ಬಿಜೆಪಿ ಅಪಾಯಕಾರಿಯೇ ಅನ್ನೋದನ್ನು ಜನ ನಿರ್ಧರಿಸ್ತಾರೆ; ಮಾತು ಬದಲಿಸಿದ ರಜನಿ
ಚೆನ್ನೈ, ನವೆಂಬರ್ 13: ನಟ- ರಾಜಕಾರಣಿ ರಜನೀಕಾಂತ್ ಸೋಮವಾರ ಬಿಜೆಪಿ ಬಗ್ಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಇತರ ಪಕ್ಷಗಳೆಲ್ಲ ಒಟ್ಟಾಗಿ ಎದುರಿಸುವಷ್ಟು ಬಿಜೆಪಿ 'ಅಪಾಯಕಾರಿ ಪಕ್ಷವೆ?', ಅವರೆಲ್ಲ ಹಾಗೆ ಯೋಚನೆ ಮಾಡುತ್ತಿದ್ದಾರೆ ಅಂದರೆ ಅಪಾಯಕಾರಿಯೇ ಆಗಿರಬೇಕು ಎಂದು ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದರು.
ಆ ನಂತರ ರಜನೀಕಾಂತ್ ಹೇಳಿಕೆ ಮಾಧ್ಯಮಗಳಲ್ಲಿ ಗೊಂದಲ ಸೃಷ್ಟಿ ಮಾಡಿತ್ತು. "ಸೋಮವಾರದಂದು ನಾನು ಹೇಳಲು ಹೊರಟಿದ್ದು ಏನೆಂದರೆ, ವಿರೋಧ ಪಕ್ಷಗಳು ಬಿಜೆಪಿಯನ್ನು ಅಪಾಯಕಾರಿ ಎಂದುಕೊಂಡಿವೆ. ಆ ಪಕ್ಷ ಅಪಾಯಕಾರಿ ಆಗಿದ್ದರೆ ಜನರು ತೀರ್ಮಾನ ಮಾಡುತ್ತಾರೆ. ಹತ್ತು ಮಂದಿ ಒಬ್ಬನ ವಿರುದ್ಧ ಹೋಗುತ್ತಾರೆ ಅಂದರೆ, ಯಾರು ಬಲಿಷ್ಠರು ಎಂದು ನೀವೇ ತೀರ್ಮಾನಿಸಿ ಅಂತ ನಾನು ಹೇಳಿದ್ದು" ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಿದ್ದರು. ಆ ನಂತರ ಈ ವರ್ಷದ ಮಾರ್ಚ್ ನಲ್ಲಿ ಮೊದಲ ರಾಜಕೀಯ ಭಾಷಣ ಮಾಡಿದ್ದರು. ಆಗಿನಿಂದ ಒಂದು ಸುದ್ದಿ ಹರಿದಾಡುತ್ತಲೇ ಇದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಜತೆಗೆ ರಜನೀ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ.

ತಮಿಳುನಾಡಿನಲ್ಲಿ ವಿಪಕ್ಷ ಆಗಿರುವ ಡಿಎಂಕೆ, ರಜನೀ ಅವರ 'ಆಧ್ಯಾತ್ಮಿಕ ರಾಜಕಾರಣ' ಅಂದರೆ ಬಿಜೆಪಿ ಹಾಗೂ ಆರೆಸ್ಸೆಸ್ ನ ಸಿದ್ಧಾಂತಗಳಿಗೆ ಹತ್ತಿರವಾಗಿದೆ. ರಜನೀಕಾಂತ್ ಗೆ ಕೋಮುವಾದಿ ಶಕ್ತಿಗಳ ಬೆಂಬಲ ಇದೆ ಎಂದು ಆರೋಪ ಮಾಡಿತ್ತು.
ಆಡಳಿತಾರೂಢ ಬಿಜೆಪಿ ಬಗ್ಗೆ ಅಭಿಪ್ರಾಯ ಏನು ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ, ನಾನಿನ್ನೂ ಪೂರ್ಣ ಪ್ರಮಾಣದಲ್ಲಿ ರಾಜಕಾರಣಿ ಆಗಿಲ್ಲ. ಆದ್ದರಿಂದ ಏನನ್ನೂ ಹೇಳಲ್ಲ ಎಂದಿದ್ದರು.
ಆದರೆ, ಎರಡು ವರ್ಷಗಳ ಹಿಂದೆ ಅಪನಗದೀಕರಣ ತೀರ್ಮಾನವನ್ನು ಹೊಗಳಿದ್ದ ರಜನಿ, ಅದು ಸರಿಯಾಗಿ ಅನುಷ್ಠಾನ ಆಗಲಿಲ್ಲ. ಆ ಬಗ್ಗೆ ಸುದೀರ್ಘವಾದ ಚರ್ಚೆ ನಡೆಯಬೇಕು. ಅಪನಗದೀಕರಣ ತಪ್ಪು ನಡೆ ಎಂದು ಹೇಳಿದ್ದಾರೆ.












Click it and Unblock the Notifications