ಎಐಎಡಿಎಂಕೆ ಪಕ್ಷದೊಳಗೆ ವಕ್ಕರಿಸಿಕೊಂಡು ಬಿಟ್ಟ ಶಶಿಕಲಾ ಸಂಬಂಧಿಗಳು!
ಇವತ್ತು ತಮಿಳುನಾಡು ಮತ್ತು ಎಐಎಡಿಎಂಕೆ ಪಕ್ಷದಲ್ಲಿ ದಿವಂಗತ ಜಯಲಲಿತಾ ಉತ್ತರಾಧಿಕಾರಿ ಎಂಬಂತೆ ಶಶಿಕಲಾ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಇದೇ ಶಶಿಕಲಾ ಜಯಲಲಿತಾ ನಿರ್ಧಾರವನ್ನೇ ಧಿಕ್ಕರಿಸಿ ಮುನ್ನಡೆದಿದ್ದಾರೆ.
ಚೆನ್ನೈ, ಫೆಬ್ರವರಿ 15: ಇವತ್ತು ತಮಿಳುನಾಡು ಮತ್ತು ಎಐಎಡಿಎಂಕೆ ಪಕ್ಷದಲ್ಲಿ ದಿವಂಗತ ಜಯಲಲಿತಾ ಉತ್ತರಾಧಿಕಾರಿ ಎಂಬಂತೆ ಶಶಿಕಲಾ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಇದೇ ಶಶಿಕಲಾ ಜಯಲಲಿತಾ ನಿರ್ಧಾರವನ್ನೇ ಧಿಕ್ಕರಿಸಿ ಮುನ್ನಡೆದಿದ್ದಾರೆ.
ಜಯಲಲಿತಾ ಪಕ್ಷದಿಂದ ಉಚ್ಛಾಟನೆ ಮಾಡಿದ್ದ ತಮ್ಮ ಸೋದರಳಿಯ ಟಿಟಿವಿ ದಿನಕರನ್ ರನ್ನು ಶಶಿಕಲಾ ಮತ್ತೆ ಪಕ್ಷಕ್ಕೆ ಕರೆಸಿಕೊಂಡಿದ್ದಾರೆ. ಅವರನ್ನು ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇನ್ನೊಂದು ಕಡೆ ಶಶಿಕಲಾ ಸಂಬಂಧಿ ವೆಂಕಟೇಶನ್ ರನ್ನೂ ಪಕ್ಷಕ್ಕೆ ಕರೆ ತರಲಾಗಿದೆ. ಹೀಗೆ ಶಶಿಕಲಾ ಪಕ್ಷವನ್ನೇ ತಮ್ಮ ಕುಟುಂಬ ಮಾಡಿಕೊಳ್ಳಲು ಹೊರಟಿದ್ದಾರೆ.[ಶಶಿಕಲಾಗೆ ಜ್ಯೋತಿಷಿ ಹೇಳಿದ್ದ ಭವಿಷ್ಯದ ಕತೆ ಏನಾಯ್ತು?]
ವಿಶೇಷ ಎಂದರೆ ಟಿಟಿವಿ ದಿನಕರನ್ ಮತ್ತು ವೆಂಕಟೇಶನ್ ರನ್ನು 2011ರಲ್ಲಿ ಸ್ವತಃ ಜಯಲಲಿತಾ ಪಕ್ಷದಿಂದ ಉಚ್ಛಾಟಿಸಿದ್ದರು. ಅವತ್ತಿನಿಂದಲೇ ಪಕ್ಷದಿಂದ ಹೊರಗುಳಿದಿದ್ದ ಇವರನ್ನೆಲ್ಲಾ ಜಯಾ ಸಾವಿಗೀಡಾಗುತ್ತಿದ್ದಂತೆ ಮತ್ತೆ ಮರಳಿ ಪಕ್ಷಕ್ಕೆ ಕರೆಸಿಕೊಂಡಿದ್ದಾರೆ ಶಶಿಕಲಾ. ಅವರೆಲ್ಲರಿಂದ ಕ್ಷಮಾಪಣೆಯೊಂದನ್ನು ಬರೆಸಿಕೊಂಡು ಶಶಿಕಲಾ ಮತ್ತೆ ಪಕ್ಷದಲ್ಲಿ ಜಾಗ ಕೊಡಿಸಿದ್ದಾರೆ.[ಚಿನ್ನಮ್ಮ ಮುಂದಿರುವ ಅಂತಿಮ 4 ಆಯ್ಕೆಗಳಿವು..]
ಇವತ್ತು ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನಲ್ಲಿ ದಿನಕರನ್ ಪಾಲೂ ದೊಡ್ಡದಿದೆ. ಶಶಿಕಲಾ ಬಲಗೈ ಬಂಟನಂತೆ ದಿನಕರನ್ ಗುರುತಿಸಿಕೊಂಡಿದ್ದಾರೆ. ತಮಗೆ ಬಹುಮತ ಇದೆ ಎಂದು ಶಶಿಕಲಾ ರಾಜಭವನಕ್ಕೆ ಪತ್ರ ಕೊಡಲು ಹೋದಾಗಲೂ ಅವರಿಗೆ ಸಾಥ್ ನೀಡಿದ್ದು ಇದೇ ದಿನಕರನ್.
ಶಶಿಕಲಾ ಸಹೋದರಿ ವನಿತಾಮಣಿ ಮಗನಾಗಿರುವ ದಿನಕರನ್ ರಾಜ್ಯ ಸಭೆ ಹಾಗೂ ಲೋಕಸಭೆಯ ಸದಸ್ಯರೂ ಆಗಿದ್ದರು. 2011ರ ಡಿಸೆಂಬರಿನಲ್ಲಿ ಶಶಿಕಲಾ ಸೇರಿ ಅವರ 12 ಜನ ಆಪ್ತರನ್ನು ಉಚ್ಚಾಟನೆ ಮಾಡುವಾಗ ದಿನಕರನ್ ಹಾಗೂ ಶಶಿಕಲಾ ಗಂಡ ನಟರಾಜನ್ ರನ್ನೂ ಪಕ್ಷದಿಂದ ಹೊರಹಾಕಲಾಗಿತ್ತು. ನಂತರದ ದಿನಗಳಲ್ಲಿ ಶಶಿಕಲಾರನ್ನು ಮತ್ತೆ ಒಳಗೆ ಕರೆಸಿಕೊಳ್ಳಲಾಯಿತಾದರೂ ದಿನಕರನ್ ಹೊರಗೇ ಉಳಿದು ಬಿಟ್ಟಿದ್ದರು.