ಚೆನ್ನೈ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಬೇಡವೆಂದು ನಡೆದೇ ಸಾಗಿದ ಶ್ರೀ
ಚೆನ್ನೈ, ಡಿಸೆಂಬರ್ 07: ಹೆಚ್ಚಿನ ಚಿಕಿತ್ಸೆಗಾಗಿ ಇಂದು ಏರ್ ಆಂಬುಲೆನ್ಸ್ ಮೂಲಕ ಚೆನ್ನೈ ತಲುಪಿದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಆಸ್ಪತ್ರೆಯ ಪ್ರವೇಶದ್ವಾರದಿಂದ ತಮ್ಮ ವಿಶೇಷ ವಾರ್ಡಿಗೆ ತೆರಳಲು ವ್ಹೀಲ್ ಚೇರ್ ನಿರಾಕರಿಸಿ, ನಡೆದೇ ಸಾಗಿದರು.
ಹೃದಯದಲ್ಲಿ ಅಳವಡಿಸಲಾದ ಸ್ಟೆಂಟ್ ಬದಲಿಸುವ ಸಲುವಾಗಿ ಚೆನ್ನೈನ ಚೆನ್ನೈನ ರೇಲಾ ಇನ್ ಸ್ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್ ಗೆ ಸ್ವಾಮೀಜಿಗಳನ್ನು ಶುಕ್ರವಾರ ದಾಖಲಿಸಲಾಗಿದೆ. ಆಸ್ಪತ್ರೆಯ ಪ್ರಸಿದ್ಧ ವೈದ್ಯ ಮಹಮ್ಮದ್ ರೇಲಾ ಅವರು ಶ್ರೀಗಳನ್ನು ಪರೀಕ್ಷಿಸಿ, ಅವರಿಗೆ ಮುಂದಿನ ಚಿಕಿತ್ಸೆ ಯಾವುದು ಎಂಬುದನ್ನು ಸೂಚಿಸಲಿದ್ದಾರೆ.
ಇಂದು ಬೆಳಿಗ್ಗೆ ತುಮಕೂರಿನಿಂದ ಬೆಂಗಳೂರಿಗೆ ಬಂದು, ಬೆಂಗೂರಿನ ಎಚ್ ಎಎಲ್ ವಿಮಾನ ನಿಲ್ದಾಣದಿಂದ ಸ್ವಾಮೀಜಿ ಏರ್ ಆಂಬುಲೆನ್ಸ್ ಮೂಲಕ ಚೆನ್ನೈ ತಲುಪಿದ್ದಾರೆ. ಆಸ್ಪತ್ರೆಯ ಪ್ರವೇಶ ದ್ವಾರಕ್ಕೆ ಸ್ವಾಮೀಜಿ ತಲುಪುತ್ತಿದ್ದಂತೆಯೇ ವ್ಹೀಲ್ ಚೇರ್ ಮೂಲಕ ಅವರನ್ನು ವಿಶೇಷ ಕೊಠಡಿಗೆ ಕರೆದೊಯ್ಯಲು ಸಿಬ್ಬಂದಿ ಮುಂದಾದರು. ಆದರೆ ಅದಕ್ಕೆ ಅವಕಾಶವನ್ನೇ ಕೊಡದೆ, ವ್ಹೀಲ್ ಚೇರ್ ಅನ್ನು ನಿರಾಕರಿಸಿದ ಸ್ವಾಮೀಜಿ, ನಡೆದೇ ತಮ್ಮ ವಾರ್ಡಿನತ್ತ ತೆರಳಿ ನೆರೆದಿದ್ದವರನ್ನೆಲ್ಲ ಕೆಲ ಹೊತ್ತು ಅಚ್ಚರಿಯಲ್ಲಿ ಮುಳುಗಿಸಿದರು.

ಅನಾರೋಗ್ಯದಿಂದ ಬಳಲುತ್ತಿರುವ 111 ವರ್ಷ ವಯಸ್ಸಿನ ಸ್ವಾಮೀಜಿ ಅವರ ಹೃದಯದಲ್ಲಿ ಹನ್ನೊಂದು ಸ್ಟೆಂಟ್ ಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ಬದಲಿಸುವ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಚಿಕಿತ್ಸೆ ಹಿನ್ನೆಲೆಯಲ್ಲಿ ರೇಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆಂದೇ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಈ ಕೊಠಡಿಯಲ್ಲಿ ಮಠದ ರೀತಿಯ ವಾತಾವರಣ ನಿರ್ಮಿಸಿ, ಶ್ರೀಗಳಿಗೆ ಪೂಜೆ ಮಾಡಲೂ ಅವಕಾಶ ಮಾಡಿಕೊಡಲಾಗುತ್ತಿದೆ! ಆಸ್ಪತ್ರೆಗೆ ಪೂಜಾ ಸಾಮಗ್ರಿಗಳೊಂದಿಗೆ ಸ್ವಾಮೀಜಿಗಳ ಭಕ್ತರೂ ತೆರಳಿದ್ದಾರೆ.












Click it and Unblock the Notifications