಿ ಗ್ರಾಮಗಳ ಸ್ವಚ್ಛತೆಗೆ ಕ್ರಿಯಾಯೋಜನೆ ತಯಾರಿಸಲಿ. ಚುನಾಯಿತ ಸದಸ್ಯರು ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಗ್ರಾಮ ಸ್ವಚ್ಛಗೊಳಿಸಲು ಹೆಚ್ಚಿನ ಶ್ರಮವಹಿಸಲಿ. ಪೆರೇಸಂದ್ರ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಸಿಬ್ಬಂದಿಗೆ ಸೂಚನೆ ನೀಡುತ್ತೇನೆ, ಎಲ್ಲೆಂದರಲ್ಲಿ ಕಸ ಹಾಕದಂತೆ ಕ್ರಮವಹಿಸಲಾಗುತ್ತದೆ. ಹೆಚ್ಚುವರಿಯಾಗಿ ಸ್ವಚ್ಛತಾ ಸಿಬ್ಬಂದಿ ನೇಮಿಸಲು ಅವಕಾಶವಿಲ್ಲ, ಸಮಸ್ಯೆ ನೀವಾರಿಸಲು ಸೂಕ್ತ ಕ್ರಮವಹಿಸಲಾಗುವುದು ಎಂದು ಪಿಡಿಒ, ಪೆರೇಸಂದ್ರ ಗ್ರಾಪಂ. ವಿಜೇಂದ್ರ ಕುಮಾರ್ ಮನವಿ ಮಾಡಿದರು.

ತಾಪಂ ಇಒ ಮಂಜುನಾಥ್ ಮಾತನಾಡಿ, 'ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಸ್ವಚ್ಛತೆ ಕಾಪಾಡುವಂತೆ ಸೂಚಿಸುತ್ತೇನೆ' ಎಂದರು.












Click it and Unblock the Notifications