ನಿಟ್ಟುಸಿರು ಬಿಟ್ಟ ನೀಲಗಿರಿ ಜಿಲ್ಲೆ ಜನ; ನರಭಕ್ಷಕ ಹುಲಿ ಸೆರೆ
ಚೆನ್ನೈ, ಅಕ್ಟೋಬರ್ 15; ತಮಿಳುನಾಡಿನ ನೀಲಗಿರಿ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ನಾಲ್ವರನ್ನು ಕೊಂದು ಹಾಕಿದ್ದ ನರಭಕ್ಷಕ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. 22 ದಿನಗಳ ಕಾಲ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು.
20 ಜಾನುವಾರ ಮತ್ತು ನಾಲ್ವರನ್ನು ಕೊಂದಿದ್ದ MDT23 ಹುಲಿ ನೀಲಗಿರಿ ಜಿಲ್ಲೆಯಲ್ಲಿ ಆತಂಕ ಮೂಡಿಸಿತ್ತು. ಹುಲಿಯನ್ನು ಕೊಲ್ಲಲು ತಮಿಳುನಾಡಿನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದರು.
ಆದರೆ ಮದ್ರಾಸ್ ಹೈಕೋರ್ಟ್ ಹುಲಿಯನ್ನು ಕೊಲ್ಲಬೇಡಿ. ಜೀವಂತವಾಗಿ ಸೆರೆ ಹಿಡಿಯಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಕಳೆದ 22 ದಿನಗಳಿಂದ ವಿವಿಧ ತಂಡಗಳಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು.

ಗುರುವಾರ ಹುಲಿಗೆ ಯಶಸ್ವಿಯಾಗಿ ಅರವಳಿಕೆ ಮದ್ದು ನೀಡಲಾಗಿದೆ ಎಂದು ಅರಣ್ಯ ಇಲಾಖೆ ಘೋಷಣೆ ಮಾಡಿತ್ತು. ಅರವಳಿಕೆ ಪಡೆದ ಹುಲಿಗಾಗಿ ಹುಡಕಾಟ ನಡೆಸಲಾಗುತ್ತಿತ್ತು. ಶುಕ್ರವಾರ ಅರಣ್ಯದಲ್ಲಿ ಹುಲಿ ಪತ್ತೆಯಾಗಿದೆ.
ಶುಕ್ರವಾರ MDT23 ಹುಲಿಯನ್ನು ಮಯಾರ್ ರಸ್ತೆಯ ಬಳಿಯ ಕಾಡಿನಲ್ಲಿ ಪತ್ತೆ ಹಚ್ಚಲಾಗಿದೆ. ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ವಿವರವಾದ ಯೋಜನಾ ವರದಿ ಸಲ್ಲಿಸಬೇಕು. ಕಾರ್ಯಾಚರಣೆ ವಿಡಿಯೋ ರೆಕಾರ್ಡ್ ಮಾಡಬೇಕು ಎಂದು ಪ್ರಧಾನ ಮುಖ್ಯ ಅರಣ್ಯ, ವನ್ಯಜೀವಿ ಸಂರಕ್ಷಣೆಯ ವಾರ್ಡನ್ ಶೇಖರ್ ಕುಮಾರ್ ನೀರಜ್ ಸೂಚನೆ ಕೊಟ್ಟಿದ್ದರು.
