'ಚನ್ನಿಯನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿದರೆ ಕಾಂಗ್ರೆಸ್ ಭವಿಷ್ಯ ಬದಲಾಗದು': ಬಿಜೆಪಿ
ಚಂಡೀಗಢ, ಫೆಬ್ರವರಿ 06: ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಕಾಂಗ್ರೆಸ್ ನಿರ್ಧಾರವು ಪಂಜಾಬ್ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ವ್ಯತ್ಯಾಸವನ್ನು ಉಂಟು ಮಾಡಲ್ಲ. ಕಾಂಗ್ರೆಸ್ನ ಭವಿಷ್ಯ ಬದಲಾಗಲ್ಲ," ಎಂದು ಬಿಜೆಪಿ ಭಾನುವಾರದಂದು ಪ್ರತಿಕ್ರಿಯಿಸಿದೆ.
ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಲುಧಿಯಾನದಲ್ಲಿ ತಮ್ಮ ವರ್ಚುವಲ್ ರ್ಯಾಲಿಯಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ನಿರೀಕ್ಷೆಯಂತೆ ಹಾಲಿ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಜಲಶಕ್ತಿ ಸಚಿವ ಮತ್ತು ಪಂಜಾಬ್ನ ಬಿಜೆಪಿ ಉಸ್ತುವಾರಿ ಗಜೇಂದ್ರ ಸಿಂಗ್ ಶೇಖಾವತ್, "ದುರಾಡಳಿತ, ಅತಿರೇಕದ ಭ್ರಷ್ಟಾಚಾರ ಮತ್ತು ಆಂತರಿಕ ಕಾರಣದಿಂದ ಕಾಂಗ್ರೆಸ್ ಪಾಳುಬಿದ್ದ ಸ್ಥಿತಿಯಲ್ಲಿದೆ. ಒಂದು ಪವಾಡ ಕೂಡ ಈಗ ಅದನ್ನು ಉಳಿಸಲು ಸಾಧ್ಯವಿಲ್ಲ," ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಆಂತರಿಕ ಕಲಹ ಇನ್ನಷ್ಟು ಹೆಚ್ಚಲಿದೆ ಎಂದ ಬಿಜೆಪಿ ಮುಖಂಡರು
"ಪಕ್ಷವು ಉದ್ಧಾರವಾಗದೆ ಅವನತಿ ಹೊಂದುತ್ತದೆ ಮತ್ತು ಯಾರನ್ನಾದರೂ ಸಿಎಂ ಅಭ್ಯರ್ಥಿ ಎಂದು ಘೋಷಿಸುವುದರಿಂದ ಕಾಂಗ್ರೆಸ್ ಪಕ್ಷವನ್ನು ಉದ್ಧಾರ ಮಾಡಲು ಆಗಲ್ಲ. ಭಾನುವಾರದ ಘೋಷಣೆಯ ನಂತರ ಪಕ್ಷದಲ್ಲಿನ ಆಂತರಿಕ ಕಲಹ ಮತ್ತಷ್ಟು ತೀವ್ರಗೊಳ್ಳಲಿದೆ," ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ವಿರೋಧ ಪಕ್ಷಗಳು ಮಾತ್ರವಲ್ಲ, ಕೆಲವು ಕಾಂಗ್ರೆಸ್ ನಾಯಕರು ಕೂಡ ಭ್ರಷ್ಟಾಚಾರದ ವಿಷಯವನ್ನು ಸಾರ್ವಜನಿಕವಾಗಿ ಎತ್ತುತ್ತಿದ್ದಾರೆ. ಒಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡುವುದರಿಂದ ಈ ಎಲ್ಲಾ ವರ್ಷಗಳಲ್ಲಿ ಪಕ್ಷದ ಲೋಪ ಮತ್ತು ಕಮಿಷನ್ನ ಪಾಪಗಳನ್ನು ತೊಳೆಯಲಾಗುವುದಿಲ್ಲ," ಎಂದು ಪಂಜಾಬ್ನ ಬಿಜೆಪಿ ಉಸ್ತುವಾರಿ ಗಜೇಂದ್ರ ಸಿಂಗ್ ಶೇಖಾವತ್ ಕಿಡಿಕಾರಿದರು.
ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್ಎಸ್) ಮೂಲಕ ಈ ಸಮೀಕ್ಷೆ ನಡೆದಿದೆ. ಮೊಬೈಲ್ ಸಂಪರ್ಕ ಹೊಂದಿರುವ ಸುಮಾರು 1.5 ಕೋಟಿ ಮತದಾರರಿಗೆ ಐವಿಆರ್ಎಸ್ ಸಂದೇಶವನ್ನು ಕಳುಹಿಸಿ ಅಭಿಪ್ರಾಯ ಸಂಗ್ರಹ ಮಾಡುವ ಮೂಲಕ ಕಾಂಗ್ರೆಸ್ ತನ್ನ ಸಿಎಂ ಅಭ್ಯರ್ಥಿಯನ್ನು ನಿರ್ಧಾರ ಮಾಡಿದೆ. ಫೆಬ್ರವರಿ 6 ರಂದು ಲುಧಿಯಾನದಲ್ಲಿ ತಮ್ಮ ವರ್ಚುವಲ್ ರ್ಯಾಲಿಯಲ್ಲಿ ರಾಹುಲ್ ಗಾಂಧಿಯವರು ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ.
"ಕೆಲವು ನಾಯಕರು ಸಮಾಜಕ್ಕಾಗಿ ಹೋರಾಡುತ್ತಾರೆ, ಇತರ ನಾಯಕರು ತಮಗಾಗಿ ಮಾತ್ರ ಹೋರಾಡುತ್ತಾರೆ. ಕೆಲವೇ ದಿನಗಳಲ್ಲಿ ನಾಯಕನ ರಚನೆಯಾಗುವುದಿಲ್ಲ. ನಾಯಕರು ಹೋರಾಟಗಳಿಂದ ಹುಟ್ಟುತ್ತಾರೆ. ಸಿದ್ದು, ಚನ್ನಿ, ಜಾಖರ್ ಎಲ್ಲರೂ ಕಷ್ಟಪಟ್ಟಿದ್ದಾರೆ, ಇದರಿಂದ ಕಲಿತಿದ್ದಾರೆ," ಎಂದು ಹೇಳಿದ್ದಾರೆ. "ಪಂಜಾಬ್ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಲು ನನ್ನಲ್ಲಿ ಹೇಳಲಾಯಿತು. ಆದರೆ ಇದು ಇದು ರಾಹುಲ್ ಗಾಂಧಿಯವರ ನಿರ್ಧಾರವಲ್ಲ ಪಂಜಾಬ್ನ ನಿರ್ಧಾರ," ಎಂದು ಕೂಡಾ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. 2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಶಿರೋಮಣಿ ಅಕಾಲಿದಳವು ಕೇವಲ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications