Go Back Modi: ಪ್ರಧಾನಿ ಮೋದಿ ಭೇಟಿಗೆ ತಮಿಳುನಾಡಿನಲ್ಲಿ ವ್ಯಾಪಕ ವಿರೋಧ
ಚೆನ್ನೈ, ಫೆಬ್ರವರಿ 13: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡು ರಾಜಧಾನಿ ಚೆನ್ನೈಗೆ ಭಾನುವಾರ ಭೇಟಿ ನೀಡುತ್ತಿದ್ದಾರೆ. ಕೇವಲ ಮೂರು ಗಂಟೆಯ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ. ಆದರೆ ಪ್ರಧಾನಿಯ ಭೇಟಿಗೆ ತಮಿಳಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೋದಿ ಅವರ ಭೇಟಿಗೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗುವುದು ಇದು ಮೊದಲ ಸಲವೇನಲ್ಲ. ಅವರ ಪ್ರತಿ ಪ್ರವಾಸದಲ್ಲಿಯೂ 'ಗೋ ಬ್ಯಾಕ್ ಮೋದಿ' ಅಭಿಯಾನ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗುತ್ತಿದೆ. ಅವರ ಭಾನುವಾರ ಭೇಟಿ ವಿರುದ್ಧದ 'ಗೋ ಬ್ಯಾಕ್ ಮೋದಿ' ಹ್ಯಾಶ್ಟ್ಯಾಗ್ ಕೂಡ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ.
ಪ್ರೇಮಿಗಳ ದಿನವಾದ ಫೆ. 14ರಂದು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಅಡಿಗಲ್ಲು ಹಾಕಲಿದ್ದಾರೆ. ಜತೆಗೆ ಪೂರ್ಣಗೊಂಡ ಯೋಜನೆಗಳನ್ನು ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಅವರು ಕ್ರೀಡಾಂಗಣದಲ್ಲಿ ಸಮಾರಂಭದ ಬಳಿಕ ಪ್ರಧಾನಿ ಮೋದಿ ಜತೆ ಅನೌಪಚಾರಿಕ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಮೋದಿ ಪ್ರವಾಸದ ವಿವರ
ಚೆನ್ನೈ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 10.40ರ ಸುಮಾರಿಗೆ ಬಂದಿಳಿಯುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ತೆರಳಲಿದ್ದಾರೆ. ನಂತರ 1.35ಕ್ಕೆ ಕೊಚ್ಚಿಯತ್ತ ಪ್ರಯಾಣಿಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಿಜೆಪಿ ಪದಾಧಿಕಾರಿಗಳು ಪ್ರಧಾನಿ ಅವರಿಗೆ ಭವ್ಯ ಸ್ವಾಗತ ಕೋರಲಿದ್ದಾರೆ. ಆದರೆ ಪ್ರಧಾನಿ ಜತೆ ಪಕ್ಷ ಮಟ್ಟದ ಯಾವುದೇ ಸಭೆ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಭಾರಿ ಭದ್ರತೆ ಏರ್ಪಾಡು
ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ನಗರದಾದ್ಯಂತ ನಾಲ್ಕು ಪದರಗಳಲ್ಲಿ 6,000 ಪೊಲೀಸ್ ಸಿಬ್ಬಂದಿ ಹಾಗೂ ಅದರ ವಿಶೇಷ ಘಟಕಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹೆಲಿಪ್ಯಾಡ್, ವಿಮಾನ ನಿಲ್ದಾಣ, ಸಾರ್ವಜನಿಕ ಸ್ಥಳಗಳು, ಕಾರ್ಯಕ್ರಮ ನಡೆಯುವ ಕ್ರೀಡಾಂಗಣ ಹಾಗೂ ಸುತ್ತಮುತ್ತಲೂ ಬಿಗಿ ಬಂದೋಬಸ್ತ್ ನಡೆಸಲಾಗಿದೆ.

ಮೋದಿಗೆ ಎಐಎಡಿಎಂಕೆ ವಂಚನೆ
ಪ್ರಧಾನಿ ಮೋದಿ ಅವರನ್ನು ಎಐಎಡಿಎಂಕೆ ವಂಚಿಸಲು ಪ್ರಯತ್ನಿಸುತ್ತಿದೆ. ಅವರು ಉದ್ಘಾಟಿಸಲಿರುವ ಯೋಜನೆಗೆ 2009ರಲ್ಲಿ ಡಿಎಂಕೆಯ ಅಧಿಕಾರಾವಧಿಯಲ್ಲಿ ಕರುಣಾನಿಧಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶಂಕುಸ್ಥಾಪನೆ ನೆರವೇರಿಸಿದ್ದರು ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ ಆರೋಪಿಸಿದ್ದಾರೆ.

165 ಕೋಟಿ ರೂ ಅನುದಾನ ನೀಡಿತ್ತು
'ಕಾವೇರಿ-ಗುಂಡರ್ ಸಂಪರ್ಕ ಯೋಜನೆಯ ಮೊದಲ ಹಂತಕ್ಕೆ ಆಗಿನ ಡಿಎಂಕೆ ಸರ್ಕಾರ ಕಾವೇರಿ ನದಿಗೆ ಮಯನೂರ್ ಸಮೀಪ ಬ್ಯಾರೇಜ್ ಸ್ಥಾಪಿಸಲು 165 ಕೋಟಿ ರೂ ಅನುದಾನ ನೀಡಿತ್ತು. ಅದು ಪೂರ್ಣಗೊಂಡಿತ್ತು. ಇದರ ಬಳಿಕ ಕಾವೇರಿ ನೀರನ್ನು ಹೊಸ ಕಾಲುವೆ ಸಿದ್ಧಪಡಿಸಿ ಅಗ್ನಿಯೂರ್- ದಕ್ಷಿಣ ವೆಲ್ಲಾರ್- ಮಣಿಮತ್ತೂರ್- ವೈಗೈ-ಗುಂಡರ್ ಮೂಲಕ ಬೇರೆಡೆ ತಿರುಗಿಸಲು ಯೋಜಿಸಲಾಗಿತ್ತು' ಎಂದು ಮುರುಗನ್ ತಿಳಿಸಿದ್ದಾರೆ.

'ಗೋ ಬ್ಯಾಕ್ ಮೋದಿ'
ಮೋದಿ ಅವರ ಭೇಟಿಗೆ ಸಾಮಾಜಿಕ ಜಾಲತಾಣದಲ್ಲಿ ಶನಿವಾರದಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. 'ಗೀ ಬ್ಯಾಕ್ ಮೋದಿ' ಎಂದು ಮೋದಿ ಆಗಮನದ ಮುನ್ನವೇ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಟ್ರೆಂಡ್ ಭಾನುವಾರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಕೃಷಿ ಕಾಯ್ದೆಗಳು, ರೈತರ ಪ್ರತಿಭಟನೆ ವಿಚಾರಗಳು, ತೈಲ ಬೆಲೆ ಏರಿಕೆ, ಹೆಚ್ಚಿದ ತೆರಿಗೆಗಳು, ಬೆಲೆ ಏರಿಕೆ, ಖಾಸಗೀಕರಣ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಮೋದಿ ಅವರನ್ನು ಟೀಕಿಸಲಾಗುತ್ತಿದೆ. ತಮಿಳುನಾಡು ಭೂಪಟದೊಳಗೆ ನಿಂತ ವ್ಯಕ್ತಿ ಮೋದಿ ಅವರನ್ನು ಒದ್ದೋಡಿಸುತ್ತಿರುವಂತಹ ಕಾರ್ಟೂನ್ಗಳನ್ನು ಟ್ವಿಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ.












Click it and Unblock the Notifications