ಉತ್ತರ ಭಾರತೀಯರಿಂದ ಕೊರೊನಾ ಹರಡ್ತಿದೆ: ತಮಿಳುನಾಡು ಆರೋಗ್ಯ ಸಚಿವ
ಚೆನ್ನೈ, ಜೂನ್ 1: "ರಾಜ್ಯದಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು ಕೊರೋನಾ ಸೋಂಕು ಹರಡುತ್ತಿದ್ದಾರೆ" ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಸ್ವಾಮಿ ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
"ಕೆಲಂಬಕ್ಕಂ ವಿಐಟಿ ಕಾಲೇಜು ಮತ್ತು ಸತ್ಯಸಾಯಿ ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲ್ ಮತ್ತು ತರಗತಿಗಳಲ್ಲಿ ಕೋವಿಡ್ ಸೋಂಕು ಹರಡುತ್ತಿದೆ. ಕೆಲವು ಉತ್ತರ ಭಾರತದ ರಾಜ್ಯಗಳಲ್ಲಿ, ಕೋವಿಡ್ ಪ್ರಕರಣಗಳು ಇನ್ನೂ ಹೆಚ್ಚುತ್ತಿವೆ" ಎಂದು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ.
"ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 100ಕ್ಕಿಂತ ಕಡಿಮೆಯಾಗಿತ್ತು. ರಾಜ್ಯದ ಅಣ್ಣಾ ವಿಶ್ವವಿದ್ಯಾಲಯ, ಐಐಟಿ ಮದ್ರಾಸ್, ಸತ್ಯ ಸಾಯಿ ವೈದ್ಯಕೀಯ ಕಾಲೇಜಿನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕೋವಿಡ್ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ, ದೆಹಲಿ, ಹರ್ಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕೇರಳದ ವಿದ್ಯಾರ್ಥಿಗಳಿಂದ ಇಲ್ಲಿ ಕೋವಿಡ್ ಹೆಚ್ಚಾಗುತ್ತಿದೆ" ಎಂದು ಸುಬ್ರಮಣಿಯನ್ ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು
ಕೇಲಂಬಕ್ಕಂನ ವಿಐಟಿ ಕಾಲೇಜಿನ ಕೋವಿಡ್ ಸ್ಥಿತಿ ಗತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, "ಕಾಲೇಜಿನ ಹಾಸ್ಟೆಲ್ನಲ್ಲಿ ಪ್ರಥಮ ವರ್ಷದ 5,600 ವಿದ್ಯಾರ್ಥಿಗಳು ಉಳಿದುಕೊಂಡಿದ್ದಾರೆ, ಇವರಲ್ಲಿ ಶೇಕಡಾ 80ರಷ್ಟು ವಿದ್ಯಾರ್ಥಿಗಳು ಉತ್ತರ ಭಾರತದಿಂದ ಬಂದವರು, ಮೇ 12, 13 ರಂದು ಹಾಸ್ಟೆಲ್ಗೆ ಮರಳಿದ ಮೇಲೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ" ಎಂದು ಹೇಳಿದ್ದಾರೆ.
ಮಂಗಳವಾರ 4,192 ವಿದ್ಯಾರ್ಥಿಗಳಿಂದ ಆರ್ಟಿಪಿಸಿಆರ್ ಪರೀಕ್ಷೆಗೆ ಮಾದರಿ ಸಂಗ್ರಹಿಸಲಾಗಿದೆ. ಅವರಲ್ಲಿ 118 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನೂ 1500 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಬೇಕಿದೆ.
|
ಆರೋಗ್ಯ ಸಚಿವರ ಹೇಳಿಕೆಗೆ ಖಂಡನೆ
ಸುಬ್ರಮಣಿಯನ್ ಹೇಳಿಕೆ ವಿವಾದವನ್ನು ಹುಟ್ಟುಹಾಕಿದ್ದು, ಸಚಿವರ ಹೇಳಿಕೆ ವಿರುದ್ಧ ಸಾಮಾಜಿಕ ತಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಕೂಡ ತಮಿಳುನಾಡು ಸಚಿವರ ವಿರುದ್ಧ ಕಿಡಿ ಕಾರಿದ್ದಾರೆ.
