ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಮೇಲೆ ಎಫ್ಐಆರ್
ಚುನಾವಣಾ ಆಯೋಗದಿಂದ ಎಐಎಡಿಎಂಕೆ ಪಕ್ಷದ 'ಎರಡೆಲೆ'ಗಳ ಗುರುತು ಪಡೆದುಕೊಳ್ಳಲು ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ಗೆ ದಿನಕರನ್ ಲಂಚ ನೀಡಿದ್ದಾರೆ ಎನ್ನಲಾಗಿದೆ.
ನವದೆಹಲಿ, ಏಪ್ರಿಲ್ 17: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ವಿರುದ್ಧ ನವದೆಹಲಿಯಲ್ಲಿ ಎಫ್ಐಆರ್ ದಾಖಲಾಗಿದೆ. ಎಐಎಡಿಎಂಕೆ ಪಕ್ಷದ 'ಎರಡೆಲೆಯ' ಗುರುತು ಪಡೆಯಲು ಲಂಚ ನೀಡಿದ ಆರೋಪ ದಿನಕರನ್ ಮೇಲಿದೆ.
ಚುನಾವಣಾ ಆಯೋಗದಿಂದ ಎಐಎಡಿಎಂಕೆ ಪಕ್ಷದ 'ಎರಡೆಲೆ'ಗಳ ಗುರುತು ಪಡೆದುಕೊಳ್ಳಲು ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ಗೆ ದಿನಕರನ್ ಲಂಚ ನೀಡಿದ್ದಾರೆ ಎನ್ನಲಾಗಿದೆ.[ಶರತ್ ಕುಮಾರ್ ಆಯ್ತು, ಅವರ ಪತ್ನಿ ರಾಧಿಕಾ ಕಚೇರಿ ಮೇಲೆ ಐಟಿ ದಾಳಿ]
ಈ ಹಿಂದೆ ಎಐಎಡಿಎಂಕೆ ಪಕ್ಷ ಇಬ್ಭಾಗವಾದ ನಂತರ ಪಕ್ಷದ ಎರಡು ಎಲೆಗಳ ಚಿನ್ಹೆಯನ್ನು ಚುನಾವಣಾ ಆಯೋಗ ತಡೆ ಹಿಡಿದಿತ್ತು. ಇದೀಗ ಈ ಚಿನ್ಹೆ ಪಡೆದುಕೊಳ್ಳಲು ಎಐಎಡಿಎಂಕೆ ಪಕ್ಷದಿಂದ ಒಡೆದ ಎರಡೂ ಬಣಗಳು ಪ್ರಯತ್ನ ನಡೆಸುತ್ತಿವೆ. ಈ ಸಂದರ್ಭದಲ್ಲಿ ಚಿನ್ಹೆ ಪಡೆಯಲು ಶಶಿಕಲಾ ಸಂಬಂಧಿಯೂ ಆಗಿರುವ ದಿನಕರನ್ ಲಂಚ ನೀಡಿದ ಆರೋಪ ಎದುರಿಸುತ್ತಿದ್ದಾರೆ.
ಭಾನುವಾರ ರಾತ್ರಿ ಹ್ಯಾಟ್ ಹೊಟೇಲಿನಿಂದ ಪೊಲೀಸರು ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ರನ್ನು ಬಂಧಿಸಿದ ನಂತರ ಆತನ ಹೇಳಿಕೆ ಮೇಲೆ ಈ ಎಫ್ಐಆರ್ ದಾಖಲಿಸಲಾಗಿದೆ.[ಭ್ರಷ್ಟಾಚಾರ ತಾಂಡವ, ಆರ್ ಕೆ ನಗರ ಉಪಚುನಾವಣೆ ರದ್ದು!]
ಈಗಾಗಲೇ ದಿನಕರನ್ ಮೇಲೆ ಎಫ್ಐಆರ್ ದಾಖಲಿಸುತ್ತಿದ್ದಂತೆ ಪಕ್ಷದಲ್ಲಿ ಬಿಕ್ಕಟ್ಟು ಮತ್ತಷ್ಟು ಉಲ್ಭಣಿಸಿದೆ. ಈಗಾಗಲೇ ಒಂದು ಪಂಗಡದ ಸಚಿವರುಗಳು ದಿನಕರನ್ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಎಫ್ಐಆರ್ ದಾಖಲಾಗಿರುವುದರಿಂದ ಈ ಕೂಗು ಮತ್ತಷ್ಟು ಪ್ರಬಲಗೊಳ್ಳುವ ಸಾಧ್ಯತೆ ಇದೆ.
ಇನ್ನು ಎಫ್ಐಆರ್ ಕುರಿತು ಪ್ರತಿಕ್ರಿಯೆ ನೀಡಿರುವ ಟಿಟಿವಿ ದಿನಕರನ್ ನನಗೆ ಸುಖೇಶ್ ಚಂದ್ರಶೇಖರ್ ಯಾರೆಂದೇ ನನಗೆ ಪರಿಚಯ ಇಲ್ಲ ಎಂದು ಹೇಳಿದ್ದಾರೆ.