ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಕ್ರಿಕೆಟರ್ ಲಕ್ಷ್ಮಣ್ ಶಿವರಾಮಕೃಷ್ಣನ್
ಚೆನ್ನೈ, ಡಿ. 30: ಭಾರತ ಕ್ರಿಕೆಟ್ ಲೋಕದ ಹೆಮ್ಮೆಯ ಸ್ಪಿನ್ನರ್, ಮಾಜಿ ಕ್ರಿಕೆಟರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಇಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಸೇರ್ಪಡೆಗೊಂಡಿದ್ದಾರೆ. ತಮಿಳುನಾಡಿನ ಬಿಜೆಪಿ ಉಸ್ತುವಾರಿ ಸಿ.ಟಿ ರವಿ ಅವರ ಸಮ್ಮುಖದಲ್ಲಿ ಶಿವರಾಮಕೃಷ್ಣನ್ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.
ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ, ಸಣ್ಣ ಪುಟ್ಟ ಪಕ್ಷಗಳದ್ದೇ ಕಾರುಬಾರು. ಆಡಳಿತಾರೂಢ ಎಐಎಡಿಎಂಕೆ ಹಾಗೂ ಡಿಎಂಕೆ ನಡುವೆ ನೇರ ಹಣಾಹಣಿಯಿದೆ. ಕಾಂಗ್ರೆಸ್, ಬಿಜೆಪಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿವೆ. ನಟಿ ಖುಷ್ಬೂ, ಹೈದರಾಬಾದ್ ಪಾಲಿಕೆ ಚುನಾವಣೆ ವೇಳೆ ವಿಜಯಶಾಂತಿರನ್ನು ಸೆಳೆದ ಬಿಜೆಪಿ ಇನ್ನಷ್ಟು ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಮುಂದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿಟಿ ರವಿ, ರಜನಿಕಾಂತ್ ಅವರು ರಾಜಕೀಯ ಪ್ರವೇಶಕ್ಕೆ ಹಿಂದೇಟು ಹಾಕಿದ್ದರ ಬಗ್ಗೆ ಮೊದಲಿಗೆ ಪ್ರಸ್ತಾಪಿಸಿ, ರಜನಿಕಾಂತ್ ಅವರು ದೊಡ್ಡ ನಾಯಕ, ಅವರ ನಿರ್ಣಯವನ್ನು ನಾವು ಗೌರವಿಸಬೇಕಿದೆ. ಅವರ ಶಕ್ತಿ ಸಾಮರ್ಥ್ಯದ ಬಗ್ಗೆ ನಮಗೆ ಅರಿವಿದೆ. ದೇಶ, ಭಾಷೆಯ ವಿಷಯದಲ್ಲಿ ಅವರ ನಿಲುವು ಎಂದಿಗೂ ಅಚಲ ತಮಿಳುನಾಡಿನ ಏಳಿಗೆಗಾಗಿ ಅವರು ಸದಾ ಸಿದ್ಧ ಎಂಬುದನ್ನು ಮರೆಯುವಂತಿಲ್ಲ ಎಂದಿದ್ದಾರೆ.

ರಜನಿಕಾಂತ್ ಅವರು ಮೂರು ಪುಟಗಳ ಪತ್ರ ಬರೆದು ರಾಜಕೀಯ ರಂಗ ಪ್ರವೇಶಿಸುತ್ತಿಲ್ಲ ಎಂದು ಪತ್ರ ಮೂಲಕ ಸ್ಪಷ್ಟಪಡಿಸಿದ್ದಾರೆ. ಆದರೆ, ಯಾವುದೇ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಬಹುದು ಎಂಬ ನಿರೀಕ್ಷೆಯಂತೂ ಇದ್ದೇ ಇದೆ. ಎಐಎಡಿಎಂಕೆ ಹಾಗೂ ಬಿಜೆಪಿ ನಡುವಿನ ಮೈತ್ರಿ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣವಿಲ್ಲ. ಈ ಸಂದರ್ಭದಲ್ಲಿ ರಜನಿ ಬಾಹ್ಯ ಬೆಂಬಲ ಪ್ರಾಮುಖ್ಯವಾಗಲಿದೆ ಎಂಬ ಅಭಿಪ್ರಾಯವಿದೆ.
ಎಲ್ ಶಿವರಾಮಕೃಷ್ಣನ್: ಕ್ರಿಕೆಟ್ ಲೋಕದಲ್ಲಿ ''ಎಲ್ ಎಸ್', ''ಶಿವ ಎಂದು ಪ್ರೀತಿಯಿಂದ ಎಲ್ಲರೂ ಕರೆಯುವ ಲಕ್ಷ್ಮಣ್ ಶಿವರಾಮಕೃಷ್ಣನ್(54) ಅವರು ಬಲಗೈ ಲೆಗ್ ಸ್ಪಿನ್ನರ್ ಆಗಿ ತಮ್ಮದೇ ಆದ ಛಾಪು ಮೂಡಿಸಿದವರು. ಕಾಮೆಂಟೆಟರ್, ಐಸಿಸಿ ಸಮಿತಿ ಸದಸ್ಯರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.
1983ರಲ್ಲಿ ವೆಸ್ಟ್ ಇಂಡೀಸ್ ಪರ ಮೊದಲ ಟೆಸ್ಟ್ ಪಂದ್ಯವಾಡಿದ್ದು, 1986ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆ ಪಂದ್ಯವಾಡಿದ್ದಾರೆ. 9 ಟೆಸ್ಟ್ ಪಂದ್ಯಗಳಿಂದ 26 ವಿಕೆಟ್, 6/64 ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಪ್ರಥಮದರ್ಜೆಯಲ್ಲಿ 76 ಪಂದ್ಯಗಳಿಂದ 154 ವಿಕೆಟ್ , 7/28 ಶ್ರೇಷ್ಠ ಪ್ರದರ್ಶನ.












Click it and Unblock the Notifications