ಚೆಲ್ಲಿದ ರಕ್ತ; ತಮಿಳುನಾಡಲ್ಲಿ ಜಲ್ಲಿಕಟ್ಟಿಗೆ ಇಬ್ಬರು ಬಲಿ
ಚೆನ್ನೈ, ಜನವರಿ 22: ತಮಿಳುನಾಡಿನ ಪುದುಕೊಟೈನಲ್ಲಿ ನಡೆದ ಜಲ್ಲಿಕಟ್ಟಿನ ವೇಳೆ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಗೂಳಿಯ ಕೊಂಬು ಚುಚ್ಚಿ ಮೋಹನ್ (30) ಮತ್ತು ರಾಜಾ (30) ಎಂಬುವವರು ಸಾವನ್ನಪ್ಪಿದ್ದಾರೆ.
ಪುದುಕೊಟೈನಲ್ಲಿ ರಾಕೂಸಲ್ ಗ್ರಾಮದಲ್ಲಿ ಭಾನುವಾರ ರಾಜ್ಯ ಸರಕಾರದ ಕಡೆಯಿಂದ ಜಲ್ಲಿಕಟ್ಟನ್ನು ಆಯೋಜಿಸಲಾಗಿತ್ತು. ಸ್ವತಃ ಆರೋಗ್ಯ ಸಚಿವ ವಿಜಯ್ ಭಾಸ್ಕರನ್ ಈ ಜಲ್ಲಿಕಟ್ಟನ್ನು ಬೆಳಿಗ್ಗೆ ಉದ್ಘಾಟನೆ ಮಾಡಿದ್ದರು. ಆದರೆ ಇದಾಗಿ ಸ್ವಲ್ಪ ಹೊತ್ತಿನಲ್ಲೇ ಈ ನಿಧನ ವಾರ್ತೆ ಕೇಳಿ ಬಂದಿದೆ.

ಕೆರಳಿದ ಗೂಳಿಯ ಕೊಂಬು ಚುಚ್ಚಿ ಮೋಹನ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡಿದ್ದ ರಾಜುರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ದಾರಿ ಮಧ್ಯೆ ಆತ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನು ಸುಮಾರು 57ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿನ ಜಲ್ಲಿಕಟ್ಟಿನಲ್ಲಿ 150ಕ್ಕೂ ಹೆಚ್ಚು ಗೂಳಿಗಳು ಭಾಗವಹಿಸಿದ್ದವು.
ಮತ್ತೆ ನಿಷೇಧಕ್ಕೆ ಬೇಡಿಕೆ?
ಹಲವು ದಿನಗಳಿಂದ ಉಗ್ರ ಪ್ರತಿಭಟನೆ ಮಾಡಿ ತಮಿಳು ಜನರು ಜಲ್ಲಿಕಟ್ಟನ್ನು ಒಲಿಸಿಕೊಂಡಿದ್ದರು. ಇದಕ್ಕೆ ಸಾಥ್ ನೀಡುವಂತೆ ಕೇಂದ್ರದ ಮೇಲೆ ಒತ್ತಡ ತಂದು, ಕೊನೆಗೆ ಸುಗ್ರೀವಾಜ್ಞೆಯ ಮೂಲಕ ರಾಜ್ಯದಲ್ಲಿ ತಮಿಳುನಾಡು ಸರಕಾರವೂ ಜಲ್ಲಿಕಟ್ಟನ್ನು ಜಾರಿಗೆ ತಂದಿತ್ತು.
ಇಷ್ಟೆಲ್ಲಾ ಮಾಡಿ ಕೊನೆಗೆ ಜಲ್ಲಿಕಟ್ಟು ನಡೆದರೆ ಮೊದಲೇ ದಿನವೇ ಇಬ್ಬರ ರಕ್ತ ಹರಿದಿದೆ. ಇಲ್ಲಿ ಪ್ರಾಣಿ ಹಿಂಸೆಯ ಬದಲಿಗೆ ಮನುಷ್ಯರೇ ಹಿಂಸೆಗೆ ಗುರಿಯಾಗಿದ್ದಾರೆ. ಇಬ್ಬರು ಸಾವನ್ನಪ್ಪಿ 57ಕ್ಕೂ ಹೆಚ್ಚು ಜನ ಗಾಯಗೊಂಡಿರುವುದೇ ಇದಕ್ಕೆ ಸಾಕ್ಷಿ.
ಇಲ್ಲೀವರೆಗೆ ಪ್ರಾಣಿ ಹಿಂಸೆಯ ಹೆಸರಿನಲ್ಲಿ ಜಲ್ಲಿಕಟ್ಟಿಗೆ ನಿಷೇಧ ಹೇರಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದ ಪೇಟಾ ಮುಂತಾದ ಸಂಸ್ಥೆಗಳು, ಇದೀಗ ಮನುಷ್ಯ ಹಿಂಸೆಯ ಹೆಸರಿನಲ್ಲಿ ಮತ್ತೆ ಜಲ್ಲಿಕಟ್ಟು ನಿಷೇಧಕ್ಕೆ ಒತ್ತಾಯಿಸುತ್ತಾರೋ ಗೊತ್ತಿಲ್ಲ.












Click it and Unblock the Notifications