Breaking: ಕಲ್ಲಕುರಿಚಿ ಬಾಲಕಿ ಸಾವು, ಮರಣೋತ್ತರ ಪರೀಕ್ಷೆ ಮೌಲ್ಯಮಾಪನ
ಚೆನ್ನೈ, ಜುಲೈ 22: ತಮಿಳುನಾಡಿನ ಕಲ್ಲಕುರಿಚಿ ಬಾಲಕಿಯ ಸಾವು ಪ್ರಕರಣ ದಿನೇ ದಿನೇ ಕಗ್ಗಂಟಾಗುತ್ತಾ ಇದೆ. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್, ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿಯನ್ನು ಮೌಲ್ಯಮಾಪನ ಮಾಡಲು ಆದೇಶಿಸಿದೆ.
ಸಂತ್ರಸ್ತ ಬಾಲಕಿಯ ತಂದೆ ತಮ್ಮ ಆಯ್ಕೆಯ ಒಬ್ಬ ವಿಧಿವಿಜ್ಞಾನ ತಜ್ಞರಿಂದ ಮತ್ತೆ ಮರಣೋತ್ತರ ಪರೀಕ್ಷೆಯನ್ನು ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ಬಾಲಕಿಯ ಮೃತದೇಹ ಪಡೆಯಲು ಏಕೆ ವಿಳಂಬ ಮಾಡುತ್ತಿದ್ದೀರಿ? ಎಂದು ಸಂತ್ರಸ್ತೆಯ ಪೋಷಕರಿಗೆ ಪ್ರಶ್ನೆ ಮಾಡಿದೆ.
ಜೊತೆಗೆ ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಸೆಂಟರ್ನ ಮೂವರು ವೈದ್ಯರ ಸಮಿತಿಯು ಮರಣೋತ್ತರ ಪರೀಕ್ಷೆಯ ವರದಿಗಳನ್ನು ಮೌಲ್ಯಮಾಪನ ಮಾಡಬೇಕು ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.

ಮೃತ ಬಾಲಕಿಯ ಪೋಷಕರಿಗೆ ನಾಳೆ (ಶನಿವಾರ) ಬೆಳಗ್ಗೆ 11 ಗಂಟೆಯೊಳಗೆ ಆಕೆಯ ಮೃತದೇಹ ಸ್ವೀಕರಿಸುವಂತೆ ನ್ಯಾಯಾಲಯವು ಸೂಚನೆ ನೀಡಿದೆ.
ಮರು ಮರಣೋತ್ತರ ಪರೀಕ್ಷೆಯಲ್ಲಿ ತಮ್ಮ ಆಯ್ಕೆಯ ಒಬ್ಬ ಫೋರೆನ್ಸಿಕ್ ತಜ್ಞರನ್ನು ಸೇರಿಸುವ ಮೂಲಕ ಮರಣೋತ್ತರ ಪರೀಕ್ಷೆಯನ್ನು ನಡೆಸುವಂತೆ ಕೋರಿದ್ದ ಬಾಲಕಿಯ ತಂದೆಯ ಮನವಿಯನ್ನು ಗುರುವಾರ ಸುಪ್ರೀಂಕೋರ್ಟ್ ವಿಚಾರಣೆಗೆ ನಿರಾಕರಿಸಿತ್ತು. ಜೊತೆಗೆ ಪ್ರಕರಣ ಸಂಬಂಧ ಸಂಬಂಧಪಟ್ಟ ಹೈಕೋರ್ಟ್ ಸಂಪರ್ಕಿಸುವಂತೆ ಸೂಚನೆ ನೀಡಿತ್ತು.
ತಮಿಳುನಾಡಿನ ಕಲ್ಲಕುರಿಚಿ ಬಳಿಯ ಚಿನ್ನ ಸೇಲಂನಲ್ಲಿರುವ ಖಾಸಗಿ ಹೈಯರ್ ಸೆಕೆಂಡರಿ ಶಾಲೆಯ 12 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕರ ಚಿತ್ರಹಿಂಸೆಗೆ ಒಳಗಾಗಿ ಕಳೆದ ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
Recommended Video
ಶವಪರೀಕ್ಷೆಯಲ್ಲಿ ವಿದ್ಯಾರ್ಥಿಯ ಮೈಮೇಲೆ ಗಾಯಗಳು ಮತ್ತು ರಕ್ತಸ್ರಾವ ಕಂಡುಬಂದಿದೆ. ಶಾಲಾ ಬಾಲಕಿಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಅನೇಕ ಪ್ರತಿಭಟನೆಗಳು ನಡೆದಿದ್ದವು. ಪ್ರಕರಣದಲ್ಲಿ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ.












Click it and Unblock the Notifications