ಆ. 28ರಂದು ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಸ್ಟಾಲಿನ್ ಘೋಷಣೆ ಬಹುತೇಕ ಖಚಿತ
ಚೆನ್ನೈ, ಆಗಸ್ಟ್ 26: ಸದ್ಯಕ್ಕೆ ದ್ರಾವಿಡ ಮುನ್ನೆಟ್ರ ಕಳಗಂ (ಡಿಎಂಕೆ) ಕಾರ್ಯಾಧ್ಯಕ್ಷರಾಗಿರುವ ಎಂ.ಕೆ.ಸ್ಟಾಲಿನ್ ಭಾನುವಾರದಂದು ಚೆನ್ನೈನಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ (ಅಣ್ಣಾ ಅರಿವಾಲಯಂ) ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ದೀರ್ಘಾವಧಿ ಕಾಲಕ್ಕೆ ಡಿಎಂಕೆಗೆ ಅಧ್ಯಕ್ಷರಾಗಿದ್ದ ಎಂ.ಕರುಣಾನಿಧಿ ನಿಧನದಿಂದ ಆ ಸ್ಥಾನ ತೆರವಾಗಿದೆ.
ಹಿರಿಯ ನಾಯಕ ದುರೈಮುರುಗನ್ ಖಜಾಂಚಿ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆಗಸ್ಟ್ 28ರಂದು ಚೆನ್ನೈನಲ್ಲಿ ನಡೆಯಲಿರುವ ಪಕ್ಷದ ಸಾಮಾನ್ಯ ಸಭೆಯಲ್ಲಿ ಇವರಿಬ್ಬರ ಆಯ್ಕೆ ಆಗುವ ಸಾಧ್ಯತೆಗಳಿವೆ. ನಾಮಪತ್ರ ಸಲ್ಲಿಕೆಗೂ ಮುನ್ನ ಸ್ಟಾಲಿನ್, ದುರೈ ಮುರುಗನ್ ಹಾಗೂ ಟಿ.ಆರ್.ಬಾಲು, ಎ.ರಾಜಾ ಸೇರಿ ಗೋಪಾಲಪುರಂನ ನಿವಾಸದಲ್ಲಿ ಕರುಣಾನಿಧಿ ಅವರ ಪತ್ನಿ ದಯಾಳು ಅಮ್ಮಾಳ್ ರನ್ನು ಭೇಟಿ ಮಾಡಿದರು.

ಆ ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಅನ್ಬಳಗನ್ ರನ್ನು ಭೇಟಿ ಮಾಡಿದರು. ಅಲ್ಲಿಂದ ಮರೀನಾ ಬೀಚ್ ನಲ್ಲಿರುವ ಡಿಎಂಕೆ ಸ್ಥಾಪಕ ಸಿ.ಎನ್.ಅಣ್ಣಾದುರೈ ಹಾಗೂ ಕರುಣಾನಿಧಿ ಸ್ಮಾರಕಕ್ಕೆ ನೇರವಾಗಿ ತೆರಳಿದರು. ಅಲ್ಲಿ ಹೂವಿನ ಗುಚ್ಛಗಳನ್ನು ಇರಿಸಿ, ಗೌರವ ಸಲ್ಲಿಸಿದರು. ಡಿಎಂಕೆ ಪಕ್ಷದ ಎಲ್ಲ ಅರವತ್ತೈದು ಜಿಲ್ಲಾ ಕಾರ್ಯದರ್ಶಿಗಳು ಸ್ಟಾಲಿನ್ ಹಾಗೂ ದುರೈಮುರುಗನ್ ಹೆಸರನ್ನು ಅಧ್ಯಕ್ಷ ಹಾಗೂ ಖಜಾಂಚಿ ಹುದ್ದೆಗೆ ಪ್ರಸ್ತಾಪಿಸಿದ್ದಾರೆ.
ಸ್ಟಾಲಿನ್ ಹಾಗೂ ದುರೈ ಮುರುಗನ್ ಅವಿರೋಧವಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ ಎಂದು ಎ.ರಾಜಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.












Click it and Unblock the Notifications