ಪತ್ನಿ ತಾಳಿ ತೆಗೆದರೆ ಮಾನಸಿಕ ಕ್ರೌರ್ಯ: ಮದ್ರಾಸ್ ಹೈಕೋರ್ಟ್ ವಿಚಿತ್ರ ತೀರ್ಪು!
ಚೆನ್ನೈ, ಜುಲೈ 15: ಪತಿಯಿಂದ ದೂರವಿರುವ ಪತ್ನಿ ತನ್ನ ತಾಳಿ (ಮಂಗಳಸೂತ್ರ)ವನ್ನು ತೆಗೆದಿರಿಸುವುದು ಪತಿಯನ್ನು ಮಾನಸಿಕ ಹಿಂಸೆಗೆ ಗುರಿಯಾಗಿಸುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದ್ದು, ಪತಿಗೆ ವಿಚ್ಛೇದನವನ್ನು ಕೊಡಿಸಿರುವ ವಿಚಿತ್ರ ಘಟನೆ ನಡೆದಿದೆ.
ತಮಿಳುನಾಡಿನ ಈರೋಡಿನ ವೈದ್ಯಕೀಯ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿ ಶಿವಕುಮಾರ್ ಅವರು ಇತ್ತೀಚೆಗೆ ಸಲ್ಲಿಸಿದ್ದ ಸಿವಿಲ್ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ವಿ ಎಂ ವೇಲುಮಣಿ ಮತ್ತು ಎಸ್ ಸೌಂಥರ್ ಅವರ ವಿಭಾಗೀಯ ಪೀಠವು ಅಂಗೀಕರಿಸಿದೆ.
ತನಗೆ ವಿಚ್ಛೇದನ ನೀಡಲು ನಿರಾಕರಿಸಿದ್ದ ಸ್ಥಳೀಯ ಕೌಟುಂಬಿಕ ನ್ಯಾಯಾಲಯದ ಜೂನ್ 15, 2016ರ ಆದೇಶಗಳನ್ನು ರದ್ದುಗೊಳಿಸುವಂತೆ ಅರ್ಜಿದಾರರು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಅಂಗೀಕರಿಸಿದ ಮದ್ರಾಸ್ ಹೈಕೋರ್ಟಿನ ವಿಭಾಗೀಯ ಪೀಠ ವ್ಯಕ್ತಿಗೆ ವಿಚ್ಛೇದನ ನೀಡಿದೆ.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ವಿಭಾಗೀಯ ಪೀಠ, ಮಹಿಳೆ ತನ್ನ ಪತಿಯಿಂದ ದೂರವಿದ್ದ ಸಮಯದಲ್ಲಿ ತನ್ನ ತಾಳಿ (ಮಂಗಳಸೂತ್ರ) ತೆಗೆದಿರುವುದು ಕಂಡುಬಂದಿದ್ದು, ಮಹಿಳೆಯೂ ಇದನ್ನು ಒಪ್ಪಿಕೊಂಡಿದ್ದಾರೆ. ಆಕೆಯ ವಕೀಲರು, ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 7 ಅನ್ನು ಉಲ್ಲೇಖಿಸಿ, ತಾಳಿ ಕಟ್ಟುವ ಅಗತ್ಯವಿಲ್ಲ, ತಾಳಿ ತೆಗೆದುಹಾಕುವುದು ವೈವಾಹಿಕ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾದಿಸಿದ್ದರು.
ವಿಭಾಗೀಯ ಪೀಠ ಹೇಳಿದ್ದೇನು..?
ಆದರೆ, ವಿಭಾಗೀಯ ಪೀಠವು 'ಈ ಭಾಗದಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ತಾಳಿ ಕಟ್ಟುವುದು ಅತ್ಯಗತ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ' ಎಂದು ಹೇಳಿದೆ. ಜೊತೆಗೆ, "ದಾಖಲೆಯಲ್ಲಿ ಲಭ್ಯವಿರುವ ಸಾಕ್ಷಿಗಳಿಂದ ಅರ್ಜಿದಾರರು ತಾಳಿಯನ್ನು ತೆಗೆದಿರುವುದು ಕಂಡು ಬಂದಿದೆ. ಯಾವುದೇ ಹಿಂದೂ ವಿವಾಹಿತ ಮಹಿಳೆ ತನ್ನ ಗಂಡನ ಜೀವಿತಾವಧಿಯಲ್ಲಿ ಯಾವುದೇ ಸಮಯದಲ್ಲಿ ತಾಳಿಯನ್ನು ತೆಗೆಯುವುದಿಲ್ಲ ಎಂಬುದು ತಿಳಿದಿರುವ ಸತ್ಯ. ಮಹಿಳೆಯ ಕುತ್ತಿಗೆಯಲ್ಲಿ ತಾಳಿಯು ಪವಿತ್ರವಾದ ವಿಷಯವಾಗಿದ್ದು ಅದು ವೈವಾಹಿಕ ಜೀವನದ ನಿರಂತರತೆಯನ್ನು ಸಂಕೇತಿಸುತ್ತದೆ. ಅದನ್ನು ಗಂಡನ ಮರಣದ ನಂತರ ಮಾತ್ರ ತೆಗೆದುಹಾಕಲಾಗುತ್ತದೆ. ಆದ್ದರಿಂದ, ಪತ್ನಿಯು ಅದನ್ನು ತೆಗೆದುಹಾಕುವುದು ಮಾನಸಿಕ ಹಿಂಸೆ ನೀಡುವ ಕ್ರಿಯೆ. ಅದು ಪತಿಗೆ ಅತ್ಯಂತ ಹೆಚ್ಚು ಸಂಕಟವನ್ನು ನೀಡುತ್ತದೆ" ಎಂದಿದೆ.
ಅದೇ ಮಾನದಂಡವನ್ನು ಅನ್ವಯಿಸಿದ ಪೀಠವು 'ತಾಳಿ ತೆಗೆದುಹಾಕುವುದನ್ನು ಸಾಮಾನ್ಯವಾಗಿ ಅಸಾಂಪ್ರದಾಯಿಕ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ. "ವೈವಾಹಿಕ ಸಂಬಂಧವನ್ನು ಕೊನೆಗೊಳಿಸಲು ತಾಳಿ ತೆಗೆದುಹಾಕಿದರೆ ಸಾಕು ಎಂಬುದನ್ನು ನಾವು ಹೇಳುತ್ತಿಲ್ಲ. ಆದರೆ ಪ್ರತಿವಾದಿಯ (ಪತ್ನಿ) ಒಪ್ಪಿಕೊಂಡ ಕೆಲಸವು ಅವರ ಉದ್ದೇಶಗಳು ಏನು ಎಂಬುದನ್ನು ತಿಳಿಸುತ್ತವೆ. ತಾವು ದೂರವಿದ್ದ ಸಮಯದಲ್ಲಿ ತಾಳಿ ತೆಗೆದಿರಿಸಿರುವುದು ಮತ್ತು ಲಭ್ಯವಿರುವ ಹಲವಾರು ಇತರ ಪುರಾವೆಗಳೊಂದಿಗೆ, ಇವರು ರಾಜಿ ಮಾಡಿಕೊಳ್ಳುವ ಮತ್ತು ವೈವಾಹಿಕ ಸಂಬಂಧವನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿಲ್ಲ ಎಂಬದು ಖಚಿತವಾಗಿದೆ' ಎಂದಿದೆ.
ಇದಲ್ಲದೆ, ಪತ್ನಿಯು ಅರ್ಜಿದಾರ ಪತಿಯ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ತನ್ನ ಮಹಿಳಾ ಸಹೋದ್ಯೋಗಿಗಳೊಂದಿಗೆ ವಿವಾಹೇತರ ಸಂಬಂಧಗಳಿವೆ ಎಂಬ ಆರೋಪಗಳನ್ನು ಮಾಡಿದ್ದಾರೆ ಎಂಬುದನ್ನು ಪೀಠವು ಗಮನಿಸಿದೆ. ಅರ್ಜಿದಾರರು ಮತ್ತು ಅವರ ಪತ್ನಿ 2011 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇವರು ಮತ್ತೆ ಒಂದಾಗಲು ಯಾವುದೇ ಪ್ರಯತ್ನ ಮಾಡಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಕೆಳ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿ, ಅರ್ಜಿದಾರರಿಗೆ ವಿಚ್ಛೇದನವನ್ನು ನೀಡಿದೆ.