ಪಂಜಾಬ್ ಚುನಾವಣೆ: ಸಕ್ರಿಯ ಚುನಾವಣಾ ರಾಜಕೀಯ ತೊರೆದ ಕಾಂಗ್ರೆಸ್ನ ಸುನಿಲ್ ಜಾಖರ್?
ಚಂಡೀಗಢ, ಫೆಬ್ರವರಿ 06: ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಫೆಬ್ರವರಿ 6 ರಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸುವ ಕೆಲವೇ ಗಂಟೆಗಳ ಮೊದಲು, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಜಾಖರ್ ಸಕ್ರಿಯ ಚುನಾವಣಾ ರಾಜಕೀಯದಿಂದ ಹೊರಬರುವುದಾಗಿ ಘೋಷಿಸಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ.
"ಸಕ್ರಿಯ ಚುನಾವಣಾ ರಾಜಕೀಯವನ್ನು ತ್ಯಜಿಸಲು ನಿರ್ಧರಿಸಿದ್ದೇನೆ, ಆದರೆ ಕಾಂಗ್ರೆಸ್ಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ," ಎಂದು ಭಾನುವಾರ ದಿ ಹಿಂದೂಗೆ ಮಾಹಿತಿ ನೀಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. "ಪಕ್ಷದಲ್ಲಿ ಕೆಲವು ಸಹೋದ್ಯೋಗಿಗಳಿದ್ದಾರೆ. ಅವರೊಂದಿಗೆ ರಾಜಕೀಯ ಜೀವನ ಕಷ್ಟವಾಗಿದೆ. ಈ ಕಾರಣದಿಂದಾಗಿ ನಾನು ಚುನಾವಣಾ ರಾಜಕೀಯ ತ್ಯಜಿಸುತ್ತಿದ್ದೇನೆ," ಎಂದು ತಿಳಿಸಿದ್ದಾರೆ.
"ನನಗೆ ಸಾಕಾಗಿತ್ತು. ಆದರೆ ನಾನು ಕಾಂಗ್ರೆಸ್ ಪಕ್ಷದ ತುಂಬಾ ಭಾಗವಾಗಿದ್ದೇನೆ. ಪಕ್ಷ ನನಗೆ ಯಾವ ಕರ್ತವ್ಯವನ್ನು ನೀಡಿದ್ದರೂ ನಾನು ನಿರ್ವಹಿಸುತ್ತೇನೆ. ನಾನು ಸಕ್ರಿಯ ಚುನಾವಣಾ ರಾಜಕೀಯವನ್ನು ಮಾತ್ರ ತ್ಯಜಿಸುತ್ತಿದ್ದೇನೆ," ಎಂದು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. ಫೆಬ್ರವರಿ 6 ರಂದು ಲುಧಿಯಾನದಲ್ಲಿ ತಮ್ಮ ವರ್ಚುವಲ್ ರ್ಯಾಲಿಯಲ್ಲಿ ರಾಹುಲ್ ಗಾಂಧಿಯವರು ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿದ್ದಾರೆ. ಈ ನಡುವೆ ಸುನಿಲ್ ಜಾಖರ್ ಚುನಾವಣಾ ರಾಜಕೀಯ ತೊರೆಯುವ ಸುದ್ದಿ ಬಂದಿದೆ.

ವರದಿಯನ್ನು ತಿರಸ್ಕರಿಸಿದ ಸುನಿಲ್ ಜಾಖರ್
ಈ ನಡುವೆ ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಸುನಿಲ್ ಜಾಖರ್ ಪಕ್ಷದಿಂದ ಹೊರಗುಳಿಯಲಿದ್ದಾರೆ ಎಂದು ಕೂಡಾ ವರದಿ ಆಗಿದೆ. ಈ ವರದಿಗಳನ್ನು ಸುನಿಲ್ ಜಾಖರ್ ತಳ್ಳಿಹಾಕಿದ್ದಾರೆ. ಹಾಗೆಯೇ ಈ ಸುದ್ದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾನು ಇನ್ನೂ ಕಾಂಗ್ರೆಸ್ನ ಭಾಗವಾಗಿದ್ದೇನೆ ಎಂದು ಸ್ಪಷ್ಟಣೆ ನೀಡಿದ್ದಾರೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸದ ಕಾರಣ ವಿಧಾನಸಭಾ ಚುನಾವಣೆಗೆ ಸಕ್ರಿಯವಾಗಿ ಪ್ರಚಾರ ಮಾಡುತ್ತಿಲ್ಲ ಎಂದಿದ್ದಾರೆ.
