ಶಶಿಕಲಾ ಕ್ಯಾಂಪ್ ನಿಂದ ಮತ್ತೊಂದು ವಿಕೆಟ್ ಪತನ
ಎಐಎಡಿಎಂಕೆ ಅಧ್ಯಕ್ಷ ಮಧುಸೂಧನನ್ ಅವರು ಶಶಿಕಲಾ ಕ್ಯಾಂಪ್ ನಿಂದ ಹೊರಬಿದ್ದು ಮೊದಲ ಹೊಡೆತ ಕೊಟ್ಟರೆ, ಈಗ ಪಾಂಡಿಯರಾಜನ್ ಅವರು ಪನ್ನೀರ್ ಅವರಿಗೆ ಜೈ ಎಂದು ಮತ್ತಷ್ಟು ಕುತೂಹಲಕ್ಕೆ ಕಾರಣರಾಗಿದ್ದಾರೆ.
ಚೆನ್ನೈ, ಫೆಬ್ರವರಿ 11: ಯಾವುದೇ ಸಿನಿಮಾಗಳಲ್ಲಿ ನೋಡುವ ದೃಶ್ಯಗಳಂತೆ ಶಶಿಕಲಾ ಕ್ಯಾಂಪ್ ನಿಂದ ಒಬ್ಬೊಬ್ಬರಾಗಿ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಕಡೆ ಹೋಗುತ್ತಿದ್ದಾರೆ. ಶನಿವಾರ ಸಚಿವ ಕೆ.ಪಾಂಡಿಯರಾಜನ್ ತಮ್ಮ ನಿಲುವು ಬದಲಿಸಿ, 'ಎಐಎಡಿಎಂಕೆ ಉಳಿಸುವ ಹೋರಾಟ'ದಲ್ಲಿ ಒಪಿಎಸ್ ನ ಬೆಂಬಲಿಸುವುದಾಗಿ ಹೇಳಿದ್ದಾರೆ.
ಈ ಬೆಳವಣಿಗೆಯಿಂದ ಆತಂಕಗೊಂಡಿರುವ ಶಶಿಕಲಾ ನಟರಾಜನ್ ಆವರು ರಾಜ್ಯಪಾಲರು ಶೀಘ್ರವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ. ಶಿಕ್ಷಣ ಸಚಿವ ಪಾಂಡಿಯರಾಜನ್ ಕ್ಯಾಂಪ್ ಬದಲಿಸುವ ಬಗ್ಗೆ ಶುಕ್ರವಾರ ಇಡೀ ಟ್ವೀಟ್ ಗಳು ಹರಿದಾಡಿದ್ದವು. "ಅಮ್ಮನ ಗೌರವ ಹಾಗೂ ಎಐಎಡಿಎಂಕೆ ಒಗ್ಗಟ್ಟು ಉಳಿಸುವ ಸಲುವಾಗಿ ನನಗೆ ಮತ ನೀಡಿದವರು ಏನು ಹೇಳುತ್ತಾರೋ ಅದನ್ನು ಕೇಳ್ತೀನಿ" ಎಂದು ಅವರು ಟ್ವೀಟ್ ಮಾಡಿದ್ದರು.[ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಎಐಎಡಿಎಂಕೆ ಶಾಸಕರಿಗೆ ಪೊಲೀಸರ ಕ್ವೆಶ್ಚನ್ ಅವರ್]
ತೀರಾ ಈಚಿನವರೆಗೆ ಟ್ವೀಟ್ ನಲ್ಲಿ ಮತ್ತು ಸಾರ್ವಜನಿಕ ಹೇಳಿಕೆಗಳಲ್ಲಿ ಪಾಂಡಿಯರಾಜನ್ ಅವರು ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರನ್ನು ಟೀಕಿಸಿದ್ದರು. ಡಿಎಂಕೆ ಜತೆ ಸೇರಿ ಪಕ್ಷ ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಶಾಸಕರ ಬೆಂಬಲ ಶಶಿಕಲಾ ಅವರಿಗೆ ಇದ್ದರೂ, ಜನಾಭಿಪ್ರಾಯ ಒಪಿಎಸ್ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದಿದೆ.
ಇನ್ನು ಶಶಿಕಲಾ ನಟರಾಜನ್ ಅವರು ಪಕ್ಷದೊಳಗಾಗಲೀ ಹೊರಗಾಗಲೀ ಈ ವರೆಗೆ ಯಾವುದೇ ಚುನಾವಣೆ ಎದುರಿಸಿದವರಲ್ಲ. ದಶಕಗಳಿಂದ ಜಯಲಲಿತಾಗೆ ನಿಕಟವರ್ತಿಯಾಗಿದ್ದ ಕಾರಣಕ್ಕೆ ಎಐಎಡಿಎಂಕೆ ಒಳಗೆ ಶಶಿಕಲಾ ಪರವಾದ ಧ್ವನಿ ಕೇಳಿಬರುತ್ತಿದೆ. ಆ ಕಾರಣಕ್ಕೆ ಕಾರ್ಯಕರ್ತರು ಆಕೆಯನ್ನು 'ಚಿನ್ನಮ್ಮ' (ಅಮ್ಮನ ತಂಗಿ) ಎಂದು ಕರೆಯುತ್ತಿದ್ದಾರೆ.