ಕರುಣಾನಿಧಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ
ಚೆನ್ನೈ, ಜುಲೈ 31: ಚೆನ್ನೈನ ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿದರು.
ಮೂತ್ರನಾಳ ಸಮಸ್ಯೆ ಮತ್ತು ಇತರೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಡಿಎಂಕೆ ನಾಯಕ ಕರುಣಾನಿಧಿ ಅವರು ಶನಿವಾರ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜೀವನ್ಮರಣ ಹೋರಾಟ ನಡೆಸುತ್ತಿರುವ ಕರುಣಾನಿಧಿ ಆಸೆ ಕೊನೆಗೂ ಕೈಗೂಡಿತು!
ಇಂದು ಆಸ್ಪತ್ರೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಕರುಣಾನಿಧಿ ಅವರ ಪುತ್ರ ಸ್ಟಾಲಿನ್ ಹಾಗೂ ಪುತ್ರಿ ಕನಿಮೋಳಿ ಅವರ ಜತೆ ಮಾತನಾಡಿ ಕರುಣಾನಿಧಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.
ಕರುಣಾನಿಧಿ ಅವರನ್ನು ಕಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ತಮಿಳುನಾಡಿನ ಜನರಂತೆ ಕರುಣಾನಿಧಿ ಸಹ ಗಟ್ಟಿ ಮನಸ್ಥಿತಿ ಉಳ್ಳವರು, ನಮ್ಮ ಕುಟುಂಬದೊಂದಿಗೆ ಬಹಳ ಕಾಲದಿಂದಲೂ ಅವರು ಉತ್ತಮ ಅನುಬಂಧ ಹೊಂದಿದ್ದಾರೆ ಎಂದು ಅವರು ಹೇಳಿದರು.
ಕರುಣಾನಿಧಿ ಅವರು ತಮಿಳುನಾಡಿನ ಸ್ಪೂರ್ತಿ ಆಗಿದ್ದು, ಸೋನಿಯಾ ಗಾಂಧಿ ಅವರು ಸಹ ಕರುಣಾನಿಧಿ ಅವರಿಗೆ ಶುಭ ಹಾರೈಕೆಗಳನ್ನು ತಿಳಿಸಿದ್ದು, ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ ಎಂದು ಅವರು ಹೇಳಿದರು.