ಕಾಂಗ್ರೆಸ್ ಸೇರಿದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್
ಚೆನ್ನೈ, ನವೆಂಬರ್ 09 : ಮಾಜಿ ಐಎಎಸ್ ಅಧಿಕಾರಿ ತಮಿಳುನಾಡು ಮೂಲದ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. 2019ರಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು, ಈಗ ರಾಜಕೀಯಕ್ಕೆ ಧುಮುಕಿದ್ದಾರೆ.
ಸೋಮವಾರ ತಮಿಳುನಾಡು ಕಾಂಗ್ರೆಸ್ ಉಸ್ತುವಾಗಿ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. "ನಾನು ರಾಜಕೀಯ ಬರಲು ತೀರ್ಮಾನಿಸಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದೇನೆ" ಎಂದು ಭಾನುವಾರ ಅವರು ಹೇಳಿಕೆ ನೀಡಿದ್ದರು.

ಸಸಿಕಾಂತ್ ಸೆಂಥಿಲ್ 2009ನೇ ಬ್ಯಾಚ್ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ. 2017ರ ಅಕ್ಟೋಬರ್ 10ರಿಂದ 2019ರ ಸೆಪ್ಟೆಂಬರ್ 6ರ ತನಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದರು. ಜಿಲ್ಲಾಧಿಕಾರಿಯಾಗಿದ್ದಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ, ಅದು ಅಂಗೀಕಾರಗೊಂಡ ಬಳಿಕ ಸಸಿಕಾಂತ್ ಸೆಂಥಿಲ್ ಕೇಂದ್ರ ಸರ್ಕಾರದ ವಿವಿಧ ನೀತಿಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಸಿಎಎ, ಎನ್ಆರ್ಸಿ ವಿರುದ್ಧ ದೇಶವ ವಿವಿಧ ಭಾಗಗಳಲ್ಲಿ ನಡೆದ ವಿರೋಧಿ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈಗ ರಾಜಕೀಯ ಪ್ರವೇಶ ಮಾಡಿದ್ದಾರೆ.
ತಮಿಳುನಾಡು ಮೂಲದ ಅಣ್ಣಾಮಲೈ ಅವರು ಈಗಾಗಲೇ ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿದ್ದಾರೆ. ಪಕ್ಷ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ನೀಡಿದೆ.
ತಮಿಳುನಾಡು ರಾಜ್ಯದ ಚುನಾವಣೆಗೆ 7 ತಿಂಗಳು ಬಾಕಿ ಇದೆ. ಸಸಿಕಾಂತ್ ಸೆಂಥಿಲ್ ಮತ್ತು ಅಣ್ಣಾಮಲೈ ಅವರು ರಾಜ್ಯ ರಾಜಕೀಯದಲ್ಲಿ ಯಾವ ಬದಲಾವಣೆ ತರಲಿದ್ದಾರೆ? ಎಂದು ಕಾದು ನೋಡಬೇಕು.












Click it and Unblock the Notifications