'ಅಸೆಂಬ್ಲಿಗೆ ಬೀದಿನಾಯಿ ಬಿಡ್ತೀನಿ ಹುಷಾರ್'
ಚೆನ್ನೈ, ಆ.14: ಜಯಲಲಿತಾ ನೇತೃತ್ವದ ಸರ್ಕಾರ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕದಿದ್ದರೆ ಬೀದಿನಾಯಿಗಳನ್ನು ಹಿಡಿದುಕೊಂಡು ಬಂದು ಅಸೆಂಬ್ಲಿ ಹಾಲ್ ನಲ್ಲಿ ಬಿಡ್ತೀನಿ ಹುಷಾರ್ ಎಂದು ತಮಿಳುನಾಡಿನ ಶಾಸಕರೊಬ್ಬರು ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.
ಸಾರ್ವಜನಿಕರಿಂದ ದೂರುಗಳನ್ನು ಕೇಳಿ ಕೇಳಿ ಸಾಕಾಗಿದೆ. ಸರ್ಕಾರ, ನಗರ ಪಾಲಿಕೆಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಬೀದಿನಾಯಿ ಕಡಿತ ಪ್ರಕರಣಗಳು ಎಲ್ಲೆಡೆ ಹೆಚ್ಚಾಗುತ್ತಿವೆ ಎಂದು ಶಾಸಕ ಅನ್ಬಳಗನ್ ಹೇಳಿದ್ದಾರೆ.
ಸುಮಾರು 100ಕ್ಕೂ ಅಧಿಕ ಬೀದಿನಾಯಿಗಳು ಹಾದಿ ಬೀದಿಗಳಲ್ಲಿ ಓಡಾಡುತ್ತಾ ದ್ವಿಚಕ್ರವಾಹನ ಸವಾರರಿಗೆ ತೊಂದರೆ ಕೊಡುತ್ತಿವೆ. ಬೀದಿ ನಾಯಿ ಕಡಿತ ಪ್ರಕರಣ ಹೆಚ್ಚಾಗುತ್ತಿರುವುದನ್ನು ನೋಡಿ ಕೂಡಾ ಪಾಲಿಕೆಗಳು ಸುಮ್ಮನಾಗಿವೆ. ನಾಯಿ ಕಡಿತಕ್ಕೆ ಮದ್ದ್ದು ಕೂಡಾ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆ ಔಷಧಾಗಾರದಲ್ಲಿ ಮದ್ದು ಸಿಗುತ್ತಿಲ್ಲವೆಂದರೆ ಬಡವರು ಎಲ್ಲಿ ಹೋಗಬೇಕು. ಖಾಸಗಿ ಆಸ್ಪತ್ರೆಯಲ್ಲಿ ಚುಚ್ಚುಮದ್ದಿಗೆ ಹೆಚ್ಚಿನ ಮೊತ್ತ ಕೀಳುತ್ತಿದ್ದಾರೆ.
ಪ್ರಾಣಿಗಳ ಸಂತಾನ ಹರಣ ಕಾರ್ಯಕ್ಕೆ ಮುಂದಾಗಲು ಪ್ರಾಣಿ ದಯಾ ಸಂಘಗಳು ವಿರೋಧ ವ್ಯಕ್ತಪಡಿಸಿವೆ. ಬೀದಿನಾಯಿಗಳನ್ನು ಹಿಡಿದು ಅವಕ್ಕೆ ಮದ್ದು ನೀಡಿ, ನಾಯಿ ಕಡಿತದ ತೊಂದರೆ ನಿವಾರಣೆ ಮಾಡುವ ಯತ್ನವೂ ಫಲಕಾರಿಯಾಗುತ್ತಿಲ್ಲ ಎಂದು ಶಾಸಕ ಅನ್ಬಳಗನ್ ವಿಷಾದ ವ್ಯಕ್ತಪಡಿಸಿದ್ದಾರೆ.
ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇಲ್ಲೂ ಕೂಡಾ ಸಚಿವರು, ಶಾಸಕರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ ಯಾರೊಬ್ಬರೂ ಬೀದಿ ನಾಯಿ ಹಿಡಿದು ಅಸೆಂಬ್ಲಿಯಲ್ಲಿ ಬಿಡ್ತೀನಿ ಎಂದು ಹೇಳಿಕೆ ನೀಡಿರಲಿಲ್ಲ. ಜೊತೆಗೆ ಸಮಸ್ಯೆಗೆ ಪರಿಹಾರ ಕೂಡಾ ಇನ್ನೂ ಸಿಕ್ಕಿಲ್ಲ.













Click it and Unblock the Notifications