ಹಿಂದೂವಾದ ಕಾರಣ ಸಿಎಂ ಅಭ್ಯರ್ಥಿಯಾಗಲು ಸಾಧ್ಯವಾಗಿಲ್ಲ ಎಂದಿದ್ದ ಸುನಿಲ್
''ನಾನು ಹಿಂದೂ ಎಂಬ ಕಾರಣಕ್ಕೆ ಸಿಎಂ ಅಭ್ಯರ್ಥಿಯಾಗಲು ಸಾಧ್ಯವಾಗಿಲ್ಲ'' ಎಂದು ಕಾಂಗ್ರೆಸ್ ಮುಖಂಡ ಸುನಿಲ್ ಜಾಖರ್ ಹೇಳಿದ್ದರು. "ದಲಿತ ಅಭ್ಯರ್ಥಿಯನ್ನು ಬೆಂಬಲಿಸುವುದು ಉತ್ತಮ ಆಯ್ಕೆಯಾಗಿದ್ದರೆ ಪಕ್ಷವು ಅವರನ್ನು ಬೆಂಬಲಿಸಲಿ. ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆದಷ್ಟು ಬೇಗ ನಿರ್ಧರಿಸಬೇಕು," ಎಂದು ಜಾಖರ್ ತಿಳಿಸಿದ್ದರು.
"ದೆಹಲಿಯಲ್ಲಿ ಸಲಹೆಗಾರರು ಸರಿಯಾದ ಸಲಹೆ ನೀಡುತ್ತಿಲ್ಲ. ನಾನು ಶಾಸಕನಾಗದ ಕಾರಣಕ್ಕೆ ಸಿಎಂ ಅಭ್ಯರ್ಥಿ ಮಾಡಲು ಆಗುವುದಿಲ್ಲ ಎಂದು ಹೇಳಿದರೆ ತಪ್ಪು ಎನಿಸುತ್ತಿರಲಿಲ್ಲ. ಆದರೆ ನಾನು ಪಂಜಾಬಿ ಹಿಂದೂ ಎಂಬ ಕಾರಣಕ್ಕಾಗಿ ತಿರಸ್ಕರಿಸಿರುವುದು ಸರಿಯಲ್ಲ ಅದರಿಂದ ನೀವು ಇಡೀ ಸಮುದಾಯವನ್ನು ಅಸಮಾಧಾನಗೊಳಿಸಿದ್ದೀರಿ. ಪಂಜಾಬ್ ಜಾತ್ಯತೀತ ರಾಜ್ಯ. ಆದರೆ ದೆಹಲಿಯಲ್ಲಿರುವ ಕಾಂಗ್ರೆಸ್ ಸಲಹೆಗಾರರು ಪಂಜಾಬ್ ಸಿಎಂ ಹುದ್ದೆಗೆ ಸಿಖ್ ಅಭ್ಯರ್ಥಿ ಸೂಕ್ತ ಎಂದು ಹೇಳಿರುವುದು ನನಗೆ ನೋವು ತಂದಿದೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕೆಲಸ ಮಾಡಲು ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿಗೆ ಅವಕಾಶ ನೀಡಬೇಕು," ಎಂದು ಕೂಡಾ ಸುನಿಲ್ ಜಾಖರ್ ಅಭಿಪ್ರಾಯಿಸಿದ್ದರು. ಇದಕ್ಕೆ ನವಜೋತ್ ಸಿಂಗ್ ಸಿಧು ತಿರುಗೇಟು ನೀಡಿದ್ದರು. "ಅವರು ಏನು ನಿರ್ಧರಿಸುತ್ತಾರೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಚನ್ನಿಜಿಗೆ ಅವಕಾಶ ನೀಡಲಾಗಿದೆ. ಚನ್ನಿಜಿಗೆ ಕೆಲಸ ಮಾಡಲು ಸಮಯ ನೀಡಬೇಕು ಎಂದು ನಾನು ಅಭಿಪ್ರಾಯಪಟ್ಟಿದ್ದೇನೆ. ಜನರು ಅವರನ್ನು ನೋಡಿದ್ದಾರೆ. ನಾಲ್ಕು ತಿಂಗಳಲ್ಲಿ ಒಳ್ಳೆಯ ಕೆಲಸ ಚನ್ನಿಜಿ ಮಾಡಿದ್ದಾರೆ," ಎಂದು ಪಂಜಾಬ್ ಮುಖ್ಯಮಂತ್ರಿಯನ್ನು ಸುನಿಲ್ ಜಾಖರ್ ಶ್ಲಾಘಿಸಿದ್ದರು. (ಒನ್ಇಂಡಿಯಾ ಸುದ್ದಿ)












Click it and Unblock the Notifications