ತಮಿಳುನಾಡಿಗಾಗಿ ಒಂದಾಗಲು ನಿರ್ಧರಿಸಿದ ಕಮಲ್ ಹಾಸನ್, ರಜನಿಕಾಂತ್
ಚೆನ್ನೈ, ನವೆಂಬರ್ 20: ತಮಿಳುನಾಡು ರಾಜಕೀಯದಲ್ಲಿ ಅಚ್ಚರಿಗಳು ಘಟಿಸುವುದು ಹೊಸತೇನಲ್ಲ. ಇದ್ದಕ್ಕಿದ್ದಂತೇ ರಾಜಕೀಯಕ್ಕೆ ಧುಮುಕಿ ಪ್ರಸಿದ್ಧರಾದವರಿದ್ದಾರೆ, ರಾಜಕೀಯದ ಉತ್ತುಂಗದಲ್ಲಿದ್ದವರು ಇದ್ದಕ್ಕಿದ್ದಂತೆ ನೇಪಥ್ಯಕ್ಕೆ ಸರಿದವರಿದ್ದಾರೆ.
ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿರುವ ತಮಿಳುನಾಡು ರಾಜಕೀಯಕ್ಕೆ ನಟರಾದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಎಂಟ್ರಿ ನೀಡುತ್ತಾರೆ ಎಂಬ ಊಹಾಪೋಹಗಳು ಇದೀಗ ದಟ್ಟವಾಗಿವೆ.
ಅದಕ್ಕೆ ಪುಷ್ಠಿ ನೀಡುವಂತೆ ನಟ ದಿಗ್ಗಜರಾದ ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರು ಒಬ್ಬರನ್ನೊಬ್ಬರು ಬೆಂಬಲಿಸಿ ಮಾತನಾಡಿದ್ದು, "ತಮಿಳುನಾಡು ರಾಜಕೀಯಕ್ಕೆ ಅಗತ್ಯಬಿದ್ದರೆ ನಾವಿಬ್ಬರೂ ಒಟ್ಟಾಗಿ ಪ್ರಯಾಣ ಮಾಡುತ್ತೇವೆ" ಎಂದಿದ್ದಾರೆ.

ಇತ್ತೀಚೆಗೆ ಒಡಿಶಾದಿಂದ ಗೌರವ ಡಾಕ್ಟರೇಟ್ ಪಡೆದ ಕಮಲ್ ಹಾಸನ್, ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ "ತಮಿಳುನಾಡು ಅಭಿವೃದ್ಧಿಗೆ ಅಗತ್ಯವಿದೆ ಎಂದಾದರೆ ನಾನು ಮತ್ತು ರಜನಿಕಾಂತ್ ಇಬ್ಬರೂ ಒಟ್ಟಾಗಿ ಪ್ರಯಾಣ ಮಾಡುತ್ತೇವೆ. ಮೊದಲು ಕೆಲಸ ಮುಖ್ಯ, ನಂತರ ಸಿದ್ಧಾಂತದ ಬಗ್ಗೆ ಮಾತು. ನಾವು ಕಳೆದ 43 ವರ್ಷಗಳಿಂದಲೂ ಒಂದಾಗಿಯೇ ಇದ್ದೇವೆ. ಈಗ ಇಬ್ಬರೂ ಒಟ್ಟಿಗೇ ಪ್ರಯಾಣ ಮಾಡುವುದರಲ್ಲಿ ಪವಾಡವೇನಿಲ್ಲ" ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಗೋವಾದಲ್ಲಿ ರಜನಿಕಾಂತ್ ಪತ್ರಕರ್ತರೊಂದಿಗೆ ಮಾತನಾಡಿ, ತಮಿಳುನಾಡ ಜನರ ಅಭಿವೃದ್ಧಿಗೆ ಅಗತ್ಯ ಎಂಮದಾದರೆ ನಾನು ಮತ್ತು ಕಮಲ್ ಹಾಸನ್ ಕೈಜೋಡಿಸಲು ಸಿದ್ಧ" ಎಂದಿದ್ದಾರೆ.
ಇತ್ತೀಚೆಗಷ್ಟೆ, "ತಮಿಳುನಾಡು ರಾಜಕೀಯದಲ್ಲಿ ನಿರ್ವಾತ ಸೃಷ್ಟಿಯಾಗಿದೆ" ಎಂಬ ಸೂಪರ್ ಸ್ಟಾರ್ ರಜನೀಕಾಂತ್ ಅವರ ಹೇಳಿಕೆಗೆ ಬೆಂಬಲ ನೀಡಿದ್ದ ಬಹುಭಾಷಾ ನಟ ಕಮಲ್ ಹಾಸನ್, "ತಮಿಳುನಾಡು ಸಮರ್ಥ ನಾಯಕರ ಕೊರತೆ ಎದುರಿಸುತ್ತಿದೆ" ಎಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications