ಜಲ್ಲಿಕಟ್ಟು: ಸುಗ್ರೀವಾಜ್ಞೆ ಜಾರಿಯಾದರೂ ನಿಲ್ಲದ ಪ್ರತಿಭಟನೆ
ಚೆನ್ನೈ, ಜನವರಿ 22: ಮಳೆ ನಿಂತರೂ ಹನಿ ನಿಂತಿಲ್ಲ ಎನ್ನುವಂತಾಗಿದೆ ತಮಿಳುನಾಡಿನ ಪರಿಸ್ಥಿತಿ. ಶನಿವಾರವೇ ಸುಗ್ರೀವಾಜ್ಞೆ ಜಾರಿಗೆ ತಂದು ಜಲ್ಲಿಕಟ್ಟಿಗೆ ಹಾದಿ ಸುಗಮ ಮಾಡಿಕೊಟ್ಟಿದ್ದರೂ, ಪ್ರತಿಭಟನಾಕಾರರು ಮಾತ್ರ ತಮ್ಮ ಪ್ರತಿಭಟನೆ ಹಿಂತೆಗೆದುಕೊಂಡಿಲ್ಲ. ಇದೀಗ ಪ್ರತಿಭಟನಾಕಾರರು ಸರಕಾರದ ಮುಂದೆ ಸುಗ್ರೀವಾಜ್ಞೆಯ ಅಂಶಗಳನ್ನು ಬಹಿರಂಗಪಡಿಸಲು ಕೋರಿ ತಮ್ಮ ನಿರಶನ ಮುಂದುವರಿಸಿದ್ದಾರೆ.[ಟ್ವಿಟರ್ ನಲ್ಲಿ ಕಂಬಳಕ್ಕಾಗಿ ಕನ್ನಡಿಗರು ಏನಂದ್ರು?]
ಈ ಕುರಿತು ಮರೀನಾ ಬೀಚಿನಲ್ಲಷ್ಟೇ ಅಲ್ಲದೆ ತಮಿಳುನಾಡಿನ ಜಿಲ್ಲೆ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. "ಸರಕಾರ ಯಾಕೆ ಸುಗ್ರಿವಾಜ್ಞೆಯನ್ನು ಸಾರ್ವಜನಿಕರ ಮುಂದಿಡುತ್ತಿಲ್ಲ. ಅದರಲ್ಲಿ ಏನೇನಿದೆ ಎಂಬುದನ್ನು ನಾವು ನೋಡಬೇಕು. ಯಾವ ನೀತಿ ನಿಯಮಗಳ ಅಡಿಯಲ್ಲಿ ಜಲ್ಲಿಕಟ್ಟಿಗೆ ಅವಕಾಶ ನೀಡಿದ್ದಾರೆ. ಪ್ರತಿಭಟನೆ ನಡೆಯುವ ಮೊದಲು ಏನೂ ಮಾಡದೇ, ಈಗ ಪ್ರತಿಭಟನೆ ಎದ್ದಾಗ ಹೋಗಿ ಸುಗ್ರೀವಾಜ್ಞೆ ಜಾರಿಗೆ ತಂದಿರುವ ಸರಕಾರವನ್ನು ಕುರುಡಾಗಿ ನಂಬುವುದಾದರೂ ಹೇಗೆ," ಎಂದು ಮರೀನಾ ಬೀಚಿನಲ್ಲಿ ಪ್ರತಿಭಟನಾನಿರತರೊಬ್ಬರು ಪ್ರಶ್ನಿಸಿದ್ದಾರೆ.[ಜಲ್ಲಿಕಟ್ಟು ಸುಗ್ರೀವಾಜ್ಞೆಗೆ ತಮಿಳುನಾಡು ರಾಜ್ಯಪಾಲರ ಅಸ್ತು]

ಮಧುರೈ ಸುತ್ತ ಮುತ್ತಲಿನ ಎತ್ತುಗಳ ಮಾಲಿಕರು ಮತ್ತು ಸಾರ್ವಜನಿಕರು ತಮ್ಮ ಪ್ರತಿಭಟನೆ ನಿಲ್ಲಿಸಲು ಸಿದ್ಧರಿಲ್ಲ. ಅಲ್ಲಿ ತಾನೇ ಜಲ್ಲಿಕಟ್ಟು ಉದ್ಘಾಟನೆ ಮಾಡುವುದಾಗಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಶನಿವಾರ ಘೋಷಿದ್ದರು. ಇಲ್ಲಿನ ಜನ 'ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ'ಗೆ ತಿದ್ದುಪಡಿ ತರುವಂತೆ ಒತ್ತಾಯಿಸಿದ್ದಾರೆ. ಕಾನೂನು ಉಲ್ಲಂಘಿಸುವ ವಿಚಾರದಲ್ಲಿ ಅವರಲ್ಲಿ ಸ್ಪಷ್ಟತೆಯಿದೆ.
ಹೆಚ್ಚಿನವರಿಗೆ ಜಲ್ಲಿಕಟ್ಟು ನಡೆಸುವ ಮೂಲಕ ಪ್ರತಿಭಟನೆ ನಡೆಸುವುದು ಬೇಕಿಲ್ಲ. ಇದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರಕಾರ ಈ ವರ್ಷದ ಅಧಿವೇಶನ ಮೊದಲ ದಿನವೇ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ನಂತರ ಸುಗ್ರೀವಾಜ್ಞೆ ಇರುವುದಿಲ್ಲ ಎಂದು ಭರವಸೆ ನೀಡಿದೆ. ಈ ಭರವಸೆ ಒಪ್ಪಿಕೊಂಡು ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಹಿಂತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ. (ಒನ್ ಇಂಡಿಯಾ ಸುದ್ದಿ)











Click it and Unblock the Notifications