ಶ್ರೀಲಂಕಾ ಪ್ರವಾಸವನ್ನು ರದ್ದುಪಡಿಸಿದ ರಜನಿಕಾಂತ್
ಚೆನ್ನೈ, ಮಾರ್ಚ್ 25 : ಸೂಪರ್ ಸ್ಟಾರ್ ರಜನಿಕಾಂತ್ ಅವರು ಶ್ರೀಲಂಕಾ ಪ್ರವಾಸವನ್ನು ದಿಢೀರನೆ ರದ್ದುಪಡಿಸಿದ್ದಾರೆ.
ನಿರಾಶ್ರಿತ ತಮಿಳರಿಗಾಗಿ 150 ಮನೆಗಳನ್ನು ಹಸ್ತಾಂತರಿಸುವ ಉದ್ದೇಶದಿಂದ ಅವರು ಏಪ್ರಿಲ್ 9 ಮತ್ತು 10ರಂದು ಶ್ರೀಲಂಕಾದ ಜಾಫ್ನಾಗೆ ತೆರಳುವವರಿದ್ದರು.
ಈ ಕಾರ್ಯಕ್ರಮವನ್ನು ರಜನಿಕಾಂತ್ ಅವರ ಮುಂದಿನ ಸಿನೆಮಾ, ಶಂಕರ್ ನಿರ್ದೇಶನದ '2.0' ನಿರ್ಮಿಸುತ್ತಿರುವ ಲೈಕಾ ಗ್ರೂಪ್ ಆಯೋಜನೆ ಮಾಡಿತ್ತು. ಈ ಭೇಟಿಗೆ ಕೆಲ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. [ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವರೆ ರಜನಿ?]

ವಿಡುತ್ತಲೈ ಚಿರುತ್ತೈಗಳ್ ಕಚ್ಚಿ ಪಕ್ಷದ ನಾಯಕ ತೋಲ್ ತಿರುವನವನ್ ಅವರು, ಲೈಕಾ ಗ್ರೂಪ್ ನ ಗ್ನಾನಮ್ ಫೌಂಡೇಷನ್ ಶ್ರೀಲಂಕಾ ಸರಕಾರದೊಡನೆ ವ್ಯವಹಾರ ಹೊಂದಿರುವುದರಿಂದ ಈ ಕಾರ್ಯಕ್ರಮದಲ್ಲಿ ರಜನಿ ಭಾಗವಹಿಸದಿರುವುದು ಉತ್ತಮ ಎಂದು ತಕರಾರು ಎತ್ತಿದ್ದರು.
ವಿಕೆಸಿ ಮುಖ್ಯಸ್ಥ ತಿರುಮಾವಳವನ್ ಮತ್ತು ಎಂಡಿಎಂಕೆ ನಾಯಕ ವೈಕೋ ಅವರು ಶ್ರೀಲಂಕಾಗೆ ಭೇಟಿ ನೀಡದಂತೆ ಮನವಿ ಮಾಡಿಕೊಂಡಿದ್ದರಿಂದ, ಸದ್ಭಾವನೆಯಿಂದ ಶ್ರೀಲಂಕಾ ಪ್ರವಾಸವನ್ನು ರದ್ದುಪಡಿಸಿದ್ದೇನೆ ಎಂದು ರಜನಿಕಾಂತ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
2009ರಲ್ಲಿ ಎಲ್ಟಿಟಿಇ ಬಂಡುಕೋರರ ಮೇಲೆ ನಡೆದ ದಾಳಿಯಲ್ಲಿ ತಮಿಳು ನಾಗರಿಕರ ಹತ್ಯೆಗಳಾಗಿದ್ದವು. ಈ ಹತ್ಯೆಯ ಹಿಂದೆ ಈಗಿನ ಶ್ರೀಲಂಕಾದ ರಾಷ್ಟ್ರಪತಿ ಮಹಿಂದ ರಾಜಪಕ್ಸೆ ಅವರ ಕೈವಾಡವಿದೆ ಎಂದು ತಮಿಳು ಸಂಘಟನೆಗಳು ಆರೋಪಿಸಿದ್ದವು. ರಾಜಪಕ್ಸೆಯ ಜೊತೆ ಲೈಕಾ ಪ್ರೊಡಕ್ಷನ್ ನ ಮಾಲಿಕ ಅಲಿರಾಜಾ ಸುಬಾಸ್ಕರನ್ ಅವರು ವ್ಯವಹಾರ ಹೊಂದಿದ್ದಾರೆ ಎಂಬುದು ಆರೋಪ.
ಈ ಹಿನ್ನೆಲೆಯಲ್ಲಿ ತಮಿಳರಿಗೆ ಅನ್ಯಾಯವಾಗಿರುವುದರಿಂದ ಲೈಕಾ ಗ್ರೂಪ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಹಲವಾರು ತಮಿಳು ಸಂಘಟನೆಗಳು ರಜನಿಕಾಂತ್ ಅವರನ್ನು ಆಗ್ರಹಿಸಿದ್ದವು. [ಮೈಮೇಲಿನ ಮಚ್ಚೆಗಳನ್ನು ನಟ ಧನುಷ್ ಅಳಿಸಿಕೊಂಡಿದ್ದೇಕೆ?]












Click it and Unblock the Notifications