ಸುಬ್ರಮಣಿಯನ್ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ನಾಯಕ ಜಿತಿನ್ ಪ್ರಸಾದ್, " ಸಾಂಕ್ರಾಮಿಕ ರೋಗಗಳಿಗೆ ಯಾವುದೇ ರಾಜ್ಯ, ಗಡಿಗಳು ತಿಳಿದಿಲ್ಲ. ಇದು ತಮಿಳುನಾಡು ಆರೋಗ್ಯ ಸಚಿವರ ಉತ್ತರ ಭಾರತೀಯರನ್ನು ಅವಮಾನಿಸುವ ಅತ್ಯಂತ ಬೇಜವಾಬ್ದಾರಿ ಮತ್ತು ಅವಹೇಳನಕಾರಿ ಹೇಳಿಕೆ" ಎಂದು ಟೀಕಿಸಿದ್ದಾರೆ. ಸಚಿವ ಸುಬ್ರಮಣಿಯನ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ರಾಜಕೀಯ ಮುಖಂಡರು ಒತ್ತಾಯಿಸಿದ್ದಾರೆ.
|
ಸಚಿವರ ಹೇಳಿಕೆಗೆ ಅಣ್ಣಾಮಲೈ ಟೀಕೆ
ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೂಡ ಟ್ವೀಟ್ ಮಾಡಿದ್ದು, "ರಾಜ್ಯದ ಡಿಎಂಕೆ ಸರ್ಕಾರದ ಮಂತ್ರಿಗಳು ತಮ್ಮಲ್ಲಿ ಯಾರಿಗೆ ಬುದ್ದಿ ಕಡಿಮೆ ಇದೆ ಎಂದು ತೋರಿಸಲು ಪ್ರತಿನಿತ್ಯ ತಮ್ಮ ನಡುವೆ ಸ್ಪರ್ಧಿಸುತ್ತಿದ್ದಾರೆ. ಅವರ ಮೂರ್ಖತನದಿಂದ ತಮಿಳು ಜನರಿಗೆ ಬೇಸರ ತರಿಸುತ್ತಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗಷ್ಟೇ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ.ಪೊನ್ಮುಡಿ ಹಿಂದಿ ಮಾತನಾಡಲು ಬರುವವರು ಕೋಯಮತ್ತೂರಿನ ಬೀದಿಗಳಲ್ಲಿ ಪಾನಿಪೂರಿ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು. ಪ್ರಧಾನಿ ಮೋದಿ ತಮಿಳುನಾಡು ಕಾರ್ಯಕ್ರಮದಲ್ಲಿ ಸಿಎಂ ಸ್ಟಾಲಿನ್ ಹಿಂದಿಯಂತೆ ತಮಿಳು ಭಾಷೆಗೂ ಕೂಡ ಪ್ರಾತಿನಿಧ್ಯ ನೀಡಬೇಕು ಎಂದು ಕೇಳಿಕೊಂಡಿದ್ದರು.

24 ಗಂಟೆಗಳಲ್ಲಿ 98 ಕೋವಿಡ್ ಪ್ರಕರಣ ದಾಖಲು
ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ 98 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟಾರೆ ಸೋಂಕಿತರ ಸಂಖ್ಯೆ 34,55,474ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಯಾವುದೇ ಸಾವು ವರದಿಯಾಗಿಲ್ಲ.
ಇನ್ನು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,745 ಹೊಸ ಕೋವಿಡ್ ಸೋಂಕಿತರ ಪ್ರಕರಣ ದಾಖಲಾಗಿದ್ದು, ಕಳೆದ ಕೆಲವು ದಿನಗಳಿಂದ ಕಡಿಮೆಯಾಗಿದ್ದ ಸೋಂಕಿನ ಪ್ರಮಾಣ ಏರಿಕೆಯಾಗಿದೆ. ಮಂಗಳವಾರಕ್ಕಿಂತ ಬುಧವಾರ 407 ಕೋವಿಡ್ ಸೋಂಕು ಪ್ರಕರಣ ಹೆಚ್ಚಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications