ಬಿಜೆಪಿಗೆ ನಿರಾಸೆ ತಂದ ತಮಿಳುನಾಡು ಸಿಎಂ ಹೇಳಿಕೆ
ಚೆನ್ನೈ, ಮಾರ್ಚ್ 21: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಇಂದು ಖಡಕ್ ಹೇಳಿಕೆ ನೀಡಿದ್ದು ಬಿಜೆಪಿಗೆ ಇದು ನಿರಾಸೆ ತಂದಿದೆ. ಬಿಜೆಪಿ ಜತೆಗೆ ಮೈತ್ರಿಯೂ ಇಲ್ಲ, ಬಿಜೆಪಿಗೆ ನಮ್ಮ ಬೆಂಬಲವೂ ಇಲ್ಲ ಎಂದು ಪಳನಿಸ್ವಾಮಿ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ಕೇಂದ್ರದ ಜೊತೆ ತಮಿಳುನಾಡು ಸರಕಾರ ಮೃದು ಧೋರಣೆ ಅನುಸರಿಸುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ನಡೆದ ವಿಶೇಷ ಅಧಿವೇಶನದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರಲು ನಿರ್ಣಯ ಕೈಗೊಳ್ಳಲಾಗಿತ್ತು. ಇದಲ್ಲದೆ ಸಂಸತ್ತಿನ ಆವರಣದಲ್ಲಿ ಎಐಎಡಿಎಂಕೆ ಸಂಸದರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಮುಖ್ಯಮಂತ್ರಿ ಪಳನಿಸ್ವಾಮಿ ಈ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಸಂಸತ್ತಿನಲ್ಲಿ ಅವಿಶ್ವಾಸ ಮಂಡನೆಯಾದರೆ ಎಐಎಡಿಎಂಕೆ ಬಿಜೆಪಿ ಸರಕಾರದ ಪರ ಮತ ಚಲಾಯಿಸಲಿದೆ ಎನ್ನುವ ವರದಿಗಳು ಬರುತ್ತಿದ್ದವು. ಆದರೆ ಪಳನಿಸ್ವಾಮಿ ಹೇಳಿಕೆ ಬಿಜೆಪಿ ಪಾಲಿಗೆ ನಿರಾಸೆ ತಂದಿದೆ.