ತೂತ್ತುಕುಡಿಯಲ್ಲಿ ನಾಲ್ವರು ಮಕ್ಕಳ ದಾರುಣ ಸಾವು
ತೂತ್ತುಕುಡಿ, ಆ.14: ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ವೇದನಾದಮ್ ಎಂಬ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ. ಅನಾಥವಾಗಿ ಬಿದ್ದಿದ್ದ ಕಾರೊಂದನ್ನು ಏರಿದ ಮಕ್ಕಳು ಇಂದು ಮಸಣ ಸೇರಿದ್ದಾರೆ. ನಾಲ್ವರು ಮಕ್ಕಳ ದಾರುಣ ಸಾವಿನ ಶೋಕದಲ್ಲಿ ಇಡೀ ಗ್ರಾಮ ಮುಳುಗಿದೆ.
ವೇದನಾದಮ್ನ ದೇವಸ್ಥಾನದಲ್ಲಿ ನಡೆಯುತ್ತಿದ್ದ ಉತ್ಸವಕ್ಕೆ ಈ ಮಕ್ಕಳು ತಮ್ಮ ಪೋಷಕರ ಜತೆ ಬಂದಿದ್ದರು. ಪೋಷಕರು ದೇವರಿಗೆ ಕೈ ಮುಗಿದು ಭಕ್ತಪರವಶರಾಗಿದ್ದಾಗ ಮಕ್ಕಳೆಲ್ಲರೂ ಆಟವಾಡಲು ದೇಗುಲದಿಂದ ಹೊರ ಬಿದ್ದಿದ್ದಾರೆ. ಅಲ್ಲೇ ಸಮೀಪದಲ್ಲಿ ನಿಲ್ಲಿಸಿದ್ದ ಕಾರೊಂದನ್ನು ನೋಡಿ ಒಳ ಹೊಕ್ಕಿದ್ದಾರೆ.
ಕಾರ್ ಡೋರ್ ಲಾಕ್ ಮಾಡಿರಲಿಲ್ಲ. ನಂತರ ಡೋರಲಾಕ್ ತೆಗೆಯಲು ಸಾಧ್ಯವಾಗದೆ ಆಮ್ಲಜನಕ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬ್ಯಾಂಕ್ ಸಾಲಗಾರರಿಂದ ವಶಪಡಿಸಿಕೊಳ್ಳಲಾಗಿದ್ದ ಕಾರುಗಳ ಜತೆ ಈ ಕಾರನ್ನೂ ದೇವಾಲಯದ ಬಳಿ ನಿಲ್ಲಿಸಲಾಗಿತ್ತು.

ಈ ಘಟನೆಯಲ್ಲಿ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿದ್ದು, ಮೃತರನ್ನು ಕೆ ಇಸಕ್ಕಿಯಮ್ಮಾಳ್(8), ಎ ಮುತ್ತಳಗು(10), ಎಸ್ ಮೋಸೆಸ್(7), ಪಿ ಆದಿ(4) ಎಂದು ಗುರುತಿಸಲಾಗಿದೆ.
ಮಕ್ಕಳ ಮೃತ ದೇಹಗಳನ್ನು ಕಂಡು ಜರ್ಜರಿತರಾದ ಮಕ್ಕಳ ಪೋಷಕರು ಮಕ್ಕಳ ಶವಗಳನ್ನು ಪಡೆಯಲು ಮೊದಲು ನಿರಾಕರಿಸಿದರಾದರೂ ನಂತರ ತೆಗೆದುಕೊಂಡರು. ಕಾರು ನಿಲ್ಲಿಸಿದ್ದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮೃತ ಮಗುವೊಂದರ ತಾಯಿ ಮುತ್ಯಾಲಮ್ಮಾಳ ಆಗ್ರಹಿಸಿದ್ದರು. ಪೋಷಕರ ಒತ್ತಾಯದ ಹಿನ್ನೆಲೆಯಲ್ಲಿ ಉದಾಸೀನತೆ ತೋರಿದ ಆರೋಪದ ಮೇಲೆ ಬ್ಯಾಂಕ್ ಸಿಬ್ಬಂದಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications