ತಮಿಳುನಾಡು ಸಿಎಂ ಪಳನಿಸ್ವಾಮಿ ವಿರುದ್ಧ ಸಿಬಿಐ ತನಿಖೆ
ಚೆನ್ನೈ, ಅಕ್ಟೋಬರ್ 12: ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಿರುದ್ಧ ಸಿಬಿಐ ತನಿಖೆಗೆ ಮದ್ರಾಸ್ ಹೈಕೋರ್ಟ್ ಇಂದು (ಅಕ್ಟೋಬರ್ 12) ಆದೇಶ ನೀಡಿದೆ. ರಾಜ್ಯ ಹೆದ್ದಾರಿ ಇಲಾಖೆ ಗುತ್ತಿಗೆ ಹಂಚಿಕೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಪಳನಿಸ್ವಾಮಿ ಅವರು ಆರೋಪಿಯಾಗಿದ್ದಾರೆ.
ರಾಜ್ಯ ಹೆದ್ದಾರಿ ಖಾತೆ ಸಚಿವಾಲಯದ ಜವಾಬ್ದಾರಿಯನ್ನು ಹೊಂದಿರುವ ಪಳನಿಸ್ವಾಮಿ ಅವರು ಸ್ವಜನಪಕ್ಷಪಾತ, ಅಧಿಕಾರ ದುರ್ಬಳಕೆ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹೆದ್ದಾರಿ ಕಾಮಗಾರಿಯ ಗುತ್ತಿಗೆ ಪ್ರಕಿಯೆ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ಡಿಎಂಕೆ ದೂರು ಸಲ್ಲಿಸಿತ್ತು.
ಅಕ್ಟೋಬರ್ 09ರಂದು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶನಾಲಯ(DVAC)ವು ಮದ್ರಾಸ್ ಹೈಕೋರ್ಟಿಗೆ ಈ ಕೇಸಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿತ್ತು. ಆದರೆ, ಆ ವರದಿಯಲ್ಲಿ ಸಿಎಂ ಪಳನಿಸ್ವಾಮಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.

ಬಹುಕೋಟಿ ಗುತ್ತಿಗೆ ಹಗರಣದಲ್ಲಿ ಪಳನಿಸ್ವಾಮಿ ವಿರುದ್ಧ ತನಿಖೆ ನಡೆಸುವಂತೆ DVAC ಗೆ ಸೂಚಿಸುವಂತೆ ಕೋರಿ ಮದ್ರಾಸ್ ಹೈಕೋರ್ಟಿಗೆ ಡಿಎಂಕೆ ಅರ್ಜಿ ಹಾಕಿತ್ತು. ಆದರೆ, ಡಿವಿಎಸಿ ಇತ್ತೀಚೆಗೆ ಸಲ್ಲಿಸಿದ ವರದಿಯಲ್ಲಿ ಪಳನಿಸ್ವಾಮಿ ವಿರುದ್ಧ ಸಾಕ್ಷ್ಯಗಳಿರಲಿಲ್ಲ.
ಪಳನಿಗೆ ಕಂಟಕವಾದ ಐಟಿ ದಾಳಿ: ಕಳೆದ ಜುಲೈ ತಿಂಗಳಿನಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಗುತ್ತಿಗೆದಾರ, ಎಸ್ ಪಿ ಕೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕೋ ಎಕ್ಸ್ ಪ್ರೆಸ್ ವೇ ಪೈ ಲಿ ಮಾಲೀಕ ನಾಗರಾಜನ್ ಸೆಯ್ಯದೊರೈ ಗೆ ಸೇರಿದ ಅಪಾರ ಆಸ್ತಿ ಪಾಸ್ತಿ ಜಪ್ತಿ ಮಾಡಲಾಗಿತ್ತು. ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ನಾಗರಾಜನ್ ಇಬ್ಬರು ಆಪ್ತರು ಎಂಬುದು ಗುಟ್ಟಾದ ವಿಷಯವಲ್ಲ.
ಸುಮಾರು 170 ಕೊಟಿ ರು ನಗದು, 100ಕೊಟಿ ರು ಗೂ ಅಧಿಕ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು.
ಹೀಗಾಗಿ, ಡಿಎಂಕೆ ಹೆಚ್ಚುವರಿ ಮನವಿ ಸಲ್ಲಿಸಿ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿತ್ತು. ಡಿಎಂಕೆ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಒಂದು ವಾರದಲ್ಲಿ ಇಲ್ಲಿ ತನಕದ ವರದಿಯನ್ನು ಸಿಬಿಐಗೆ ವರ್ಗಾಯಿಸುವಂತೆ ಡಿವಿಎಸಿಗೆ ಕೋರ್ಟ್ ಸೂಚಿಸಿದೆ. ತನಿಖೆ ಕೈಗೊಂಡು ಮೊದಲ ವರದಿ ಸಲ್ಲಿಸಲು ಸಿಬಿಐಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ.












Click it and Unblock the Notifications