ಚೆನ್ನೈ ಮೃಗಾಲಯದಲ್ಲಿ ಮತ್ತೊಂದು ಸಿಂಹ ಕೋವಿಡ್ಗೆ ಬಲಿ
ಚೆನ್ನೈ, ಜೂ.16: ಚೆನ್ನೈನ ಹೊರವಲಯದಲ್ಲಿರುವ ವಂದಲೂರು ಮೃಗಾಲಯದಲ್ಲಿ ಒಂದು ಗಂಡು ಸಿಂಹವು ಕೋವಿಡ್ -19 ನಿಂದ ಬುಧವಾರ ಬೆಳಿಗ್ಗೆ ಮೃತಪಟ್ಟಿದೆ ಎಂದು ವರದಿಯಾಗಿದೆ. 12 ವರ್ಷದ ಪಥಬನಾಥನ್ ಎಂಬ ಸಿಂಹಕ್ಕೆ ಜೂನ್ 3 ರಂದು ಕೊರೊನಾ ಸೋಂಕು ದೃಢಪಟ್ಟಿತ್ತು.
ಈ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ವಂದಲೂರಿನ ಅರಿಗ್ನಾರ್ ಅನ್ನಾ ಝೂಲಾಜಿಕಲ್ ಪಾರ್ಕ್, ''ಜೂನ್ 3 ರಂದು ಕೊರೊನಾ ಸೋಂಕು ದೃಢಪಟ್ಟಿದ್ದ ಸಿಂಹ ಪಥಬನಾಥನ್ ಜೂನ್ 16 ರಂದು ಬೆಳಿಗ್ಗೆ 10: 15 ರ ಸುಮಾರಿಗೆ ಮೃತಪಟ್ಟಿದೆ,'' ಎಂದು ತಿಳಿಸಿದೆ.
ಭೋಪಾಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್ಐಹೆಚ್ಎಸ್ಎಡಿ) ನ ವರದಿಯ ಪ್ರಕಾರ, ''ಈ ಸಿಂಹದ ಮಾದರಿಯನ್ನು ಪರೀಕ್ಷಿಸಿದಾಗ ಕೊರೊನಾ ಸೋಂಕು ದೃಢಪಟ್ಟಿದ್ದು ಆ ಬಳಿಕ ಚಿಕಿತ್ಸೆ ನೀಡಲಾಗಿದೆ. ಆದರೆ ಸಿಂಹ ಸಾವನ್ನಪ್ಪಿದೆ,'' ಎಂದು ಹೇಳಿದೆ.

ಪಥಬನಾಥನ್ ಈ ವೈರಸ್ಗೆ ಬಲಿಯಾದ ಎರಡನೇ ಏಷ್ಯಾಟಿಕ್ ಸಿಂಹ. ಒಂಬತ್ತು ವರ್ಷದ ಹೆಣ್ಣು ಸಿಂಹ ಜೂನ್ 3 ರಂದು ಮೃಗಾಲಯದಲ್ಲಿ ಸಾವನ್ನಪ್ಪಿದೆ. ಹೈದರಾಬಾದ್ನಲ್ಲಿನ ನೆಹರೂ ಮೃಗಾಲಯದಲ್ಲಿನ ಎಂಟು ಸಿಂಹಗಳಿಗೆ ಕೊರೊನಾ ಸೋಂಕು ತಗುಲಿತ್ತು. ಭಾರತದಲ್ಲಿ ಮೊದಲ ಬಾರಿಗೆ ಪ್ರಾಣಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು.
ಮೇ 26 ರಂದು ವಂದಲೂರಿನ ಮೃಗಾಲಯವು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮೃಗಾಲಯದ ಸಫಾರಿ ಪಾರ್ಕ್ ಪ್ರದೇಶದಲ್ಲಿ ಐದು ಸಿಂಹಗಳನ್ನು ಇರಿಸಲಾಗಿದ್ದು, ಆ ಸಿಂಹಗಳಿಗೆ ಹಸಿವು ಕಡಿಮೆ, ಆಗಾಗೇ ಕೆಮ್ಮು ಕಂಡುಬಂದಿದೆ. ತಕ್ಷಣ ಮೃಗಾಲಯಕ್ಕೆ ಪಶುವೈದ್ಯಕೀಯ ತಂಡವು ಬಂದು 11 ಸಿಂಹಗಳ ರಕ್ತದ ಮಾದರಿಗಳು, ಮೂಗಿನ ಸ್ವ್ಯಾಬ್, ಗುದನಾಳದ ಸ್ವ್ಯಾಬ್ ಮತ್ತು ಮಲ ಮಾದರಿಗಳನ್ನು ಸಂಗ್ರಹಿಸಿ ಮಧ್ಯಪ್ರದೇಶದ ಭೋಪಾಲ್ನ ರಾಷ್ಟ್ರೀಯ ಭದ್ರತಾ ರೋಗಗಳ ಸಂಸ್ಥೆಗೆ (ಎನ್ಐಎಚ್ಎಸ್ಎಡಿ) ಕಳುಹಿಸಿತ್ತು. ಈ 11 ಮಾದರಿಗಳಲ್ಲಿ ಒಂಬತ್ತು ಮಾದರಿಗಳು ಪಾಸಿಟಿವ್ ಆಗಿದ್ದವು.
ಸಿಂಹಗಳಿಗೆ ಕೊರೊನಾ ದೃಢಪಟ್ಟಿದೆ ಎಂಬ ವರದಿಗಳ ಬೆನ್ನಲ್ಲೇ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬುಧವಾರ ವಂದಲೂರಿನ ಅರಿಗ್ನಾರ್ ಅನ್ನಾ ಝೂಲಾಜಿಕಲ್ ಪಾರ್ಕ್ಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಸೋಂಕಿತ ಸಿಂಹಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ರೋಗ ನಿರೋಧಕ ಔಷಧಿಗಳನ್ನು ನೀಡಲಾಗುತ್ತಿದೆ.
ಸೋಂಕಿತ ಸಿಂಹಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಪರಿಸರ ಮತ್ತು ಅರಣ್ಯ ಇಲಾಖೆ ಮತ್ತು ಮೃಗಾಲಯದ ಅಧಿಕಾರಿಗಳಿಗೆ ತಮಿಳುನಾಡಿನ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎಂ.ಕೆ.ಸ್ಟಾಲಿನ್ ನಿರ್ದೇಶನ ನೀಡಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications