Breaking: ಬಾಲಕಿ ಸಾವಿನ ಪ್ರಕರಣ: ತಮಿಳುನಾಡಲ್ಲಿ ಹಿಂಸಾಚಾರ
ಚೆನ್ನೈ, ಜುಲೈ 17 : ತಮಿಳುನಾಡಿನ ಕಲ್ಲಕುರಿಚಿ ಬಳಿ ಶಾಲಾ ಬಾಲಕಿಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾ ರೂಪ ಪಡೆದಿದ್ದು, ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ್ದಾರೆ. ಹಿಂಸಾಚಾರದಲ್ಲಿ ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದು, ಲಾಠಿ ಚಾರ್ಜ್ ನಡೆಸಲಾಗಿದೆ.
ಪ್ರತಿಭಟನಾಕಾರರು ಚಿನ್ನಸೇಲಂನಲ್ಲಿರುವ ಶಾಲೆಯ ಆವರಣಕ್ಕೆ ನುಗ್ಗಿ, ಸಂಸ್ಥೆಯ ಆವರಣದಲ್ಲಿ ನಿಲ್ಲಿಸಿದ್ದ ಬಸ್ಗಳಿಗೆ ಬೆಂಕಿ ಹಚ್ಚಿದರು. ಜೊತೆಗೆ ಪೊಲೀಸ್ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿದರು ಎಂದು ಪೊಲೀಸರು ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ಡಿಜಿಪಿ ಸಿ ಸೈಲೇಂದ್ರ ಬಾಬು, "ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದ ಕಾರಣ ಲಾಠಿಚಾರ್ಜ್ ಮಾಡಬೇಕಾಯಿತು. ಈಗ ಹೆಚ್ಚುವರಿಯಾಗಿ 500 ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಶಾಲೆಯ ಮೇಲೆ ದಾಳಿ ಮಾಡಿದ ಎಲ್ಲಾ ಆರೋಪಿಗಳನ್ನು ಬಂಧಿಸುತ್ತೇವೆ, ಯಾರನ್ನೂ ಬಿಡುವುದಿಲ್ಲ. ನಮ್ಮ ಬಳಿ ಘಟನೆಯ ವಿಡಿಯೋಗಳೂ ಇವೆ" ಎಂದಿದ್ದಾರೆ.
"ಶಾಲಾ ಬಾಲಕಿ ಸಹಜ ಸಾವಿಗೀಡಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮತ್ತೊಂದು ಮರಣೋತ್ತರ ಪರೀಕ್ಷೆಗಾಗಿ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದರು. ಸಣ್ಣ ಗುಂಪೊಂದು ಶಾಲೆಯಲ್ಲಿ ಪ್ರತಿಭಟನೆ ನಡೆಸಲು ಬಂದಿತ್ತು, ನಾವು ಅದಕ್ಕೆ ವ್ಯವಸ್ಥೆ ಮಾಡಿದ್ದೇವು. ಆದರೆ ಅವರು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆ ತಂದಿದ್ದರು" ಎಂದಿದ್ದಾರೆ.
ಪ್ರಕರಣವೇನು?; ತಮಿಳುನಾಡಿನ ಕಲ್ಲಕುರಿಚಿ ಬಳಿಯ ಚಿನ್ನ ಸೇಲಂನಲ್ಲಿರುವ ಖಾಸಗಿ ಹೈಯರ್ ಸೆಕೆಂಡರಿ ಶಾಲೆಯ 12 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಗೆ ಇಬ್ಬರು ಶಿಕ್ಷಕರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು.
ಶಿಕ್ಷಕರು ಆರೋಪವನ್ನು ನಿರಾಕರಿಸಿದ್ದಾರೆ. ವಿದ್ಯಾರ್ಥಿಯ ಪೋಷಕರು ಮತ್ತು ಸಂಬಂಧಿಕರು ಬುಧವಾರ ಕಲ್ಲಾಕುರಿಚಿ-ಸೇಲಂ ಹೆದ್ದಾರಿಯನ್ನು ತಡೆದು ಶಾಲಾ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]