ಪ್ರಾಥಮಿಕ ಪರಿಶೀಲನೆಯ ವೇಳೆ MDT23 ಹುಲಿಯ ಮೈ ಮೇಲೆ 8 ರಿಂದ 9 ಗಾಯದ ಗುರುತು ಪತ್ತೆಯಾಗಿದೆ. ಇವುಗಳಲ್ಲಿ 3 ರಿಂದ 4 ಗಡಿ ಗುರುತು ವೇಳೆ ಹುಲಿಗಳ ಜೊತೆ ನಡೆದ ಕಾಳಗದಲ್ಲಿ ಆಗಿರುವುದು ಎಂದು ಅಂದಾಜಿಸಲಾಗಿದೆ. ಯಾವ ಗಾಯವೂ ಸಹ ಪ್ರಾಣಕ್ಕೆ ಅಪಾಯ ತರುವುದಿಲ್ಲ. ಮೈಸೂರು ಮೃಗಾಲಯದ ತಜ್ಞರು ಹುಲಿ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ ಎಂದು ಅರಣ್ಯ ಇಲಾಖೆ ಹೇಳಿದೆ.
ತಮಿಳುನಾಡಿನ ಅರಣ್ಯ ಇಲಾಖೆ ಅಧಿಕಾರಿಗಳ ಮನವಿಯಂತೆ ಕೇರಳ, ಕರ್ನಾಟಕ ಅಧಿಕಾರಿಗಳು ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು 22 ದಿನಗಳ ಕಾಲ 100ಕ್ಕೂ ಹೆಚ್ಚು ಸಿಬ್ಭಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಮದ್ರಾಸ್ ಹೈಕೋರ್ಟ್ ನಿರ್ದೇಶನದಂತೆ ಜೀವಂತವಾಗಿ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಹುಲಿಯ ಆರೋಗ್ಯ ಸ್ಥಿತಿ ನೋಡಿಕೊಂಡು ಮೃಗಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುರುವಾರ ಅರವಳಿಕೆ ಮದ್ದು ನೀಡಿದ ಬಳಿಕ ಹುಲಿಯ ಸಂಚಾರವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ಶುಕ್ರವಾರ ಬೆಳಗ್ಗೆ ಕಾಡಿನ ಅಂಚಿನಲ್ಲಿ ಹುಲಿ ಕಾಣಿಸಿಕೊಂಡಿತ್ತು. ಶುಕ್ರವಾರ ಮಧ್ಯಾಹ್ನ 2.30ರ ವೇಳೆಗೆ ಅದನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ.
ತಮಿಳುನಾಡಿನ ಅರಣ್ಯ ಸಚಿವ ಕೆ. ರಾಮಚಂದ್ರನ್ ಹುಲಿ ಹಿಡಿದ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು, "ಹುಲಿ ಜೀವಂತವಾಗಿ ಸೆರೆ ಹಿಡಿಯುವುದು ಕಷ್ಟದ ಕಾರ್ಯಾಚರಣೆಯಾಗಿತ್ತು. ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿ ಅದನ್ನು ಪೂರ್ಣಗೊಳಿಸಿದೆ. ಮುಖ್ಯಮಂತ್ರಿ ಸ್ಟಾಲಿನ್ ಅವರ ಸೂಚನೆಯಂತೆ ಹುಲಿಯನ್ನು ವಂದಲೂರು ಪ್ರಾಣಿ ಉದ್ಯಾನಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ" ಎಂದು ಹೇಳಿದ್ದಾರೆ.
ಮುದುಮಲೈ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 24ರಂದು ಹುಲಿ ಮೊದಲು ಬುಡಕಟ್ಟು ಜನಾಂಗಕ್ಕೆ ಸೇರಿದ 82 ವರ್ಷದ ಬಸವನ್ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿತ್ತು. ಬಳಿಕ ಕಾಡು ಅಂಚಿನ ಗ್ರಾಮಗಳಲ್ಲಿ ಹುಲಿ ಆತಂಕ ಮೂಡಿಸಿತ್ತು.
ತಮಿಳುನಾಡಿನ ಅರಣ್ಯ ಇಲಾಖೆಯ ಅಧಿಕಾರಿಗಳ 2 ತಂಡ, ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಇಲಾಖೆಗಳ ತಂಡಗಳು ಸೇರಿ ಒಟ್ಟು 150ಕ್ಕೂ ಹೆಚ್ಚು ಜನರು ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications