Get Updates
Get notified of breaking news, exclusive insights, and must-see stories!

Chikkaballapur KSRTC Job: ಕೆಎಸ್‌ಆರ್‌ಟಿಸಿಯಲ್ಲಿ ಶಿಷ್ಯವೇತನಸಹಿತ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ ನವೆಂಬರ್ 21: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಬಳ್ಳಾಪುರ ವಿಭಾಗೀಯ ಕಚೇರಿ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳಿಂದ ವಿವಿಧ ತಾಂತ್ರಿಕ ವೃತ್ತಿಗಳಲ್ಲಿ ಶಿಷ್ಯವೇತನ ಸಹಿತ ಅಪ್ರೆಂಟಿಸ್ ತರಬೇತಿ (ಶಿಶಿಕ್ಷು ತರಬೇತಿ) ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಇದೇ ನವೆಂಬರ್ 22 ರ ಸಂಜೆ 5.30ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ಸಾರಿಗೆ ನಿಗಮದ ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಹಿಮವರ್ಧನ ನಾಯ್ಡು ಅಲ್ಲೂರಿ ಈ ಕುರಿತು ಮಾಹಿತಿ ನೀಡಿ ಅರ್ಜಿಗಳನ್ನು ಸಲ್ಲಿಸುವಂತೆ ಮನವಿ ಮಾಡಿದ್ದಾರೆ. ಕರಾರಸಾ ನಿಗಮದ ವಿಭಾಗೀಯ ಕಚೇರಿ ವ್ಯಾಪ್ತಿಯ ದೊಡ್ಡಬಳ್ಳಾಪುರವೂ ಸೇರಿದಂತೆ ಆರು ಘಟಕಗಳ ವ್ಯಾಪ್ತಿಯಲ್ಲಿರುವ ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳು ಡೀಸೆಲ್ ಮೆಕ್ಯಾನಿಕ್, ಫಿಟ್ಟರ್, ವೆಲ್ಡರ್ ಮತ್ತು ಎಲೆಕ್ಟ್ರಿಷಿಯನ್ ಹಾಗೂ ಗಣಕಯಂತ್ರ ನಿರ್ವಾಹಕ ಮತ್ತು ಕಾರ್ಯಕ್ರಮ ಸಹಾಯಕ (ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್) ವಿಭಾಗಗಳಲ್ಲಿ ಶಿಷ್ಯವೇತನ ಸಹಿತ ಪೂರ್ಣಾವಧಿಯ ತರಬೇತಿ ನೀಡಲಾಗುತ್ತದೆ.

Chikkaballapur: Application Invitation for Apprentice Training with Stipend at KSRTC

ತರಬೇತಿ ಅವಧಿಯು ಐಟಿಐ ಅಭ್ಯರ್ಥಿಗಳಿಗೆ ಒಂದು ವರ್ಷ ಹಾಗೂ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ಎರಡು ವರ್ಷಗಳಾಗಿರುತ್ತದೆ. ಡೀಸೆಲ್ ಮೆಕ್ಯಾನಿಕ್ ತರಬೇತಿಗೆ 45, ಫಿಟ್ಟರ್ ತರಬೇತಿಗೆ 30, ವೆಲ್ಡರ್ ತರಬೇತಿಗೆ 10 ಮತ್ತು ಎಲೆಕ್ಟ್ರಿಷಿಯನ್ ತರಬೇತಿಗೆ 20 ಹಾಗೂ ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ತರಬೇತಿಗೆ 20 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ನಿಗಮಕ್ಕೆ ಅವಕಾಶವಿರುತ್ತದೆ. ಸರ್ಕಾರದ ನಿಯಮಗಳನ್ವಯ ಮೀಸಲಾತಿ ಸೌಲಭ್ಯಗಳಿರುತ್ತವೆ.

ತರಬೇತಿಯೊಂದಿಗೆ ಶಿಷ್ಯವೇತನ:-

ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 30.10.2023 ಕ್ಕೆ 16 ವರ್ಷಗಳು ಪೂರ್ಣಗೊಂಡಿರುವುದು ಕಡ್ಡಾಯವಾಗಿರುತ್ತದೆ. ಈ ತಾಂತ್ರಿಕ ತರಬೇತಿಗಳಿಗೆ ನಿಯಮಗಳ ಅನ್ವಯ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಆಕರ್ಷಕ ಶಿಷ್ಯವೇತನ ನೀಡಲಾಗುತ್ತದೆ.

