ರಜನಿಕಾಂತ್ ಜೊತೆ ಮೈತ್ರಿ ಸುಳಿವು ನೀಡಿದ ಕಮಲ್ ಹಾಸನ್
ಚೆನ್ನೈ, ಡಿಸೆಂಬರ್ 16: ತಮಿಳುನಾಡು ವಿಧಾನಸಭಾ ಚುನಾವಣೆಯ ತಯಾರಿ ನಡುವೆ ನಟ ಕಮಲ್ ಹಾಸನ್, ನಟ ರಜನಿಕಾಂತ್ ಅವರೊಂದಿಗೆ ಕೈಜೋಡಿಸುವ ಸುಳಿವು ನೀಡಿದ್ದಾರೆ.
ತಮಿಳುನಾಡಿನ ಜನರಿಗೆ ನಮ್ಮ ಮೈತ್ರಿಯಿಂದ ಒಳ್ಳೆಯದಾಗುತ್ತದೆ ಎಂದರೆ ನಾನು ರಜನಿಕಾಂತ್ ಅವರೊಂದಿಗೆ ಕೈಜೋಡಿಸುವ ಆಲೋಚನೆ ಮಾಡುತ್ತೇನೆ ಎಂದು ಪುನರುಚ್ಚರಿಸಿದ್ದಾರೆ. ನಮ್ಮಿಬ್ಬರ ಸಿದ್ಧಾಂತ, ಚಿಂತನೆಗಳು ಹೊಂದಾಣಿಕೆಯಾದರೆ, ಆ ಹೊಂದಾಣಿಕೆ ತಮಿಳುನಾಡಿನ ಜನರಿಗೆ ಸಹಾಯಕ್ಕೆ ಬರುತ್ತದೆ ಎಂದಾದರೆ, ನಾನು ಸಹಕಾರ ನೀಡಲು ಸಿದ್ಧ ಎಂದಿದ್ದಾರೆ.
ರಜನಿಕಾಂತ್ ಜತೆ ಕಮಲ್ ರಾಜಕೀಯ ಕಮಾಲ್ ಸಾಧ್ಯತೆ
2021ರ ಚುನಾವಣೆಗೆ ಕಮಲ್ ಹಾಸನ್ ತಯಾರಿ ನಡೆಸುತ್ತಿದ್ದು, ಮಂಗಳವಾರ ತಮಿಳುನಾಡಿನ ತೂತುಕೂಡಿ ಜಿಲ್ಲೆಯಲ್ಲಿ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದರು. ತಮ್ಮ ಮಕ್ಕಳ್ ನೀತಿ ಮಯ್ಯಂ (ಎಂಎನ್ಎಂ) ಪರವಾಗಿ ಮೊದಲ ಹಂತದಲ್ಲಿ ನಾಲ್ಕು ದಿನಗಳ ಕಾಲ ಪ್ರಚಾರ ಕಾರ್ಯವನ್ನು ಮುಗಿಸಿದ್ದಾರೆ.
ಜನವರಿ 2021ಕ್ಕೆ ನಟ ರಜನಿಕಾಂತ್ ಕೂಡ ಪಕ್ಷದ ಹೆಸರು, ಚಿಹ್ನೆಯನ್ನು ಘೋಷಿಸುವುದಾಗಿ ತಿಳಿಸಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಈ ಇಬ್ಬರೂ ತಮಿಳು ನಟರು ರಾಜಕೀಯವಾಗಿ ಒಂದಾದರೆ, ಚುನಾವಣೆಯ ಫಲಿತಾಂಶ, ತಮಿಳುನಾಡಿನ ರಾಜಕೀಯ ಬೆಳವಣಿಗೆ ಬಗ್ಗೆಯೂ ಅಪಾರ ನಿರೀಕ್ಷೆ ವ್ಯಕ್ತಗೊಂಡಿದೆ.
"ನಾವಿಬ್ಬರೂ ತಮಿಳುನಾಡಿನಲ್ಲಿ ಬದಲಾವಣೆ ಬೇಕು ಎಂದು ಬಯಸಿದ್ದೇವೆ. ರಜನಿಕಾಂತ್ ಅವರ ಪಕ್ಷ ಮೊದಲು ತಮ್ಮ ಸಿದ್ಧಾಂತ ಹಾಗೂ ನೀತಿಗಳ ಕುರಿತು ಸ್ಪಷ್ಟಪಡಿಸಲಿ. ಆನಂತರ ಮಾತನಾಡುತ್ತೇವೆ" ಎಂದು ತಿಳಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಅವರ ಪಕ್ಷವು ಮೊದಲ ಬಾರಿಗೆ ಚುನಾವಣೆ ಎದುರಿಸಿತ್ತು. ತಮಿಳುನಾಡಿನ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಒಟ್ಟಾರೆ ಶೇ.3.77ರಷ್ಟು ಮತವನ್ನು ಗಳಿಸಿತ್ತು. ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಸ್ಪರ್ಧಿಸುತ್ತಿದ್ದು, ತಮ್ಮ ಕ್ಷೇತ್ರವನ್ನು ಇನ್ನೂ ಘೋಷಿಸಿಲ್ಲ. ಡಿಎಂಕೆ ಹಾಗೂ ಎಡಿಎಂಕೆಗೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರ ಪಕ್ಷಗಳು ಪ್ರತಿಸ್ಪರ್ಧಿಗಳಾಗಲಿವೆ.
ಇದೇ ಸಂದರ್ಭ ಎಂಜಿ ರಾಮಚಂದ್ರನ್ (ಎಐಎಡಿಎಂಕೆ ಸ್ಥಾಪಕ) ಅವರನ್ನೂ ನೆನೆಸಿಕೊಂಡ ಕಮಲ್ ಹಾಸನ್, "ಎಂಜಿಆರ್ ಮದುರೈಯನ್ನು ಎರಡನೇ ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ಕನಸು ಹೊಂದಿದ್ದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಂಜಿಆರ್ ಕನಸು ನನಸು ಮಾಡುತ್ತೇನೆ" ಎಂದರು.