ಸದ್ಯದ ಮಟ್ಟಿಗೆ ನಾನು ರಾಜಕೀಯಕ್ಕೆ ಬರೋಲ್ಲ: ರಜನಿಕಾಂತ್ ಸ್ಪಷ್ಟನೆ
ಚೆನ್ನೈನಲ್ಲಿ ಸೋಮವಾರ ಬೆಳಗ್ಗೆ ತಮ್ಮ ಅಭಿಮಾನಿಗಳ ಜತೆಗೆ ನಡೆಸಿದ ಸಂವಾದದಲ್ಲಿ ಈ ರೀತಿ ಹೇಳಿರುವ ರಜನಿ ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಮೂಡಿಸಿದ್ದಾರೆ.
ಚೆನ್ನೈ, ಮೇ 15: ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರು ರಾಜಕೀಯಕ್ಕೆ ಬರುತ್ತಾರೆ. ಅವರು ರಾಜಕೀಯಕ್ಕೆ ಬಂದರೆ, ಒಂದಲ್ಲಾ ಒಂದು ದಿನ ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತಾರೆ ಎಂದೆಲ್ಲಾ ಕನಸು ಕಾಣುತ್ತಿದ್ದ ಅವರ ಅಭಿಮಾನಿಗಳಿಗೆ ತಾತ್ಕಾಲಿಕವಾಗಿ ನಿರಾಸೆಯಾಗಿದೆ.
ಸದ್ಯದ ಮಟ್ಟಿಗೆ ತಾವು ರಾಜಕೀಯ ರಂಗಕ್ಕೆ ಬರುವ ಯಾವುದೇ ಉದ್ದೇಶವನ್ನು ಹೊಂದಿಲ್ಲವೆಂದು ಖುದ್ದು ರಜನೀಕಾಂತ್ ಅವರೇ ಘೋಷಿಸಿದ್ದಾರೆ.
ಚೆನ್ನೈನಲ್ಲಿ ಸೋಮವಾರ ಬೆಳಗ್ಗೆ ತಮ್ಮ ಅಭಿಮಾನಿಗಳ ಜತೆಗೆ ನಡೆಸಿದ ಸಂವಾದದಲ್ಲಿ ಈ ರೀತಿ ಹೇಳಿರುವ ರಜನಿ, ಸದ್ಯಕ್ಕೆ ತಮಗೆ ರಾಜಕೀಯ ಸೇರುವ ಇಚ್ಛೆಯಿಲ್ಲ. ಆದರೆ, ಮುಂದಿನ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಎಲ್ಲವೂ ದೈವೇಚ್ಛೆ. ಮುಂದಿನ ದಿನಗಳಲ್ಲಿ ನಾನು ರಾಜಕೀಯ ಬರಬಹುದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಬಿಜೆಪಿ ಸೇರಲಾರೆ: ''ಕೆಲ ದಿನಗಳಿಂದ ನಾನು ಬಿಜೆಪಿ ಅಥವಾ ಇತರ ರಾಜಕೀಯ ಪಕ್ಷಗಳಿಗೆ ಸೇರುತ್ತೇನೆಂಬ ಸುದ್ದಿಗಳು ಹರಿದಾಡತೊಡಗಿವೆ. ಆದರೆ, ನಾನು ಬಿಜೆಪಿ ಅಥವಾ ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಿಲ್ಲ'' ಎಂದು ರಜನಿಕಾಂತ್ ತಿಳಿಸಿದರು.
ಹಣ ಮಾಡಲು ಅವಕಾಶ ನೀಡಲ್ಲ: ''ಸದ್ಯಕ್ಕಂತೂ ನಾನು ರಾಜಕೀಯ ಸೇರುವುದಿಲ್ಲ. ಆದರೆ, ಮುಂದೊಂದು ದಿನ ನಾನು ರಾಜಕೀಯ ಸೇರಿದರೆ ಹಣ ಮಾಡುವವರನ್ನು ನನ್ನ ಹತ್ತಿರ ಸುಳಿಯಲು ಬಿಡುವುದಿಲ್ಲ. ಹಣ ಮಾಡಲು ನಾನು ಅವಕಾಶವನ್ನೂ ಕೊಡುವುದಿಲ್ಲ'' ಎಂದು ಅವರು ಹೇಳಿದರು.