ಜಯಲಲಿತಾಗೆ ಶಿರ ಸಾಷ್ಟಾಂಗ ನಮಸ್ಕಾರ ಮಾಡಿದ ಅಭಿಮಾನಿಗಳು
ಚೆನ್ನೈ, ಮೇ 19 : ಜೈಲಿಗಟ್ಟಿದಾಗ ಎದೆ ಬಡಿದುಕೊಂಡು ಅಳುವುದು, ಚುನಾವಣೆಯಲ್ಲಿ ಗೆದ್ದಾಗ ಎದೆ ತಟ್ಟಿಕೊಂಡು ಹರ್ಷ ವ್ಯಕ್ತಪಡಿಸುವುದು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅಭಿಮಾನಿಗಳಿಗೆ ಅತಿರೇಕದ ಸಂಗತಿ ಅಲ್ಲವೇ ಅಲ್ಲ. ಅದು ತಮ್ಮ ಆರಾಧ್ಯ ದೈವದೆಡೆಗೆ ತೋರಿಸಿಕೊಳ್ಳುವ ಪ್ರೀತಿಯ ದ್ಯೋತಕ.
ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ನಾಲ್ಕನೇ ಬಾರಿ ಮುಖ್ಯಮಂತ್ರಿ ಗದ್ದುಗೆ ಏರುತ್ತಿರುವ ಕುಮಾರಿ ಜಯಲಲಿತಾ ವಿಜಯೋತ್ಸಾಹದ ಚಿತ್ರಣಗಳನ್ನು ತಮಿಳುನಾಡಿನಲ್ಲಿ ಮಾತ್ರ ನೋಡಲು ಸಾಧ್ಯ. ಕೈಯಲ್ಲಿ ಹೂಗುಚ್ಛ ಹಿಡಿದು ಬಂದವರು ಜಯಮ್ಮನ ಕಾಲಿಗೆ ಬಿದ್ದಿದ್ದೇ ಬಿದ್ದಿದ್ದು. ಇಂಥ ದೃಶ್ಯ ಮತ್ತೆಲ್ಲಾದರೂ ನೋಡಲು ಸಾಧ್ಯವೆ?
ಬಂದವರಲ್ಲಿ ತಾವು ಗೆದ್ದವರು, ಮುಂದೆ ಮಿನಿಸ್ಟ್ರಾಗುವವರು, ಐಎಎಸ್, ಐಪಿಎಸ್ ಅಧಿಕಾರಿಗಳು, ಸಂಸದರು, ಜವಾನರಾಗಿ ಜಯಲಲಿತಾ ಸೇವೆ ಮಾಡುವವರು ಎಂಬ ಭೇದಭಾವ ಇರಲಿಲ್ಲ. ಜಾಸ್ತಿ ಸ್ಥಳ ಇಲ್ಲದಿದ್ದರಿಂದ ಹಲವರಿಗೆ ಸಾಷ್ಟಾಂಗ ನಮಸ್ಕಾರ ಮಾಡಲು ಸಾಧ್ಯವಾಗಲಿಲ್ಲವಷ್ಟೆ. ಸ್ವಾಮಿಭಕ್ತಿಯ ಅತಿರೇಕದ ಪರಾಕಾಷ್ಠೆಯ ಪರಮಾವಧಿಯನ್ನು ಅಲ್ಲಿ ನೋಡಬಹುದಾಗಿತ್ತು. [ಜಯಮ್ಮನ 1 ರು. ಇಡ್ಲಿ ಸಾಂಬಾರಿಗೆ ಮರುಳಾದ ಮತದಾರರು]
ಇದಕ್ಕೆ ಕಾರಣವೂ ಇಲ್ಲದಿಲ್ಲ. ಹಿಂದೆ ಮೂರು ಬಾರಿ ಮುಖ್ಯಮಂತ್ರಿಯಾದ ನಂತರ ನಡೆದ ಚುನಾವಣೆಯಲ್ಲಿ ಜಯಲಲಿತಾ ಗೆದ್ದಿದ್ದೇ ಇಲ್ಲ. ಆದರೆ, ಈ ಬಾರಿ ತಮ್ಮ ಅಧಿಕಾರವನ್ನು ಉಳಿಸಿಕೊಂಡು ಇತಿಹಾಸ ನಿರ್ಮಿಸಿದ್ದಾರೆ. ಎಂಜಿ ರಾಮಚಂದ್ರನ್ ನಂತರ ಇಂತಹ ಸಾಧನೆ ಮಾಡಿದ ಮೊದಲ ನಾಯಕಿ ಜಯಲಲಿತಾ. 1984ರಲ್ಲಿ ಎಂಜಿಆರ್ ಈ ಸಾಧನೆ ಮಾಡಿದ್ದರು. [ಸುಪ್ರೀಂಕೋರ್ಟಲ್ಲಿ ತೀರ್ಪು ಉಲ್ಟಾ ಆದ್ರೆ ಅಮ್ಮನ ಭವಿಷ್ಯವೂ ಪುಲ್ಟಾ!]
ಬಹುಮತಕ್ಕೆ ಎಐಎಡಿಎಂಕೆ ಪಕ್ಷಕ್ಕೆ ಬೇಕಿಗಿದ್ದುದು 118 ಸೀಟುಗಳು. ಆದರೆ, ಮತದಾರ ಕರುಣಾನಿಧಿಗೆ ಕರುಣೆ ತೋರದಿದ್ದರಿಂದ 130 ಸೀಟುಗಳನ್ನು ತಮ್ಮದಾಗಿಸಿಕೊಂಡು 68 ವರ್ಷದ ಜಯಲಲಿತಾ ಜಯದ ಮಾಲೆ ತೊಟ್ಟಿದ್ದಾರೆ. ಜನರ ಸೇವೆ ಮಾಡುವುದಲ್ಲದೆ ನನಗೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಸಹಸ್ರಾರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. [ಸೋಲೊಪ್ಪಿಕೊಂಡ ರಾಹುಲ್ ರನ್ನು ಕಿಚಾಯಿಸಿದ ಟ್ವೀಟ್ಸ್]
ತಮಿಳುನಾಡಿನ ರಸ್ತೆರಸ್ತೆಗಳಲ್ಲಿ ಕೋಟ್ಯಂತರ ರು. ಮೌಲ್ಯದ ಪಟಾಕಿ ಸರಗಳು ಸದ್ದು ಮಾಡುತ್ತ ಸತ್ತು ಹೋದವು. ಸಹಸ್ರಾರು ಲಾಡುಗಳು ಅಭಿಮಾನಿಗಳ ಬಾಯಿ ಸೇರಿದವು. ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು, ಹಲವರು ಸಂತಸದ ಕಂಬನಿ ಮಿಡಿದರು. ಎಲ್ಲೆಲ್ಲೂ ಹಬ್ಬದ ವಾತಾವರಣ ಮನೆಮಾಡಿತ್ತು. [ವಿಜಯೋತ್ಸಾಹದ ಚಿತ್ರಗಳು]