ತಮಿಳುನಾಡಿನ ರಾಜಕೀಯ ಮುಖಂಡನ ಖಾತೆಯಲ್ಲಿ 246 ಕೋಟಿ ರುಪಾಯಿ
ಚೆನ್ನೈ, ಸೆಪ್ಟೆಂಬರ್ 9: ಈ ಸುದ್ದಿ ಭಾರೀ ಸದ್ದು ಮಾಡಿದೆ. ತಮಿಳುನಾಡಿನ ವ್ಯಕ್ತಿಯೊಬ್ಬರ ಖಾತೆಯಲ್ಲೇ ನವೆಂಬರ್ ನಲ್ಲಿ ಘೋಷಿಸಿದ ಅಪನಗದೀಕರಣದ ನಂತರ 246 ಕೋಟಿ ರುಪಾಯಿ ಜಮೆ ಮಾಡಿರುವುದು ಬೆಳಕಿಗೆ ಬಂದಿದೆ.
ಅಪನಗದೀಕರಣದ ನಂತರ ಅನುಮಾನಾಸ್ಪದ ಠೇವಣಿ ಆಗಿರುವ ಬ್ಯಾಂಕ್ ಖಾತೆಗಳ ಪರಿಶೀಲನೆಯನ್ನು ಮುಂದುವರಿಸಿದ್ದಾರೆ. ಅಂದ ಹಾಗೆ ತಮಿಳುನಾಡಿನಲ್ಲಿ ರಾಜಕೀಯ ಮುಖಂಡರೊಬ್ಬರಿಗೆ ಸೇರಿದ ಖಾತೆಯಲ್ಲಿ 246 ಕೋಟಿ ರುಪಾಯಿ ಜಮೆಯಾಗಿರುವುದು ಪತ್ತೆಯಾಗಿದೆ.

ಕುತೂಹಲದ ಸಂಗತಿಯೆಂದರೆ, ಬ್ಯಾಂಕ್ ವಹಿವಾಟಿನ ನಂತರ ಈ ಹಣ ಜಮೆಯಾಗಿರುವುದು ಗೊತ್ತಾಗಿದೆ. ತಮಿಳುನಾಡು ಹಾಗೂ ಪುದುಚೆರಿ ವಲಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ತಮಿಳುನಾಡಿನಲ್ಲೇ ಅಗಾಧ ಹಣ ಜಮೆಯಾದ ಪ್ರಕರಣ ಇದು ಎಂದು ಐಟಿ ಮೂಲಗಳು ಮಾಹಿತಿ ನೀಡಿವೆ.
ಇನ್ನು ಈ ಸಂಬಂಧವಾಗಿ ನೋಟಿಸ್ ಜಾರಿ ಮಾಡಿದ್ದು, ಆ ರಾಜಕೀಯ ಮುಖಂಡ ಅಷ್ಟೂ ಹಣಕ್ಕೂ ತೆರಿಗೆ ಹಾಗೂ ದಂಡ ಕಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ತಿಂಗಳಿನಿಂದ ತಮಿಳುನಾಡು ಮಾತ್ರವಲ್ಲದೇ ಇಡೀ ದೇಶದಲ್ಲಿ ಖಾತೆಗಳ ಪರಿಶೀಲನೆ ನಡೆಯುತ್ತಿದೆ.
ನವೆಂಬರ್ 8 ರಿಂದ ಡಿಸೆಂಬರ್ 31ರ ಮಧ್ಯೆ ಹೆಚ್ಚಿನ ಹಾಗೂ ಅನುಮಾನಾಸ್ಪದ ಮೊತ್ತದ ಠೇವಣಿ ಇಟ್ಟ ಖಾತೆಗಳನ್ನು ಪರಶೀಲಿಸಲಾಗುತ್ತಿದ್ದು, ಕೆಲವರು ಬೇನಾಮಿ ಖಾತೆಯಲ್ಲಿ ಹಣ ಇಟ್ಟಿರುವುದು ಬೆಳಕಿಗೆ ಬಂದಿದೆ. ಅವುಗಳನ್ನು ಜಪ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications