ಪ್ರಾಕೃತಿಕ ವಿಕೋಪ; 5 ರಾಜ್ಯಗಳಿಗೆ ಹೆಚ್ಚುವರಿ 3,113 ಕೋಟಿ ರೂ ನೆರವು
ನವದೆಹಲಿ, ಫೆಬ್ರುವರಿ 13: 2020ರಲ್ಲಿ ಪ್ರಾಕೃತಿಕ ವಿಕೋಪಗಳನ್ನು ಹಾಗೂ ಕೀಟ ದಾಳಿಯನ್ನು ಎದುರಿಸಿದ್ದ ಐದು ರಾಜ್ಯಗಳಿಗೆ 3,113 ಕೋಟಿ ರೂಪಾಯಿ ನೆರವು ನೀಡಲು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಶನಿವಾರ ಉನ್ನತ ಮಟ್ಟದ ಸಮಿತಿ ಸಭೆ ನಡೆದಿದ್ದು, ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್ಡಿಆರ್ಎಂಎಫ್) ಇಂದ ಆಂಧ್ರ ಪ್ರದೇಶ, ಬಿಹಾರ, ತಮಿಳುನಾಡು, ಪುದುಚೆರಿ ಹಾಗೂ ಮಧ್ಯಪ್ರದೇಶಕ್ಕೆ ಹೆಚ್ಚುವರಿ ನೆರವು ದೊರೆಯಲಿರುವುದಾಗಿ ಗೃಹ ಸಚಿವಾಲಯ ಹೇಳಿಕೆ ಪ್ರಕಟಿಸಿದೆ.
Unforgettable 2020; ವಿಶ್ವವನ್ನು ನಲುಗಿಸಿದ ಪ್ರಾಕೃತಿಕ ವಿಕೋಪಗಳು
ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, 2020ರಲ್ಲಿ ಪ್ರವಾಹ, ಚಂಡಮಾರುತ (ನಿವಾರ್ ಹಾಗೂ ಬುರೇವಿ), ಕೀಟದಾಳಿ ಎದುರಿಸಿದ ಐದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಹೆಚ್ಚುವರಿ ನೆರವು ನೀಡಲಾಗುತ್ತಿದೆ. ಪ್ರವಾಹ ಪರಿಸ್ಥಿತಿ ಎದುರಿಸಿದ್ದ ಆಂಧ್ರ ಪ್ರದೇಶಕ್ಕೆ 280.78 ಕೋಟಿ ರೂ, ಬಿಹಾರಕ್ಕೆ 1,255.27 ಕೋಟಿ ರೂಪಾಯಿ ನೆರವು ಸಿಕ್ಕಿದೆ. ತಮಿಳುನಾಡಿಗೆ, ನಿವಾರ್ ಚಂಡಮಾರುತ ಪರಿಹಾರಕ್ಕೆ 63.14 ಕೋಟಿ ರೂ ಹಾಗೂ ಬುವೇರಿ ಚಂಡಮಾರುತ ಪರಿಹಾರಕ್ಕೆ 223.77 ಕೋಟಿ ರೂ ಸಿಕ್ಕಿದ್ದು, ಒಟ್ಟಾರೆ 286.91 ಕೋಟಿ ರೂಪಾಯಿ ದೊರೆತಿದೆ.
ನಿವಾರ್ ಚಂಡಮಾರುತದ ಪರಿಣಾಮ ಬೀರಿದ್ದ ಕೇಂದ್ರಾಡಳಿತ ಪ್ರದೇಶ ಪುದುಚೆರಿಗೆ 9.91 ಕೋಟಿ ರೂಪಾಯಿ ದೊರೆತಿದೆ. ಮಿಡತೆ ದಾಳಿಯಿಂದ ಕೃಷಿ ನಷ್ಟಕ್ಕೆ ತುತ್ತಾಗಿದ್ದ ಮಧ್ಯ ಪ್ರದೇಶಕ್ಕೆ 1,280.18 ಕೋಟಿ ರೂ ನೆರವು ಸಿಕ್ಕಿದೆ.