ಚೆನ್ನೈನಲ್ಲಿ 'ನೀರಿಗಾಗಿ ಯುದ್ಧ' ಬಿಸಿಲಿನ ಬೇಗೆ, ಆತಂಕದಲ್ಲಿ ಜನತೆ
ಚೆನ್ನೈ, ಜೂನ್ 18: ದೇಶದ ಪ್ರಮುಖ ನಗರ ಚೆನ್ನೈನಲ್ಲಿ ಇಂದು ಕುಡಿಯುವ ನೀರಿಗೆ ಬರ ಬಂದಿದೆ. ನೀರಿಗಾಗಿ ಹಾದಿ ಬೀದಿಯಲ್ಲಿ ಜಗಳ, ಕಿತ್ತಾಟ, ಚಾಕು ಇರಿತ ಘಟನೆಗಳಾಗಿವೆ.
ಮುಂಗಾರು ಕೈ ಕೊಟ್ಟಿದ್ದರಿಂದ ನಗರಕ್ಕೆ ಸರಿಯಾದ ಸಮಯದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ನಗರದ ಹೊರ ವಲಯದ ಕೆರೆಗಳನ್ನು ಆಶ್ರಯಿಸಲಾಗಿದೆ. ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಂ ಕಡ್ಡಾಯಗೊಳಿಸಿವೆ, ಹೋಟೆಲ್ ಗಳು ಅವಧಿಗೆ ಮುನ್ನ ಬಂದ್ ಆಗುತ್ತಿವೆ.
ತಮಿಳುನಾಡಿನಲ್ಲಿ ಮುಂಗಾರು ಪೂರ್ವ ಮಳೆ ಕೂಡಾ ಕೈಕೊಟ್ಟಿದ್ದರಿಂದ ರಾಜ್ಯದ ಪ್ರಮುಖ ನೀರಿನ ಮೂಲಗಳಾದ ರೆಡ್ ಹಿಲ್, ಶೋಲಾವರಂ ಮತ್ತು ಚೆಂಬರಂಬಕ್ಕಂನ ಕೆರೆಗಳು ಬತ್ತಿ ಹೋಗಿವೆ. ಕೆಲ ಕೆರೆಗಳಲ್ಲಿ ಮಾತ್ರ ಅಲ್ಪಪ್ರಮಾಣದ ನೀರಿದ್ದು, ನೀರಿನ ಪೂರೈಕೆ ಮಾಡಬೇಕಾಗಿದೆ.
ವಾಡಿಕೆಯಂತೆ ಕೇರಳ, ಕರ್ನಾಟಕ ಬಳಿಕ ಜುಲೈನಲ್ಲಿ ತಮಿಳುನಾಡಿನಲ್ಲಿ ಮಳೆ ನಿರೀಕ್ಷಿಸಲಾಗಿದೆ. ಆದರೆ, ಮುಂಗಾರು ಆಗಮನಕ್ಕೂ ಮುನ್ನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಮಾಮೂಲಿ ಎಂದು ನಗರ ಪಾಲಿಕೆ ಜಲ ಮಂಡಳಿ ಕೈಕಟ್ಟಿ ಕುಳಿತಿರುವುದು ನಾಗರಿಕರನ್ನು ಕೆರಳಿಸಿದೆ. ಇನ್ನೊಂದೆಡೆ ಸರಾಸರಿ 40 ಡಿಗ್ರಿ ಸೆಲ್ಸಿಯಸ್ ನಷ್ಟು ಸುಡು ಬಿಸಿಲಿನ ತಾಪಕ್ಕೆ ಜನರು ಬೆಂದು ಹೋಗುತ್ತಿದ್ದಾರೆ. ಚೆನ್ನೈನಗರದ ಮೆಟ್ರೋ ರೈಲು, ಸಾರಿಗೆ ಸಂಸ್ಥೆಗೂ ನೀರಿನ ಬರ ಎದುರಾಗಿದೆ.

ಚೆನ್ನೈ ನಗರದ ಕುಡಿಯುವ ನೀರಿನ ಅಗತ್ಯವೆಷ್ಟು?
ಚೆನ್ನೈ ನಗರಕ್ಕೆ ನೀರು ಒದಗಿಸುವ ಅಣೆಕಟ್ಟಿಗಳಲ್ಲಿ ನೀರು ಡೆಡ್ ಸ್ಟೋರೇಜ್ ಹಂತದಲ್ಲಿದೆ. ಸುಮಾರು 90 ಬಾವಿಗಳಲ್ಲಿ ನೀರಿಲ್ಲ, ಕೊಳವೆ ಬಾವಿ ಬಳಕೆ ಮಾಡದಂತೆ ಸೂಚಿಸಲಾಗಿದೆ. ಅಂತರ್ಜಲ ಬತ್ತಿ ಹೋಗಿದ್ದು, ಟಿ ನಗರ, ಅಡ್ಯಾರ್, ವಡಪಳನಿ, ಅಶೋಕ್ ನಗರ್, ಮದುರವೋಯಲ್ ಮುಂತಾಡೆದೆ ತೀವ್ರ ಸಮಸ್ಯೆ ಎದುರಾಗಿದೆ. ಚೆನ್ನೈಗೆ ಪ್ರತಿದಿನ ಸರಾಸರಿ 830ಮಿಲಿಯನ್ ಲೀಟರ್ ಅಗತ್ಯವಿದೆ.

ಶಾಲಾ, ಕಾಲೇಜುಗಳಿಗೆ ರಜೆ
ಬಿಸಿಲಿನ ಬೇಗೆ, ನೀರಿನ ಸಮಸ್ಯೆಯಿಂದ ಬಳಲಿರುವ ವಿರುಗಂಬಾಕ್ಕಂ, ಮಾಂಬಳಂ, ವಲಸರವಾಕ್ಕಂ, ಕೊಯಂಬೇಡು ಸೇರಿದಂತೆ ಹಲವೆಡೆ ಶಾಲಾ, ಕಾಲೆಜುಗಳಿಗೆ ರಜೆ ಘೋಷಿಸಲಾಗಿದೆ. ಮಧ್ಯಾಹ್ನ ಬಿಸಿಯೂಟಕ್ಕೂ ನೀರಿಲ್ಲದ್ದಂಥ ಪರಿಸ್ಥಿತಿ ಇದೆ. ಕೆರೆ, ಸಮುದ್ರ ನೀರಿನ ಪುನರ್ ಬಳಕೆ ಘಟಕಗಳಿಂದ 530 ಮಿಲಿಯನ್ ಲೀಟರ್ ಸಂಗ್ರಹಿಸಿದರೂ ದಿನಕ್ಕೆ 300 ಮಿಲಿಯನ್ ಲೀಟರ್ ಕೊರತೆ ಎದುರಾಗಿದೆ.

ಐಟಿ ಕಂಪನಿಗಳಿಗೆ ತಟ್ಟಿದ ಬಿಸಿ
ಚೆನ್ನೈನ ಸಿರುಪೇರಿ, ಮಹಾಬಲಿಪುರಂ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ವಿಪ್ರೋ, ಕಾಗ್ನಿಜೆಂಟ್ ಸೇರಿದಂತೆ ಹಲವು ಕಂಪನಿಗಳು ತಮ್ಮ ಸಿಬ್ಬಂದಿಗೆ ವರ್ಕ್ ಫ್ರಂ ಹೋಂ ಆಯ್ಕೆ ಮಾಡಿಕೊಳ್ಳಲು ಸೂಚಿಸಿವೆ. ಕಚೇರಿಗೆ ಬಂದರೆ, ಊಟ ಮಾಡಲು ಪೇಪರ್ ಪ್ಲೇಟ್ ತರುವಂತೆ ಸೂಚಿಸಲಾಗಿದೆ. ಕಚೇರಿ ಎಸಿ, ಗಾರ್ಡನ್, ವಾಹನ ಸಿಬ್ಬಂದಿಗೂ ನೀರಿನ ಬಿಸಿ ತಟ್ಟಿದೆ. ಹೀಗಾಗಿ, ಸಾಧ್ಯವಾದಷ್ಟು ಪರ್ಯಾಯ ಮಾರ್ಗ ಅನುಸರಿಸಿ, ಮನೆಯಂದಲೇ ವರ್ಕ್ ಮಾಡಿ ಎಂದು ನಿರ್ದೇಶನ ನೀಡಲಾಗಿದೆ. ಸುಮಾರು 12 ಕಂಪನಿಗಳ ಸಾವಿರಾರು ಉದ್ಯೋಗಿಗಳು ಸದ್ಯ ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ. ಮಿಕ್ಕವರು ಅನಿವಾರ್ಯವಾಗಿ ಕಚೇರಿಗೆ ಬರುತ್ತಿದ್ದಾರೆ.

ಅವಧಿಗೆ ಮುನ್ನ ಮುಚ್ಚುತ್ತಿರುವ ಹೋಟೆಲ್
ಚೆನ್ನೈ ಸೇರಿದಂತೆ ತಮಿಳುನಾಡಿನ ಪ್ರಮುಖ ನಗರಗಳಲ್ಲಿ 8000ಕ್ಕೂ ಅಧಿಕ ಹೋಟೆಲ್ ರೆಸ್ಟೋರೆಂಟ್ಗಳು ನೀರು, ಎಸಿ ವ್ಯವಸ್ಥೆ ಸಮಸ್ಯೆ ಎದುರಿಸುತ್ತಿವೆ. ಹೋಟೆಲ್ ಉದ್ಯಮ ಬಳಕೆಗೆ. ಪ್ರತಿನಿತ್ಯ 156 ದಶಲಕ್ಷ ಲೀಟರ್ ನೀರು ಬೇಕಾಗುತ್ತದೆ. ಆದರೆ, ಈಗ ನೀರಿನ ಬರ ಎದುರಾಗಿದ್ದು, ಹೋಟೆಲ್, ರೆಸ್ಟೋರೆಂಟ್ಗಳು ಅವಧಿಯನ್ನು ಕಡಿತಗೊಳಿಸಲಾಗಿದೆ. ಬೆಳಗ್ಗೆ ತೆರೆಯದೆ ಹಲವೆಡೆ ಪೇಪರ್ ಗ್ಲಾಸ್, ತಟ್ಟೆ, ಬಾಳೆ ಎಲೆಗಳನ್ನು ಬಳಕೆಯಾಗುತ್ತಿದೆ. ಮಾಲ್ಗಳಲ್ಲಿ ಮರು ಬಳಕೆ ನೀರನ್ನು ಶೌಚಗೃಹಗಳಲ್ಲಿ ನೀಡಲಾಗುತ್ತಿದೆ.

ಏನಾಯಿತು ಸರ್ಕಾರದ 500 ಕೋಟಿ ಯೋಜನೆ
ಪ್ರಸಕ್ತ ವರ್ಷದ ಕುಡಿಯುವ ನೀರಿನ ಪೂರೈಕೆಗಾಗಿ ಆಡಳಿತರೂಢ ಎಐಎಡಿಎಂಕೆ ಸರ್ಕಾರವು 500 ಕೋಟಿ ರು ವೆಚ್ಚದ ಯೋಜನೆ ರೂಪಿಸಿದೆ. 29 ಜಿಲ್ಲೆಗಳ ಅಂತರ್ಜಲ ಮಟ್ಟ ಕಾಯ್ದುಕೊಳ್ಳುವುದು, ಕೆರೆಗಳ ಪುನಶ್ಚೇತನ, ಪರ್ಯಾಯ ಮಾರ್ಗಗಳಿಗೆ ಬೆಂಬಲ ಮುಂತಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಆದರೆ, ಸಮಸ್ಯೆ ಉಲ್ಬಣವಾಗಿದೆ. ಸದ್ಯಕ್ಕೆ ಚೆನ್ನೈ ನಗರ ಪೂರೈಕೆಗೆ 525 ಎಂಎಲ್ ಡಿ ನೀರುಮಾತ್ರ ಇದೆ, ರೆಡ್ ಹಿಲ್, ಶೋಲಾವರಂ, ಚೆಂಬರಾಬಾಕ್ಕಂ ಕೆರೆಗಳು ಬತ್ತಿವೆ ಎಂದು ಚೆನ್ನೈ ನಗರ ಜಲ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿಎನ್ ಹರಿಹರನ್ ಹೇಳಿದ್ದಾರೆ.












Click it and Unblock the Notifications