ಕೇಂದ್ರ ಸರ್ಕಾರ ತಮಿಳರಿಗೆ ದೊಡ್ಡ ದ್ರೋಹ ಮಾಡಿದೆ; ಕಮಲ್ ಹಾಸನ್
ಚೆನ್ನೈ, ಮಾರ್ಚ್ 25: ಶ್ರೀಲಂಕಾದಲ್ಲಿ ತಮಿಳರ ರಕ್ಷಣೆಗೆ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ವೇದಿಕೆ (ಯುಎನ್ಎಚ್ಆರ್ಸಿ) ತೆಗೆದುಕೊಂಡಿರುವ ನಿರ್ಣಯ ಸಂಬಂಧ ಭಾರತ ಸರ್ಕಾರ ಮತದಾನದಿಂದ ದೂರ ಉಳಿದಿದ್ದನ್ನು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಖಂಡಿಸಿದ್ದಾರೆ.
"ಭಾರತ ಸರ್ಕಾರದ ಈ ನಡೆ ತಮಿಳು ಭಾಷೆ ಹಾಗೂ ತಮಿಳರಿಗೆ ಮಾಡುತ್ತಿರುವ ದೊಡ್ಡ ದ್ರೋಹ" ಎಂದು ಟೀಕಿಸಿದ್ದಾರೆ. ಈ ಕುರಿತು ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, "ಯುಎನ್ಎಚ್ಆರ್ಸಿ ತೆಗೆದುಕೊಂಡಿರುವ ನಿರ್ಣಯ ಸಂಬಂಧ ಭಾರತ ಮತದಾನದಿಂದ ದೂರ ಉಳಿದಿದೆ. ಇದು ಕೇಂದ್ರ ಸರ್ಕಾರ ತಮಿಳರಿಗೆ ಮಾಡಿರುವ ದ್ರೋಹವನ್ನು ಎತ್ತಿ ತೋರುತ್ತಿದೆ" ಎಂದಿದ್ದಾರೆ.
ಈ ಮುನ್ನ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹಾಗೂ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ ಅವರು ಕೂಡ ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾತನಾಡಿದ್ದ ವೈಕೊ, "ಶ್ರೀಲಂಕಾದಲ್ಲಿ ನಡೆದಿರುವುದು ನಾಗರಿಕ ಯುದ್ಧವಲ್ಲ, ನರಮೇಧ. 1.37 ಲಕ್ಷ ಶ್ರೀಲಂಕಾ ತಮಿಳರನ್ನು ಕೊಲ್ಲಲಾಗಿತ್ತು. ಶಾಲೆ ಹಾಗೂ ಆಸ್ಪತ್ರೆಗಳ ಮೇಲೆ ಬಾಂಬ್ ಹಾಕಲಾಗಿತ್ತು. 2009ರಲ್ಲಿ ಶ್ರೀಲಂಕಾ ಸರ್ಕಾರ ತಮಿಳರನ್ನು ಹಸಿವಿನಿಂದ ಸಾಯುವಂತೆ ಮಾಡಿತ್ತು. ಶ್ರೀಲಂಕಾದಲ್ಲಿ ತಮಿಳರ ನರಳುವಿಕೆಯನ್ನು ಕೊನೆ ಮಾಡಲು ಅಂತರರಾಷ್ಟ್ರೀಯ ಸಂಸ್ಥೆಯೂ ಮಧ್ಯ ಪ್ರವೇಶಿಸಲಿಲ್ಲ" ಎಂದು ಆರೋಪಿಸಿದ್ದರು.

ನಾಲ್ಕು ದಿನಗಳ ಹಿಂದೆ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವೇದಿಕೆಯ 46ನೇ ಅಧಿವೇಶನದಲ್ಲಿ ಶ್ರೀಲಂಕಾ ತಮಿಳರ ರಕ್ಷಣೆಗೆ ಯುಎನ್ಎಚ್ಆರ್ಸಿ ನಿರ್ಣಯ ತೆಗೆದುಕೊಂಡಿತ್ತು. ನಿರ್ಣಯಕ್ಕೆ ಮತದಾನ ನಡೆದಿದ್ದು, ಶ್ರೀಲಂಕಾ ವಿದೇಶಾಂಗ ವ್ಯವಹಾರ ಕಾರ್ಯದರ್ಶಿ ಜಯನಾಥ್ ಕೋಲಂಬಕೆ, ಈ ವಿಷಯದಲ್ಲಿ ಭಾರತ ಶ್ರೀಲಂಕಾ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಬಹುದು ಎಂದು ಹೇಳಿದ್ದರು. ಅವರ ಹೇಳಿಕೆಯಂತೆ ಭಾರತ ಸರ್ಕಾರ ರಾಯಭಾರಿ ಮತದಾನದ ಅಧಿವೇಶನದಿಂದ ಹೊರ ನಡೆದು ಮತದಾನದಿಂದ ದೂರವುಳಿದಿದ್ದರು.
ಈ ನಡೆ ಭಾರತ ಸರ್ಕಾರ ಶ್ರೀಲಂಕಾ ತಮಿಳರಿಗೆ ವಿಶ್ವಾಸಾಘಾತ ಮಾಡಿದ್ದನ್ನು ತೋರುತ್ತದೆ. ತಮಿಳುನಾಡಿನಲ್ಲಿ ಚುನಾವಣೆ ಇದೆ ಎಂಬ ಕಾರಣಕ್ಕೆ ಮತದಾನ ಮಾಡದೇ ಹೊರನಡೆಯಲಾಗಿದೆ. ಇಲ್ಲದೇ ಇದ್ದಿದ್ದರೆ ಭಾರತ ಶ್ರೀಲಂಕಾ ಸರ್ಕಾರದ ಪರ ನಿಲ್ಲುತ್ತಿತ್ತು. ಈ ನಡೆಯನ್ನು ಖಂಡಿಸುತ್ತೇನೆ ಎಂದು ವೈಕೊ ಹೇಳಿದ್ದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವೇದಿಕೆ ತೆಗೆದುಕೊಂಡಿರುವ ನಿರ್ಣಯಕ್ಕೆ ಭಾರತ ಸೇರಿದಂತೆ 13 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ. 47ರಲ್ಲಿ 22 ಸದಸ್ಯರು ನಿರ್ಣಯದ ಪರ ಮತ ಚಲಾಯಿಸಿದ್ದಾರೆ.












Click it and Unblock the Notifications