ವಲಯ-3 ರಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಶಿಷ್ಯವೇತನವಾಗಿ ಮೊದಲನೆಯ ವರ್ಷ ಪ್ರತಿ ತಿಂಗಳು ರೂ. 8,093 ಮತ್ತು ಎರಡನೆಯ ವರ್ಷ 9,250 ರೂಗಳನ್ನು ನೀಡಲಾಗುತ್ತದೆ. ಇನ್ನು ವಲಯ-4 ರಲ್ಲಿರುವ ಶಿಡ್ಲಘಟ್ಟ, ದೊಡ್ಡಬಳ್ಳಾಪುರ, ಚಿಂತಾಮಣಿ, ಬಾಗೇಪಲ್ಲಿ ಮತ್ತು ಗೌರಿಬಿದನೂರು ಘಟಕಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಮೊದಲನೆಯ ವರ್ಷ ತಿಂಗಳಿಗೆ 7,708 ಹಾಗೂ ಎರಡನೇ ವರ್ಷ 8,809 ರೂಗಳ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:-

* ಅರ್ಜಿ ಸಲ್ಲಿಸುವವರು www.aprenticeship.org ಯ homepage ನಲ್ಲಿ ಹೋಗಿ ನಂತರ candidate registration ನಲ್ಲಿ ಅಗತ್ಯವಿರುವ ವಿವರಗಳನ್ನು ಕಡ್ಡಾಯವಾಗಿ ನಮೂದಿಸುವುದು.

* ನಂತರ ಇ-ಮೇಲ್‌ನಲ್ಲಿ activation Email user ID & Email password-login password ಆಗಿರುತ್ತದೆ. ಲಾಗಿನ್ ಆದ ನಂತರ Candidate Dashboard ನಲ್ಲಿ ವಿವರಗಳನ್ನು ನಮೂದಿಸುವುದು.

*ಪೂರ್ಣ ವಿವರಗಳನ್ನು ನಮೂದಿಸಿ, ಸಂಬಂಧಿಸಿದ ಮೂಲದಾಖಲೆಗಳನ್ನು ಅಪ್‌ಡೇಟ್ ಮಾಡುವುದು. ಈ ರೀತಿ ಅಪ್‌ಡೇಟ್ ಆದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.

*ಅಪೂರ್ಣ ವಿವರಗಳುಳ್ಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿ ಸಲ್ಲಿಸಲು ನೊಂದಾಯಿಸಿಕೊಳ್ಳುವವರು ಆಧಾರ್ ಕಾರ್ಡ್ ಹಾಗೂ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಮತ್ತಿತರ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

*ದಾಖಲೆಗಳಲ್ಲಿರುವಂತೆ ಅಭ್ಯರ್ಥಿಯ ಹೆಸರು, ಜನ್ಮದಿನಾಂಕ, ಪೋಷಕರ ಹೆಸರು ಇನ್ನಿತರ ವಿವರಗಳು ಒಂದಕ್ಕೊಂದು ತಾಳೆಯಾಗುವುದು ಕಡ್ಡಾಯ.

*ಒಂದು ವೇಳೆ ವಿವರಗಳು ದಾಖಲೆಗಳೊಂದಿಗೆ ತಾಳೆಯಾಗದಿದ್ದಲ್ಲಿ ಮತ್ತು ಆನ್‌ಲೈನ್ ನೊಂದಣಿಯಲ್ಲಿ ತಾಂತ್ರಿಕ ಅಡಚಣೆ ಉಂಟಾದಲ್ಲಿ ಸಾರಿಗೆ ನಿಗಮ ಯಾವುದೇ ರೀತಿಯ ಹೊಣೆಗಾರಿಕೆಯನ್ನು ಹೊಂದುವುದಿಲ್ಲ.

ಶಿಶಿಕ್ಷು ಕಾಯಿದೆ 1961 ರ ಪ್ರಕಾರ ಕೆಎಸ್ಸಾರ್ಟಿಸಿಯಲ್ಲಿ ಈಗಾಗಲೇ ಶಿಶಿಕ್ಷು ತರಬೇತಿ ಪಡೆದವರು ಅರ್ಜಿ ಸಲ್ಲಿಸುವಂತಿಲ್ಲ. ಅಂತವರು ಒಂದು ವೇಳೆ ನಿಯಮ ಮೀರಿ ಅರ್ಜಿ ಸಲ್ಲಿಸಿದ ಪಕ್ಷದಲ್ಲಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು. ತರಬೇತಿ ಪಡೆದ ಅಭ್ಯರ್ಥಿಗಳಿಗೆ ನಂತರ ನಿಗಮದಲ್ಲಿ ಕೆಲಸ ಒದಗಿಸುವ ಬಗ್ಗೆ ಯಾವುದೇ ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲ ಎಂಬುದನ್ನು ಅಭ್ಯರ್ಥಿಗಳ ಗಮನಕ್ಕೆ ಆರಂಭದಲ್ಲೇ ತರಲಾಗುತ್ತಿದೆ.

ವಿದ್ಯಾರ್ಹತೆ:-

ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಬರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಶಿಶಿಕ್ಷು ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಅಗತ್ಯವಿರುವ ಮೂಲ ದಾಖಲೆಗಳನ್ನು ನಿಗಮಕ್ಕೆ ಸಲ್ಲಿಸುವುದು ಕಡ್ಡಾಯವಾಗಿದ್ದು, ತರಬೇತಿ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಮೂಲ ದಾಖಲೆಗಳನ್ನು ವಾಪಸ್ ನೀಡುವುದಿಲ್ಲ. ತರಬೇತಿ ಮುಗಿದ ನಂತರ ಮೂಲ ದಾಖಲೆಗಳನ್ನು ವಾಪಸ್ ನೀಡಲಾಗುವುದು.

ಆಯ್ಕೆ ವಿಧಾನ:-

ಆಯ್ಕೆ ಸಂಬಂಧ ಆಯ್ಕೆ ಸಮಿತಿ ಅಥವಾ ಪ್ರಾಧಿಕಾರದ ತೀರ್ಮಾನವೇ ಅಂತಿಮವಾಗಿದ್ದು, ಯಾವುದೇ ರೀತಿಯ ಪತ್ರ ವ್ಯವಹಾರ, ಒತ್ತಡ, ಶಿಫಾರಸ್ಸು ಮತ್ತು ಪ್ರಭಾವಗಳಿಗೆ ಅವಕಾಶವಿರುವುದಿಲ್ಲ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ಚಿಕ್ಕಬಳ್ಳಾಪುರ ವಿಭಾಗೀಯ ಕಾರ್ಯಾಗಾರ ಅಥವಾ ಅದರ ವ್ಯಾಪ್ತಿಗೆ ಬರುವ ಶಾಖೆ ಅಥವಾ ಘಟಕಗಳಲ್ಲಿ ತರಬೇತಿ ಪಡೆಯಲು ಸಿದ್ದರಿರಬೇಕು. ತರಬೇತಿಗೆ ದೈಹಿಕ ಅರ್ಹತಾ ಸಾಮರ್ಥ್ಯವೂ ಬೇಕಾಗಿದ್ದು, ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕಾಗಿರುತ್ತದೆ. ಅಭ್ಯರ್ಥಿಯು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರಬೇಕಾಗಿದ್ದು, ಆಧಾರ್ ಸಂಖ್ಯೆಯೊಂದಿಗೆ ಖಾತೆ ಜೋಡಣೆಯಾಗಿರಬೇಕು. ಬ್ಯಾಂಕ್ ಖಾತೆಯ ಪಾಸ್‌ಪುಸ್ತಕದ ನಕಲು ಪ್ರತಿಯನ್ನು ಆಯ್ಕೆಯಾದವರು ನಿಗಮಕ್ಕೆ ನೀಡಬೇಕಾಗಿರುತ್ತದೆ.

ಬೇಕಾಗುವ ದಾಖಲಾತಿಗಳು:-

ಹೆಚ್ಚಿನ ವಿವರಗಳಿಗೆ ಚಿಕ್ಕಬಳ್ಳಾಪುರ ನಗರದ ಪ್ರಶಾಂತ ನಗರದಲ್ಲಿರುವ ಸಾರಿಗೆ ನಿಗಮದ ವಿಭಾಗೀಯ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಆಯಾ ವ್ಯಾಪ್ತಿಯ ಘಟಕಗಳನ್ನು ಅಂದರೆ ಕೆಎಸ್ಸಾರ್ಟಿಸಿ ಬಸ್ ಡಿಪೋಗಳ ಕಚೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 22 ಕಡೆಯ ದಿನಾಂಕವಾಗಿರುತ್ತದೆ.

ಅಭ್ಯರ್ಥಿಗಳು ಎಲ್ಲಾ ದಾಖಲೆಗಳೊಂದಿಗೆ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರಗಳನ್ನು ಅರ್ಜಿಗೆ ಅಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಿಭಾಗೀಯ ಕಚೇರಿ, ಪ್ರಶಾಂತ ನಗರ, ಚಿಕ್ಕಬಳ್ಳಾಪುರ-562101 ಇಲ್ಲಿಗೆ ಒಂದು ಸೆಟ್ ಅನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ನವೆಂಬರ್ 23 ರ ಸಂಜೆ 5.30 ರೊಳಗಾಗಿ ತಲುಪುವಂತೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ನವೆಂಬರ್ 24 ರಂದು ಆಯ್ಕೆ ಪಟ್ಟಿ ಪ್ರಕಟವಾಗಲಿದೆ.

ಶಿಷ್ಯವೇತನ ಸಹಿತದ ಈ ತಾಂತ್ರಿಕ ಅಪ್ರೆಂಟಿಸ್ ತರಬೇತಿಯ ಪ್ರಯೋಜನವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಅಭ್ಯರ್ಥಿಗಳು ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿರುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಲು ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಹಿಮವರ್ಧನ ನಾಯ್ಡು ಅಲ್ಲೂರಿ ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+