ಚೆನ್ನೈನಲ್ಲಿ ಕನ್ನಡಿಗ ಐಪಿಎಸ್ ಅಧಿಕಾರಿ ನಿಗೂಢ ಸಾವು
ಚೆನ್ನೈ, ಫೆಬ್ರವರಿ 18 : ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿಯೊಬ್ಬರು ಚೆನ್ನೈನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಗುರುವಾರ ಪೊಲೀಸ್ ಆಫೀಸರ್ಸ್ ಮೆಸ್ನಲ್ಲಿ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮೃತಪಟ್ಟವರನ್ನು ಐಪಿಎಸ್ ಅಧಿಕಾರಿ ಎನ್.ಹರೀಶ್ (31) ಎಂದು ಗುರುತಿಸಲಾಗಿದೆ. 2009ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಹರೀಶ್ ಡೈರಕ್ಟರೇಟ್ ಆಫ್ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ (ಡಿವಿಎಸಿ) ದಳದಲ್ಲಿ ಎಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಹರೀಶ್ ಮಧುರೈನಿಂದ ಚೆನ್ನೈಗೆ ವರ್ಗಾವಣೆಗೊಂಡಿದ್ದರು. [ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವು]

ಗುರುವಾರ ಬೆಳಗ್ಗೆ 10 ಗಂಟೆಯಾದರೂ ಹರೀಶ್ ಅವರು ರೂಂನ ಬಾಗಿಲು ತೆರೆದಿರಲಿಲ್ಲ. ಮೆಸ್ ಸಿಬ್ಬಂದಿಗಳು ಕೊಠಡಿಯ ಬಾಗಿಲು ಮುರಿದು ಒಳನುಗ್ಗಿದಾಗ ಹರೀಶ್ ಅವರ ಮೃತದೇಹ ಪತ್ತೆಯಾಗಿದೆ. ಎಗ್ಮೋರ್ನಲ್ಲಿರುವ ಪೊಲೀಸ್ ಆಫೀಸರ್ಸ್ ಮೆಸ್ನಲ್ಲಿ ಅವರು ವಾಸವಾಗಿದ್ದರು. ಹೃದಯಾಘಾತದಿಂದ ಅವರು ಸಾವನ್ನಪಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. [ಪೊಲೀಸ್ ಇಲಾಖೆಯಲ್ಲಿ ಬಡ್ತಿ, ವರ್ಗಾವಣೆ : ಇಲ್ಲಿದೆ ಪಟ್ಟಿ]
ಕೋಲಾರ ಮೂಲದವರು : ಹರೀಶ್ ಅವರ ತಂದೆ-ತಾಯಿ ಮೂಲತಃ ಕೋಲಾರದವರು. ಸದ್ಯ, ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಚೆನ್ನೈ ಪೊಲೀಸ್ ವರಿಷ್ಠಾಧಿಕಾರಿಗಳು ಇಂದು ಬೆಳಗ್ಗೆ ಹರೀಶ್ ಮೃತಪಟ್ಟಿರುವ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

ಹರೀಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಹರೀಶ್ ಅವರಿಗೆ ಒಂದು ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಮಾರ್ಚ್ 29ರಂದು ಮದುವೆ ನಡೆಯಬೇಕಿತ್ತು.












Click it and Unblock the Notifications