"ಸಿಬಿಐ, ಇಡಿ ಮೂಲಕ ಮೋದಿ ತಮಿಳುನಾಡನ್ನು ನಿಯಂತ್ರಿಸುವ ಪ್ರಯತ್ನದಲ್ಲಿದ್ದಾರೆ"
ಚೆನ್ನೈ, ಜನವರಿ 23: ಮುಂದಿನ ವಿಧಾನಸಭೆ ಚುನಾವಣೆ ಸಲುವಾಗಿ ಮೂರು ದಿನಗಳ ಕಾಲ ತಮಿಳುನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ತಮಿಳುನಾಡಿಗೆ ಭೇಟಿ ನೀಡಿ ಕೊಯಮತ್ತೂರಿನಲ್ಲಿ ರೋಡ್ ಶೋ ಮೂಲಕ ಪ್ರಚಾರ ಕಾರ್ಯ ನಡೆಸಿದರು.
ಈ ಸಂದರ್ಭ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ರಾಹುಲ್ ಗಾಂಧಿ, "ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡಿನ ಭಾಷೆ, ಸಂಸ್ಕೃತಿ, ಇತಿಹಾಸ ಯಾವುದೂ ಗೊತ್ತಿಲ್ಲ. ಇದಾಗಿಯೂ ಕೇಂದ್ರ ತನಿಖಾ ಸಂಸ್ಥೆಗಳ ಮುಖಾಂತರ ತಮಿಳುನಾಡು ಸರ್ಕಾರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ದೂರಿದರು.
"ದೆಹಲಿಯ ಸರ್ಕಾರ ತಮಿಳುನಾಡು ಸಂಸ್ಕೃತಿ, ಭಾಷೆ ಹಾಗೂ ಇತಿಹಾಸವನ್ನು ಹತ್ತಿಕ್ಕಲು ನೋಡುತ್ತಿದೆ. ಇಡೀ ಭಾರತ ಕೇವಲ ಒಂದು ಭಾಷೆ, ಸಂಸ್ಕೃತಿ ಹಾಗೂ ಆಲೋಚನೆ, ಸಿದ್ಧಾಂತ ಹೊಂದಿರಬೇಕು ಎಂಬುದು ಮೋದಿ ನಂಬಿಕೆ. ಇಡೀ ಭಾರತ ನರೇಂದ್ರ ಮೋದಿ ಎಂಬ ಒಂದೇ ವ್ಯಕ್ತಿಯನ್ನು ಆರಾಧಿಸಬೇಕು ಎಂದು ಪ್ರಧಾನಿ ಬಯಸುತ್ತಿದ್ದಾರೆ. ತಮಿಳುನಾಡು ಜನರ ಚೈತನ್ಯವನ್ನು ಮೋದಿ ಅರ್ಥ ಮಾಡಿಕೊಂಡಿಲ್ಲ" ಎಂದರು.

"ತಮಿಳುನಾಡಿನಲ್ಲಿ ಸಿಬಿಐ ಹಾಗೂ ಇಡಿ ಮೂಲಕ ಮೋದಿ ತಮಗೆ ಬೇಕಾದ್ದನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ತಮಿಳುನಾಡು ಸರ್ಕಾರವನ್ನು ಅವರು ನಿಯಂತ್ರಿಸಬಹುದಷ್ಟೆ. ತಮಿಳುನಾಡು ಜನರನ್ನಲ್ಲ" ಎಂದು ಹೇಳಿದರು.
ತಮಿಳು ಜನರ ಹಕ್ಕಿನ ಹೋರಾಟಕ್ಕಾಗಿ ತಾವು ರಾಜ್ಯಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದರು. ಈ ಸಂದರ್ಭ ತಮಿಳುನಾಡಿನೊಂದಿಗೆ ತಮ್ಮ ಕುಟುಂಬದ ನಂಟನ್ನು ನೆನಪಿಸಿಕೊಂಡು, ತಮಿಳುನಾಡಿನ ಜನರು ನನ್ನ ಅಜ್ಜಿ ಹಾಗೂ ತಂದೆ ಮೇಲೆ ಇಟ್ಟಿದ್ದ ಪ್ರೀತಿ ಅನನ್ಯ ಎಂದು ಹೊಗಳಿದರು.












Click it and Unblock the Notifications