ಬಲಿಜ ಸಮುದಾಯದ ಅಭಿವೃದ್ಧಿ ಮಾಡಿದ್ದು ಬಿಜೆಪಿ, ಆದ್ರೆ ಮೀಸಲಾತಿ ಕಸಿದಿದ್ದು ಕಾಂಗ್ರೆಸ್-ಡಾ.ಕೆ. ಸುಧಾಕರ್
ಚಿಕ್ಕಬಳ್ಳಾಪುರ, ಏಪ್ರಿಲ್ 29: ಬಲಿಜ ಸಮುದಾಯಕ್ಕೆ ಕೈವಾರದ ತಾತಯ್ಯನವರ ಜಯಂತಿ ಮಾಡಿದ್ದು ಬಿಜೆಪಿ, ಬಲಿಜ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ಬಿಜೆಪಿ, ಕೈವಾರ ತಾತಯ್ಯನವರ ಅಧ್ಯಯನ ಪೀಠ ಸ್ಥಾಪಿಸಿದ್ದು ಬಿಜೆಪಿ, ಶಿಕ್ಷಣಕ್ಕೆ 2ಎ ಮೀಸಲಾತಿ ನೀಡಿರುವುದೂ ಬಿಜೆಪಿ. ಹಾಗಾಗಿ ಸಮುದಾಯದ ಅಭಿವೃದ್ಧಿಗೆ ಸಹಕರಿಸಿದ ಬಿಜೆಪಿ ಬೆಂಬಲಿಸುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದರು.
ತಾಲೂಕಿನ ಅಜ್ಜವಾರ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಅವರು, 2ಎ ಮೀಸಲಾತಿಯಲ್ಲಿದ್ದ ಬಲಿಜ ಸಮುದಾಯವನ್ನು 1994ರಲ್ಲಿ ತೆಗೆದಿದ್ದು ಕಾಂಗ್ರೆಸ್ ಸರ್ಕಾರ. ಇಂತಹ ಕಾಂಗ್ರೆಸ್ ಪಕ್ಷಕ್ಕೆ ಬಲಿಜ ಸಮುದಾಯದ ಮತ ಕೇಳಲು ಯಾವುದೇ ನೈತಿಕತೆ ಇಲ್ಲದಿದ್ದು, ಬಲಿಜ ಸಮುದಾಯದ ಮತ ಕೇಳಲು ಕಾಂಗ್ರೆಸ್ ನವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಕಿಡಿಕಾರಿದರು.

2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಬಲಿಜ ಸಮುದಾಯದ ಶಿಕ್ಷಣಕ್ಕೆ 2ಎ ಮೀಸಲಾತಿ ನೀಡಿದ್ದರೆ, ಬಸವರಾಜ ಬೊಮ್ಮಾಯಿ ಅವರು ಬಲಿಜ ಸಮುದಾಯವನ್ನು 2ಸಿ ಮೀಸಲಾತಿಗೆ ಸೇರಿಸಿ, ಉದ್ಯೋಗಕ್ಕೂ ಶೇ.4 ರಿಂದ ಶೇ.6ಕ್ಕೆ ಮೀಸಲಾತಿ ಹೆಚ್ಚಿಸಿದ್ದಾರೆ. ಬಲಿಜ ಸಮುದಾಯದ ಎಲ್ಲ ರೀತಿಯ ಅಬಿವೃದ್ಧಿ ಮಾಡಿರುವುದು ಬಿಜೆಪಿಯಾಗಿದ್ದು, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ವ್ಯಕ್ತಿ ಮುಖ್ಯವೊ, ಸಮುದಾಯದ ಏಳಿಗೆ ಮುಖ್ಯವೊ
ಸತತವಾಗಿ ಸಮುದಾಯದ ಶ್ರೇಯಸ್ಸಿಗಾಗಿ ಶ್ರಮಿಸಿರುವ ಬಿಜೆಪಿ ಮುಖ್ಯವೋ, ಸಮುದಾಯದ ವ್ಯಕ್ತಿ ಮುಖ್ಯವೋ ತೀರ್ಮಾನಿಸಬೇಕಾದ ಅಗತ್ಯವಿದೆ. ಬಲಿಜ ಸಮುದಾಯಕ್ಕೆ ಸಹಕಾರ ನೀಡಿರುವುದು ಬಿಜೆಪಿ ಆದರೆ, ಇದ್ದ ಮೀಸಲಾತಿ ಕಸಿದುಕೊಂಡಿರುವುದು ಕಾಂಗ್ರೆಸ್. ಹಾಗಾಗಿ ಬಿಜೆಪಿ ಪರ ಮತ ನೀಡುವಂತೆ ಅವರು ಕೋರಿದರು.
ಈ ಹಿಂದೆ ನೀವು ನೀಡಿದ ಒಂದು ಮತ ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಆರೋಗ್ಯ ಕಾಪಾಡಿದೆ, ನಿಮ್ಮ ಒಂದು ಮತದಿಂದ ರಾಜ್ಯದಲ್ಲಿ ಕೋವಿಡ್ ಎದುರಿಸುವ ಶಕ್ತಿ ನೀಡಿದೆ. ನೂರು ವರ್ಷಕ್ಕೆ ಒಮ್ಮೆ ಬರುವ ಭಯಾನಕ ಸಂಕ್ರಾಮಿಕ ರೋಗ ತಾವು ಸಚಿವರಾಗಿದ್ದಾಗಲೇ ಬಂದಿತು, ಇದರಿಂದ ನಾನಾ ಸಂಕಷ್ಟಗಳನ್ನು ನೀವು ಎದುರಿಸಿದ್ದೀರಿ, ಆಗ ಕಾಂಗ್ರೆಸ್ ನವರು ಎಲ್ಲಿದ್ದರು ಎಂದು ಪ್ರಶ್ನಿಸಿದರು.

ಜನರು ಕಷ್ಟದಲ್ಲಿದ್ದಾಗ ಬಾರದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಈಗ ಬಂದು ಕಾಲು ಹಿಡಿಯುತ್ತಿರುವವರು ಒಬ್ಬರು, ಕಣ್ಣೀರು ಹಾಕುವವರು ಮತ್ತೊಬ್ಬರು. ಹೀಗೆ ಸ್ವಾರ್ಥ ಸಾಧನೆಗಾಗಿ ಬಂದವರು ಬೇಕಾ ಅಥವಾ ನಿಮ್ಮ ಕಷ್ಟಕ್ಕೆ ಸ್ಪಂದಿಸುವ ನಾಯಕ ಬೇಕಾ ತೀರ್ಮಾನಿಸುವಂತೆ ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ರೈತರು ಬೆಳೆದ ಬೆಳೆ ಮಾರಾಟ ಮಾಡದ ಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ, ನಗರ ವ್ಯಾಪ್ತಿಯಲ್ಲಿ ತರಕಾರಿ ಇಲ್ಲದೆ ಸಂಕಷ್ಟ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ ರೈತರಿಂದ ತರಕಾರಿ ಖರೀದಿಸಿ, ಕ್ಷೇತ್ರದಾದ್ಯಂತ ಹಂಚುವ ಮೂಲಕ ಉಭಯತ್ರರಿಗೂ ನೆರವಾಗಿದ್ದೇವೆ. ಜೊತೆಗೆ ಆಹಾರ ಸಾಮಗ್ರಿಗಳನ್ನು ಪ್ರತಿ ಮನೆಗೆ ಕಳುಹಿಸಲಾಗಿದೆ, ಅಂದು ಜಾತಿ ನೋಡಿಲ್ಲ, ಮತ ಹಾಕಿದ್ದಾರಾ ಇಲ್ಲವಾ ನೋಡಿಲ್ಲ. ಇಂತಹ ಸಮಯದಲ್ಲಿ ಈ ಎರಡೂ ಪಕ್ಷಗಳ ಮುಖಂಡರು ಎಲ್ಲಿ ಹೋಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರಿಗೆ ಊಟ ಕೊಡದೆ, ಅವರ ಊಟ ಕಸಿದುಕೊಳ್ಳುತ್ತಿದ್ದಾರೆ
ಸಂಕಷ್ಟ ಸಂದರ್ಭದಲ್ಲಿ ಬಾರದ ಇವರು ಇಂದು ದಲಿತರ ಮನೆಗೆ ಹೋಗಿ ಊಟ ಮಾಡುತ್ತಿದ್ದಾರೆ, ಇವರು ತಿಂದಿದ್ದೂ ದಲಿತರಿಗೆ ನಷ್ಟವೇ, ಅವರಿಗೆ ಊಟ ಕೊಡುವ ಬದಲು ಅವರ ಮನೆಯಲ್ಲಿ ಊಟ ಮಾಡಿ ಬರುತ್ತಿದ್ದಾರೆ. ದಲಿತರ ಜೀವನ ಅಸ್ತವ್ಯಸ್ತವಾಗಿತ್ತು, ಅವರ ಜೀವನ ಸುಧಾರಿಸುವ ಕೆಲಸಬೇಕಿತ್ತು, ದಲಿತರ, ಹಿಂದುಳಿದವರ ಉದ್ಧಾರಕರು ಎಂದು ಹೇಳಿಕೊಂಡವರು ಮೀಸಲಾತಿ ಹೆಚ್ಚಿಸಲಿಲ್ಲ ಎಂದು ಆರೋಪಿಸಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಮೀಸಲಾತಿ ರದ್ದು ಮಾಡುತ್ತಾರೆ, ಸಂವಿಧಾನ ತಿದ್ದುಪಡಿ ಮಾಡುತ್ತಾರೆ ಎಂದರು, ಆದರೆ ಮೋದಿ ಅವರು ಪ್ರಧಾನಿಯಾಗಿ 9 ವರ್ಷ ಆಗಿದೆ, ಸಂವಿಧಾನ ತಿದ್ದುಪಡಿಯೂ ಇಲ್ಲ, ಮೀಸಲಾತಿ ರದ್ದೂ ಇಲ್ಲ. ಬದಲಿಗೆ ಪರಿಶಿಷ್ಟರಿಗೆ, ಹಿಂದುಳಿದವರಿಗೆ, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಲಾಗಿದೆ ಎಂದು ಹೇಳಿದರು.
2013ರ ಚುನಾವಣೆ ನಂತರ ಜನರ ಸಂಪರ್ಕದಲ್ಲಿಯೇ ಇಲ್ಲದ ಜೆಡಿಎಸ್ ಅಭ್ಯರ್ಥಿ ಈಗ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ವೈದ್ಯಕೀಯ ಕಾಲೇಜು, ರಸ್ತೆ, ಕೆರೆಯಲ್ಲಿ ತುಂಬಿರುವ ನೀರು ಸೇರಿ ಕ್ಷೇತ್ರದ ಪ್ರತಿ ಅಭಿವೃದ್ಧಿಯಲ್ಲಿಯೂ ತಮ್ಮ ಛಾಯೆ ಕಾಣುತ್ತಿದೆ. 10 ವರ್ಷಗಳ ಅಭಿವೃದ್ಧಿಯನ್ನು ಬೆಂಬಲಿಸಬೇಕು, ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.












Click it and Unblock the Notifications