ಶಶಿಕಲಾಗೆ ಸ್ವಾಗತ ಕೋರಿ ಬ್ಯಾನರ್; ಸದಸ್ಯನ ಉಚ್ಚಾಟನೆ ಮಾಡಿದ ಎಐಎಡಿಎಂಕೆ
ಚೆನ್ನೈ, ಜನವರಿ 27: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ನಾಲ್ಕು ವರ್ಷಗಳ ಜೈಲುವಾಸ ಅನುಭವಿಸಿ ಬುಧವಾರ ತಮಿಳುನಾಡಿನ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ನಟರಾಜನ್ ಬಿಡುಗಡೆಯಾಗಿದ್ದಾರೆ. ಈ ಸಂದರ್ಭ ಅವರಿಗೆ ಸ್ವಾಗತ ಕೋರಿ ಬ್ಯಾನರ್ ಹಾಕಿದ್ದಕ್ಕೆ ಎಐಎಡಿಎಂಕೆ ಸದಸ್ಯರೊಬ್ಬರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಶಶಿಕಲಾ ಅವರ ಬ್ಯಾನರ್ ಹಾಕಿದ್ದಕ್ಕೆ ತಿರುನೆಲ್ವೆಲಿಯ ಎಂಜಿಆರ್ ಮಕ್ಕಳ್ ಮಂದ್ರಮ್ ಜಿಲ್ಲಾ ಉಪ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ರಾಜಾ ಅವರನ್ನು ಉಚ್ಚಾಟನೆ ಮಾಡಲಾಗಿದೆ.
ನಾಲ್ಕು ವರ್ಷದಿಂದ ಜೈಲುವಾಸ ಅನುಭವಿಸಿರುವ ಶಶಿಕಲಾ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದು, ಇಂದು ಚೆನ್ನೈಗೆ ಮರಳಲಿದ್ದರು. ಅವರಿಗೆ ಸ್ವಾಗತ ಕೋರಿ ಸುಬ್ರಹ್ಮಣ್ಯ ಬ್ಯಾನರ್ ಹಾಕಿದ್ದರು. ಆ ಬ್ಯಾನರ್ ನಲ್ಲಿ ಶಶಿಕಲಾ ಅವರ ಚಿತ್ರದೊಂದಿಗೆ ಮಾಜಿ ಸಿಎಂ ಜಯಲಲಿತಾ, ಎಂಜಿಆರ್, ಸಿಎನ್ ಅಣ್ಣಾದೊರೈ, ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರ ಚಿತ್ರವನ್ನು ಹಾಕಲಾಗಿತ್ತು. ತಮ್ಮ ಚಿತ್ರವನ್ನೂ ಸುಬ್ರಹ್ಮಣ್ಯ ರಾಜಾ ಹಾಕಿಕೊಂಡಿದ್ದರು.

"ಮುಂದೆ ಎಐಡಿಎಂಕೆ ನೇತೃತ್ವ ವಹಿಸಲಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರಿಗೆ ಸ್ವಾಗತ" ಎಂದು ಬ್ಯಾನರ್ ನಲ್ಲಿ ಬರೆಯಲಾಗಿತ್ತು.
ಈ ಸಂಗತಿಯಿಂದ ಆಕ್ರೋಶಗೊಂಡಿರುವ ಪಕ್ಷದ ಹೈಕಮಾಂಡ್ ಸುಬ್ರಹ್ಮಣ್ಯ ಅವರಿಗೆ ನೋಟೀಸ್ ನೀಡಿದೆ. ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಪಕ್ಷದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದೀರಿ. ಈ ಕಾರಣ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ನೋಟೀಸ್ ನಲ್ಲಿ ತಿಳಿಸಿದೆ.
2017ರಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ನಟರಾಜನ್ ಹಾಗೂ ಅವರ ಆಪ್ತೆ ಇಳವರಸಿ ಸೇರಿ ನಾಲ್ವರಿಗೆ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 2017ರಲ್ಲೇ ಎಐಎಡಿಎಂಕೆ ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.












Click it and Unblock the Notifications