ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ
ಚಿಕ್ಕಬಳ್ಳಾಪುರ, ಜನವರಿ 03: ಬೆಂಗಳೂರಿನ ವ್ಯಕ್ತಿಯೊಬ್ಬರು ಇಲ್ಲಿನ ನಂದಿ ಗ್ರಾಮದ ಭೋಗನಂದಿಶ್ವರ ದೇವಾಲಯದ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.
ಚಿಕ್ಕಬಳ್ಳಾಪುರ ಮೂಲದ, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಸಿರುವ ಶ್ರೀರಾಮ (55) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರನ ದೇವಾಲಯಕ್ಕೆ ಬಂದಿದ್ದ ಇವರು, ತಡರಾತ್ರಿ ದೇವಾಲಯದ ಸಾಲುಮಂಟಪಗಳ ಬಳಿ ಮದ್ಯಪಾನ, ಧೂಮಪಾನ ಮಾಡಿದ್ದಾರೆ. ನಂತರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದು ಸಾಧ್ಯವಾಗದ ಕಾರಣ ಸಾಲುಮಂಟಪದ ಕಲ್ಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇವಸ್ಥಾನಕ್ಕೆ ಮುಂಜಾನೆ ಬಂದ ಭಕ್ತರು ಆತ್ಮಹತ್ಯೆ ಮಾಡಿಕೊಂಡಿರುವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತರ ಬಳಿ ಚೀಟಿಯೊಂದು ಸಿಕ್ಕಿದ್ದು, ಅದರಲ್ಲಿ, ಕೃಷ್ಣಪ್ಪ, ಪ್ರಶಾಂತನಗರ, ಬ್ಯಾಡ್ ಟೈಂ ಎಂದು ಬರೆದಿದೆ. ಪೊಲೀಸರು ಚಿಕ್ಕಬಳ್ಳಾಪುರದ ಪ್ರಶಾಂತನಗರದಲ್ಲಿ ವಿಚಾರಿಸಿದಾಗ ಮೃತಪಟ್ಟ ವ್ಯಕ್ತಿ ಕೃಷ್ಣಪ್ಪ ಅವರ ತಮ್ಮ ಶ್ರೀರಾಮ ಎಂಬುದು ತಿಳಿದುಬಂದಿದೆ.

ಶ್ರೀರಾಮ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಸಿದ್ದು, ಕಾಮಾಕ್ಷಿ ಪಾಳ್ಯದಲ್ಲಿ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ವರ್ಕ್ ಶಾಪ್ ಇಟ್ಟುಕೊಂಡಿದ್ದರು. ಅವರಿಗೆ ಹೆಂಡತಿ, ಮಗ, ಮಗಳಿದ್ದಾರೆ. ಕೌಟುಂಬಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications